ಅಫ್ಘಾನ್ ಗೆ ಕೈಕೊಟ್ಟ ಅಮೆರಿಕ?
Team Udayavani, Aug 13, 2021, 7:10 AM IST
ಕಾಬೂಲ್/ವಾಷಿಂಗ್ಟನ್: ಅಫ್ಘಾನಿಸ್ಥಾನದ ಶೇ.60ರಷ್ಟು ಭಾಗವು ತಾಲಿಬಾನ್ನ ಪಾಲಾಗುತ್ತಿದ್ದಂತೆಯೇ ಅಮೆರಿಕವು ಯುದ್ಧಪೀಡಿತ ರಾಷ್ಟ್ರದ ವಿಚಾರಕ್ಕೇ ಬರದೇ ದೂರ ಉಳಿಯಲು ನಿರ್ಧರಿಸಿದೆ.
ಅಮೆರಿಕವು ಊಹಿಸಿರದಷ್ಟು ವೇಗದಲ್ಲಿ ತಾಲಿಬಾನ್ ಉಗ್ರರು ಅಫ್ಘಾನ್ನ ಮೂರನೇ ಎರಡರಷ್ಟು ಭಾಗದಲ್ಲಿ ಹಿಡಿತ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಪ್ರತಿಕ್ರಿಯಿಸಿರುವ ಶ್ವೇತಭವನ, “ಉಗ್ರರನ್ನು ಎದುರುಹಾಕಿಕೊಂಡು ಹೋರಾಡುವ ರಾಜಕೀಯ ಇಚ್ಛಾಶಕ್ತಿ ಇದೆಯೋ ಇಲ್ಲವೋ ಎಂಬುದನ್ನು ಅಫ್ಘಾನ್ ನಾಯಕತ್ವವೇ ನಿರ್ಧರಿಸಬೇಕು’ ಎಂದು ಹೇಳಿದೆ. ಅಷ್ಟೇ ಅಲ್ಲ, ಪರಿಸ್ಥಿತಿ ನೋಡಿದರೆ ಕಾಬೂಲ್ನ ಪತನವನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎಂದೂ ಪೆಂಟಗನ್ನ ಮುಖ್ಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. ಈ ಮೂಲಕ ನಮಗೂ ಅಫ್ಘಾನ್ಗೂ ಸಂಬಂಧವೇ ಇಲ್ಲ ಎಂಬ ಸುಳಿವನ್ನು ಅಮೆರಿಕ ನೀಡಿದೆ. ಅಮೆರಿಕ ತಮ್ಮ ನೆರವಿಗೆ ಬರಲಿದೆ ಎಂದು ಕಾಯುತ್ತಿರುವ ಅಫ್ಘಾನ್ ಸಕಾರಕ್ಕೆ ಇದು ದೊಡ್ಡ ಹಿನ್ನಡೆ ಉಂಟು ಮಾಡಿದೆ.
ಸೇನೆ ವಾಪಸ್ ಪಡೆಯುವ ನಿರ್ಧಾರ ಬದಲಿಲ್ಲ ಎಂದು ಈಗಾಗಲೇ ಜೋ ಬೈಡೆನ್ ಸ್ಪಷ್ಟಪಡಿಸಿದ್ದಾರೆ. ಅಫ್ಘಾನ್ ನಾಯಕರೇ ಒಗ್ಗೂಡಬೇಕು. ಆ ದೇಶದ ಭವಿಷ್ಯವು ಅವರ ಕೈಯಲ್ಲೇ ಇದೆ ಎಂದೂ ಕಿರ್ಬಿ ಹೇಳಿದ್ದಾರೆ. ಈ ನಡುವೆ ಕಾಬೂಲ್ ಸಮೀಪದ ಪ್ರಾಂತೀಯ ರಾಜಧಾನಿ ವಶಕ್ಕೆ ಪಡೆದ ಬೆನ್ನಲ್ಲೇ ಉಗ್ರರು ಗುರುವಾರ ಹೆರಾತ್ ಪೊಲೀಸ್ ಪ್ರಧಾನ ಕಚೇರಿಯಲ್ಲೂ ನಿಯಂತ್ರಣ ಸಾಧಿಸಿದೆ.
