ದೆಹಲಿ ಫಲಿತಾಂಶ ನಮಗೆ ಮೊದಲೇ ಗೊತ್ತಿತ್ತು: ಸಿದ್ದರಾಮಯ್ಯ
Team Udayavani, Feb 12, 2020, 3:05 AM IST
ಬೆಂಗಳೂರು: ದೆಹಲಿ ಫಲಿತಾಂಶ ನಮಗೆ ಮೊದಲೇ ಗೊತ್ತಿತ್ತು. ಹಾಗಾಗಿ, ಅದರಿಂದ ನಮಗೇನೂ ನಷ್ಟವಿಲ್ಲ. ನಾವು ಕನಿಷ್ಠ ನಾಲ್ಕೈದು ಸೀಟು ಗೆಲ್ಲಬಹುದು ಅಂದುಕೊಂಡಿದ್ದೆವು. ಆದರೆ, ಜನ “ಆಪ್’ ಕೈ ಹಿಡಿದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷವನ್ನು ಮತ್ತೂಮ್ಮೆ ಅಧಿಕಾರಕ್ಕೆ ತರಬೇಕೆಂದು ದೆಹಲಿಯ ಜನ ಬಯಸಿದ್ದರು. ಅದರಂತೆ, ಕೇಜ್ರಿವಾಲ್ ಕೈ ಹಿಡಿದಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಎಲ್ಲಾ “ಸಂಪನ್ಮೂಲ’ಗಳನ್ನು ಹೊಂದಿದ್ದರೂ ಸೋಲು ಕಂಡಿದೆ. ಕೇಂದ್ರ ಸರ್ಕಾರ, ಪ್ರಧಾನಿ, ಸಂಸದರು ಹೀಗೆ ಎಲ್ಲರೂ ಇದ್ದರೂ ಅವರಿಗೆ ಗೆಲ್ಲಲು ಆಗಿಲ್ಲ. ಕಳೆದ ಲೋಕಸಭೆ ಚುನಾವಣೆ ಬಳಿಕದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಸೋತಿದೆ. ಒಂದೂ ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಒಳ್ಳೆಯ ಕೆಲಸ ಮಾಡಿದ್ದರು. ಮತ್ತೂಂದು ಜಿಡಿಪಿ ಕುಸಿತದಿಂದ ಜನ ಬೇಸತ್ತಿದ್ದರು. ಆದ್ದರಿಂದ ಮತದಾರರು ಆಪ್ ಕೈ ಹಿಡಿದಿದ್ದಾರೆ ಎಂದು ಹೇಳಿದರು.
ನಾವೇ ಮೇಲುಗೈ: ಕೆಲ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಒಟ್ಟು 167 ಸ್ಥಾನಗಳಲ್ಲಿ 69 ಕಾಂಗ್ರೆಸ್ ಗೆದ್ದಿದ್ದರೆ, ಬಿಜೆಪಿ 58 ಗೆದ್ದಿದೆ. ಚಿಕ್ಕಬಳ್ಳಾಪುರ, ಸಿರಗುಪ್ಪ ಸಿಂದಗಿ, ಹುಣಸೂರಿನಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಚಿಕ್ಕಬಳ್ಳಾಪುರದವರೊಬ್ಬರು ಈಚೆಗೆ ಮಂತ್ರಿ ಆಗಿದ್ದಾರೆ. ಅವರು ಏನು ಮಾಡಿದರೂ, ಅಲ್ಲಿ ವಕೌಟ್ ಆಗಿಲ್ಲ. ಹೊಸಕೋಟೆಯಲ್ಲಿ ನಮ್ಮವರಿಗೆ ಖರ್ಚು ಮಾಡುವ ಸಾಮರ್ಥಯವಿರಲಿಲ್ಲ. ಎಂ.ಟಿ.ಬಿ ನಾಗರಾಜ್ ಹಣ ಖರ್ಚು ಮಾಡಿದ್ದಾರೆ. ಹಾಗಾಗಿ, ಅಲ್ಲಿ ನಮಗೆ ಹಿನ್ನಡೆಯಾಗಿದೆ ಎಂದರು.