ವಾಟ್ಸಾಪ್ ಮೂಲಕ ಗಲಭೆಗೆ ಜನ ಸೇರಿಸಿದ್ದ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷನ ಬಂಧನ
Team Udayavani, Aug 17, 2020, 12:51 PM IST
ಬೆಂಗಳೂರು: ಕಾಡುಗೊಂಡನ ಹಳ್ಳಿ ಮತ್ತು ದೇವರ ಜೀವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಕಾರಣವಾದ ಆರೋಪಿಗಳ ಬೇಟೆಯನ್ನು ಸಿಸಿಬಿ ಪೊಲೀಸರು ಮುಂದುವರಿಸಿದ್ದು, ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ವಾಜಿದ್ ಪಾಷಾ ಎಂಬಾತನನ್ನು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರು ಕಳೆದ ರಾತ್ರಿ ದಾಳಿ ನಡೆಸಿ ವಾಜಿದ್ ಪಾಷಾನನ್ನು ಬಂಧಿಸಿದ್ದು, ಗಲಭೆಗೂ ಮುನ್ನ ಈತ ವ್ಯಾಟ್ಸಪ್ ಮೆಸೇಜ್, ಕಾಲ್ ಗಳ ಮೂಲಕ ಠಾಣೆಯ ಬಳಿ ಬರುವಂತೆ ಜನರನ್ನು ಪ್ರೇರೆಪಿಸಿದ್ದ, ಗುಂಪುನ್ನು ಒಗ್ಗೂಡಿಸಿದ್ದ ಎನ್ನಲಾಗಿದೆ. ಇದೇ ಆರೋಪದಡಿಯಲ್ಲಿ ಫೈರೋಜ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.
ವಾರಗಳ ಹಿಂದೆ ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧ ಈತ ಫೇಸ್ ಬುಕ್ ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಈ ಕುರಿತಾಗಿ ಶಾಸಕರ ಬೆಂಬಲಿಗರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ಸಂಧಾನ ನಡೆಸಿ, ಎರಡೂ ಕಡೆಯವರಿಗೆ ಬುದ್ದಿ ಹೇಳಿ ಕಳುಹಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಆಡಳಿತದ ಪಾಪದ ಫಲದಿಂದ ಪುಂಡರು ಮೆರೆಯುತ್ತಿದ್ದಾರೆ : ಡಿಸಿಎಂ ಕಾರಜೋಳ
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿ ನವೀನ್ ಫೇಸ್ ಬುಕ್ ಪೋಸ್ಟ್ ಸಂಬಂಧ ವಾಜಿದ್ ಪೊಲೀಸರಿಗೆ ದೂರು ನೀಡಿದ್ದ ಎನ್ನಲಾಗಿದೆ. ನವೀನ್ ನನ್ನು ಬಂಧಿಸಲು ತಡವಾಗಿದ್ದಕ್ಕೆ ಪೊಲೀಸರ ವಿರುದ್ಧ ರೇಗಾಡಿದ್ದ ಎಂದು ವರದಿಯಾಗಿದೆ.
ಎಸ್ ಡಿಪಿಯ ಕಚೇರಿ ಮೇಲೆ ದಾಳಿ: ಮಾರಕಾಸ್ತ್ರ ಪತ್ತೆ
ಶನಿವಾರ ರಾತ್ರಿ ಸಿಸಿಬಿ ಪೊಲೀಸರು ಬೆಂಗಳೂರಿನ ಎಸ್ ಡಿಪಿಐ ಕಚೇರಿಗೆ ದಾಳಿ ನಡೆಸಿದ್ದು, ಕಚೇರಿಯಲ್ಲಿ ಅವಿತುಕೊಂಡಿದ್ದ ಹತ್ತು ಮಂದಿಯನ್ನು ಬಂಧಿಸಲಾಗಿದೆ. ಜೊತೆಗೆ ಕಬ್ಬಿಣದ ರಾಡ್, ಬ್ಯಾಟ್ ಸೇರಿದಂತೆ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ಸಂಬಂಧ ಇದುವರೆಗೆ 394 ಜನರನ್ನು ಸಿಸಿಬಿ ಬಂಧಿಸಿದ್ದು, ತೀವ್ರ ತನಿಖೆ ಮುಂದುವರಿಯುತ್ತಿದೆ.