ರಾಜೀನಾಮೆ ನಿರ್ಧಾರಕ್ಕೆ ಸಿ.ಟಿ.ರವಿ ಸ್ವಾಗತ
Team Udayavani, May 25, 2019, 6:00 AM IST
ಚಿಕ್ಕಮಗಳೂರು: ಪ್ರಜ್ವಲ್ ರೇವಣ್ಣ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವ ನಿರ್ಧಾರವನ್ನು ಸ್ವಾಗತಿಸುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ತೀರ್ಮಾನವನ್ನು ಎರಡು ಕಾರಣಗಳಿಗಾಗಿ ಸ್ವಾಗತಿಸುತ್ತೇನೆ. ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವ ಬಗ್ಗೆ ಈಗ ವಿಚಾರಣೆ ನಡೆಯುತ್ತಿದೆ. ಈಗಿನ ಚುನಾವಣಾ ಆಯೋಗದ ಕಾನೂನಿನಂತೆ ಯಾವುದೇ ದೂರು ಇದ್ದರೂ ಅದರ ವಿಚಾರಣೆಯನ್ನು ಮೂರು ತಿಂಗಳ ಒಳಗಾಗಿ ನಡೆಸಬೇಕಿದೆ ಎಂದರು.
ಈಗ ಚುನಾವಣಾ ಆಯೋಗವು ತನಿಖೆ ನಡೆಸಿ ವರದಿ ಕೊಟ್ಟಿದೆ. ಅದರಂತೆ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಪ್ರಮಾಣಪತ್ರ ಸರಿಯಿಲ್ಲ ಎಂಬ ವಿಚಾರ ವರದಿಯಲ್ಲಿದೆ ಎಂದು ತಿಳಿದು ಬಂದಿದೆ. ಆರೋಪ ಸಾಬೀತಾಗಿ ಸದಸ್ಯತ್ವ ಕಳೆದುಕೊಳ್ಳಬೇಕಾಗುತ್ತದೆ ಎಂಬ ಕಾರಣದಿಂದ ಪ್ರಜ್ವಲ್ ಈ ತೀರ್ಮಾನಕ್ಕೆ ಬಂದಿರಬಹುದು ಎಂದು ತಿಳಿಸಿದರು.
ಮತ್ತೂಂದು ಅವರ ತಾತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಹಾಸನದಿಂದ ತುಮಕೂರಿಗೆ ಓಡಿಸಿ ಅಲ್ಲಿ ಅವರು ಸೋಲಲು ಕಾರಣನಾಗಿದ್ದೇನೆ ಎಂಬ ಪಾಪಪ್ರಜ್ಞೆ ಪ್ರಜ್ವಲ್ ಅವರನ್ನು ಕಾಡುತ್ತಿರಬಹುದು. ತಾವು ರಾಜೀನಾಮೆ ಸಲ್ಲಿಸಿದರೆ, ಕೌಟುಂಬಿಕ ಕಲಹ ಶಮನಗೊಳ್ಳಬಹುದು ಎಂಬ ಕಾರಣದಿಂದ ರಾಜೀನಾಮೆ ವಿಚಾರ ಪ್ರಸ್ತಾಪಿಸಿದ್ದಾರೆ. ಅವರ ಸಮಯೋಚಿತ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ವ್ಯಂಗ್ಯವಾಡಿದರು.