ಪ್ರತಿ ಮತಗಟ್ಟೆಯಲ್ಲಿ ಶೇ.70-80 ಮತ ಹಾಕಿಸಿ : ಬಿಎಸ್ವೈ ಕರೆ
Team Udayavani, Mar 2, 2019, 12:30 AM IST
ಬೆಂಗಳೂರು: ಲೋಕಸಭಾ ಚುನಾವಣೆ ಇನ್ನು ಏಳು ವಾರಗಳಲ್ಲಿ ಮುಗಿಯಲಿದ್ದು, ಕಾರ್ಯಕರ್ತರು ಪೂರ್ಣಾವಧಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಬೂತ್ ಮಟ್ಟದಿಂದ ಲೋಕಸಭಾ ಕ್ಷೇತ್ರ ಮಟ್ಟದವರೆಗೆ ಬಿಜೆಪಿ ಸೇರಲಿಚ್ಛಿಸುವ ಹಾಗೂ ತಟಸ್ಥರಾಗಿ ಉಳಿದಿರುವ ಮುಖಂಡರನ್ನು ಸಂಘಟಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ನಗರದಲ್ಲಿ ಶುಕ್ರವಾರ ಬೆಂಗಳೂರು ಕೇಂದ್ರ, ದಕ್ಷಿಣ, ಉತ್ತರ, ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರ ಪ್ರಮುಖರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 2000 ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಯಲ್ಲಿ ಶೇ.70-80ರಷ್ಟು ಮತಗಳನ್ನು ಬಿಜೆಪಿಗೆ ಹಾಕಿಸಲು ಕಾರ್ಯಕರ್ತರು ಮುಂದಾಗಬೇಕು. ಪರಿಶಿಷ್ಟ ಜಾತಿ,ಪಂಗಡ ಮೋರ್ಚಾ, ಮಹಿಳಾ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾ, ಯುವ ಮೋರ್ಚಾಗಳನ್ನು ಬಲಪಡಿಸಬೇಕು. ಎಲ್ಲರೂ ಒಂದಾಗಿ 7 ವಾರಗಳ ಕಾಲ ಕೆಲಸ ಮಾಡಿದರೆ ಗುರಿ ತಲುಪಬಹುದು. ಪ್ರಧಾನಿಯವರ ಅಪೇಕ್ಷೆಯಂತೆ 300 ಸ್ಥಾನ ಪಡೆಯಬೇಕಾದರೆ ನಾವು ರಾಜ್ಯದಲ್ಲಿ 22ಸ್ಥಾನ ಗೆಲ್ಲಲೇಬೇಕು ಎಂದರು.
ರಾಜ್ಯದಲ್ಲಿ 10 ಕ್ಷೇತ್ರಗಳ ಪ್ರವಾಸ ಮುಗಿಸಿದ್ದು, ತುಮಕೂರು, ಮೈಸೂರು ಕಡೆಗೆ ಹೋಗ ಲಿದ್ದೇನೆ.
ಚುನಾವಣೆ ಮುಗಿಯುವವರೆಗೆ ಮನೆಗೆ ಮರಳದೆ ಸಿದ್ಧತೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ಎಲ್ಲರೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪ ತೆಗೆದುಕೊಳ್ಳಬೇಕೆಂದು ಸಲಹೆನೀಡಿದರು.
ಬೈಕ್ ರ್ಯಾಲಿ: ಶನಿವಾರ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 1000 ಬೈಕ್ಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ರ್ಯಾಲಿ ನಡೆಸಿ ಕೇಂದ್ರ ಕಾರ್ಯಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಈ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾದರೆ ಗಿನ್ನಿಸ್ ದಾಖಲೆಯಾಗಲಿದೆ. ಹಾಗಾಗಿ ಎಲ್ಲ ಕಾರ್ಯಕರ್ತರು ಕ್ಷೇತ್ರಗಳಲ್ಲಿ 1000ಕ್ಕಿಂತ ಕಡಿಮೆ ಇಲ್ಲದಂತೆ ಬೈಕ್ ರ್ಯಾಲಿ ನಡೆಸಬೇಕು ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ರಾಜ್ಯದ 28 ಕ್ಷೇತ್ರಗಳ ಪೈಕಿ 22ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಾತಾವರಣವಿದ್ದು, ಅದಕ್ಕೆ ನಾವು ಸನ್ನದ್ಧರಾಗಬೇಕು ಎಂದರು.
ಅಭಿನಂದನ್ ಸಾಹಸ ಮೆಚ್ಚುವಂಥದ್ದು
ನಮ್ಮ ಹೆಮ್ಮೆಯ ಪೈಲಟ್ ಅಭಿನಂದನ್ ಅವರ ಸಾಹಸ ಮೆಚ್ಚುವಂಥದ್ದು. ಪ್ಯಾರಾಚೂಟ್ನಿಂದ ಇಳಿದಾಗ ತಮ್ಮಲ್ಲಿದ್ದ ದಾಖಲೆಗಳು ಸಿಗದಂತೆ ತಾವೇ ಹರಿದು ನುಂಗಿದ್ದು ದೇಶಭಕ್ತಿಯ ಗುಣ ಎಂದು ಬಿಎಸ್ವೈ ಹೇಳಿದರು. ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅಭಿನಂದನ್ ಅವರ ದೇಶಭಕ್ತಿಯನ್ನು ಇಡೀ ವಿಶ್ವವೇ ಕೊಂಡಾಡಿದೆ. ಅಭಿನಂದನ್ ಅವರನ್ನು ತಕ್ಷಣ ಬಿಡುಗಡೆ ಮಾಡದಿದ್ದರೆ ತಕ್ಕ ಶಾಸ್ತಿಯಾಗಲಿದೆ ಎಂಬುದಾಗಿ ಪ್ರಧಾನಿ ಮೋದಿ ಖಡಕ್ ಸಂದೇಶ ನೀಡುತ್ತಿದ್ದಂತೆ ಪಾಕ್ ಬಿಡುಗಡೆಗೆ ಮುಂದಾಗಿದೆ ಎಂದು ತಿಳಿಸಿದರು.