ಭಾರತ ಕೊಟ್ಟಿದ್ದ ಕಾಪ್ಟರ್ ಈಗ ಉಗ್ರರ ವಶದಲ್ಲಿ! :
ಅಫ್ಘಾನಿಸ್ಥಾನಕ್ಕೆ ಭಾರತವು ಉಡುಗೊರೆಯಾಗಿ ಕೊಟ್ಟಿದ್ದ ಎಂಐ-24 ದಾಳಿ ಹೆಲಿಕಾಪ್ಟರ್ ಅನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಹೆಲಿಕಾಪ್ಟರ್ನ ಪಕ್ಕದಲ್ಲಿ ಉಗ್ರರು ನಿಂತು ತೆಗೆಸಿಕೊಂಡಿರುವ ಫೋಟೋಗಳು ಹಾಗೂ ವೀಡಿಯೋಗಳು ಗುರುವಾರ ಬಹಿರಂಗಗೊಂಡಿವೆ. ವಿಶೇಷವೆಂದರೆ, ಈ ಹೆಲಿಕಾಪ್ಟರ್ನ ರೋಟರ್ ಬ್ಲೇಡ್ಗಳು ನಾಪತ್ತೆಯಾಗಿವೆ. ಈ ಕಾಪ್ಟರ್ ಅನ್ನು ತಾಲಿಬಾನಿಗರು ಬಳಸಬಾರದು ಎಂಬ ಉದ್ದೇಶದಿಂದ ಅಫ್ಘನ್ ಸೈನಿಕರೇ ಈ ಬ್ಲೇಡ್ಗಳನ್ನು ತೆಗೆದುಹಾಕಿರಬಹುದು ಎಂಬ ಶಂಕೆ ಮೂಡಿದೆ. 2019ರಲ್ಲಿ ಭಾರತವು ಅಫ್ಘಾನ್ ವಾಯುಪಡೆಗೆ ಎಂಐ-24 ಹೆಲಿಕಾಪ್ಟರ್ ಹಾಗೂ ಮೂರು ಚೀತಾ ಲಘು ಬಳಕೆ ಹೆಲಿಕಾಪ್ಟರ್ಗಳನ್ನು ಉಡುಗೊರೆಯಾಗಿ ನೀಡಿತ್ತು. ಇದೇ ವೇಳೆ, ಗುರುವಾರ ದಕ್ಷಿಣ ಅಫ್ಘಾನ್ನ ಪೊಲೀಸ್ ಪ್ರಧಾನ ಕಚೇರಿಯೂ ತಾಲಿಬಾನ್ ಪಾಲಾಗಿದೆ.
ನಿರ್ವಸಿತರಾದ 4 ಲಕ್ಷ ನಾಗರಿಕರು :
ಪ್ರಸಕ್ತ ವರ್ಷ ಹೊಸದಾಗಿ 4 ಲಕ್ಷ ಆಘ್ಘನ್ ನಾಗರಿಕರು ನಿರ್ವಸಿತರಾಗಿದ್ದಾರೆ. ಅದರಲ್ಲೂ ಮೇ ತಿಂಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆ್ಯಂಟೋನಿಯೋ ಗುಟೆರಸ್ ಹೇಳಿದ್ದಾರೆ. ಜುಲೈ 9ರಿಂದ ಈವರೆಗೆ ಕೇವಲ 4 ನಗರಗಳಲ್ಲೇ ತಾಲಿಬಾನ್ ಉಗ್ರರು ಕನಿಷ್ಠ 183 ನಾಗರಿಕರನ್ನು ಹತ್ಯೆಗೈದಿದ್ದಾರೆ. ಉಗ್ರರ ದಾಳಿಗೆ ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಸೇನಾ ಮುಖ್ಯಸ್ಥರ ಬದಲಾವಣೆ :
ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಅಫ್ಘಾನ್ ಸೇನೆಗೆ ಹಿನ್ನಡೆಯಾಗುತ್ತಿರುವ ಬೆನ್ನಲ್ಲೇ ಗುರುವಾರ ದಿಢೀರನೆ ಸೇನಾ ಮುಖ್ಯಸ್ಥರನ್ನೇ ಬದಲಾಯಿಸಲಾಗಿದೆ. ಸೇನೆಯ ವಿಶೇಷ ಕಾರ್ಯಾಚರಣೆಯ ಕಮಾಂಡರ್ ಹುದ್ದೆಯಿಂದ ಜನರಲ್ ವಲಿ ಮೊಹಮ್ಮದ್ ಅಹ್ಮದ್ಝೈ ಅವರನ್ನು ತೆಗೆದುಹಾಕಿ, ಅವರ ಸ್ಥಾನಕ್ಕೆ ಹಿಬಾತುಲ್ಲಾ ಅಲಿಝೈ ಅವರನ್ನು ನೇಮಕ ಮಾಡಲಾಗಿದೆ.
ಅಮೆರಿಕಕ್ಕೆ ವ್ಯೂಹಾತ್ಮಕ ಪಾಲುದಾರಿಕೆ ಮಾಡಿಕೊಳ್ಳಲು ಭಾರತ ಬೇಕು. 20 ವರ್ಷಗಳ ಯುದ್ಧದ ಬಳಿಕ ಅಫ್ಘಾನ್ನಲ್ಲಿ ತಾನು ಮಾಡಿರುವ ಅವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಪಾಕಿಸ್ತಾನ ಬೇಕು. ಭಾರತದೊಂದಿಗೆ ಸಂಬಂಧ ಬೆಳೆಸಿದ ಬಳಿಕ ಅಮೆರಿಕ ನಮ್ಮನ್ನು ಭಿನ್ನವಾಗಿ ನೋಡುತ್ತಿದೆ.-ಇಮ್ರಾನ್ ಖಾನ್, ಪಾಕ್ ಪ್ರಧಾನಿ
ತಾಲಿಬಾನ್ ಉಗ್ರರು ನಡೆಸುತ್ತಿರುವ ಯುದ್ಧಾಪರಾಧಗಳು ಮತ್ತು ಮಾನವಹಕ್ಕು ಉಲ್ಲಂಘನೆ ಪ್ರಕರಣಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯವು ದಯವಿಟ್ಟು ಗಮನಹರಿಸಬೇಕು.-ಅಫ್ಘಾನ್ ವಿದೇಶಾಂಗ ಸಚಿವಾಲಯ