ಭಾರತದ ಮನವಿ ಪರಿಗಣಿಸದಿರಿ: ಪಾಕ್
Team Udayavani, Feb 20, 2019, 12:30 AM IST
ದಿ ಹೇಗ್: ಪಾಕಿಸ್ಥಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮಂಗಳವಾರ ವಾದ ಮಂಡಿಸುವ ವೇಳೆ ಪಾಕ್ ಉದ್ಧಟತನ ಮೆರೆದಿದೆ. ಜಾಧವ್ ಪ್ರಕರಣ ಕುರಿತು ತನ್ನ ವಾದವನ್ನು ನ್ಯಾಯಾಲಯದ ಮುಂದಿಡುವ ಭರದಲ್ಲಿ, ಪಾಕ್ನಲ್ಲಿ ನಡೆದ ವಿಧ್ವಂಸಕ ಕೃತ್ಯಗಳ ಹೊಣೆಯನ್ನು ಭಾರತದ ಮೇಲೆ ಹೊರಿಸುವ ಮೂಲಕ ತನ್ನ ಚಾಳಿ ಮುಂದುವರಿಸಿದೆ.
ಭಾರತವು ವಾದ ಮಂಡಿಸಿದ ಮಾರನೇ ದಿನ ಪಾಕ್ ಪರ ವಕಾಲತ್ತು ವಹಿಸಿದ ಅಟಾರ್ನಿ ಜನರಲ್ ಅನ್ವರ್ ಮನ್ಸೂರ್ ಖಾನ್, “ಜಾಧವ್ ಒಬ್ಬ ಗೂಡಚಾರನಾಗಿದ್ದು, ಭಾರತದ ಅಧಿಕೃತ ಪಾಸ್ಪೋರ್ಟ್ ಮೂಲಕವೇ ನಮ್ಮ ದೇಶದೊಳಕ್ಕೆ ನುಸುಳಿ ಸೆರೆಸಿಕ್ಕಿದ್ದ. ಅಲ್ಲದೇ ಬಲೂಚಿಸ್ತಾನ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಭಯೋತ್ಪಾದನೆ ಕೃತ್ಯವೆಸಗಲು ಭಾರತ ಸರಕಾರವೇ ನನ್ನನ್ನು ಇಲ್ಲಿಗೆ ಕಳುಹಿಸಿದೆ ಎಂದು ಆತ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕೈವಾಡವೂ ಇದರಲ್ಲಿದೆ. ಆತನಿಗೆ 17 ಬಾರಿ ನಕಲಿ ಪಾಸ್ಪೋರ್ಟ್ ಮೂಲಕ ಸಂಚರಿಸಲು ಅವಕಾಶ ಕೊಟ್ಟಿದ್ದು ಹೇಗೆ ಎಂಬುದನ್ನು ವಿವರಿಸುವಲ್ಲಿ ಭಾರತ ವಿಫಲವಾಗಿದೆ. ಹಾಗಾಗಿ ಭಾರತದ ವಾದವನ್ನು ನ್ಯಾಯಾಲಯ ಪರಿಗಣಿಸಬಾರದು’ ಎಂದು ಹೇಳಿದ್ದಾರೆ.
ದಾಳಿಗೆ ಭಾರತ ಕಾರಣ: ಇದೇ ವೇಳೆ, 2014ರಲ್ಲಿ ಪೇಶಾವರದ ಸೇನಾ ಶಾಲೆ ಮೇಲೆ ನಡೆದ ದಾಳಿಗೆ ಭಾರತವೇ ಕಾರಣ ಎಂದೂ ಖಾನ್ ಆರೋಪಿಸಿದ್ದಾರೆ. ಭಾರತವು ಆಫ್ಘಾನ್ ಜತೆಗೆ ಕೈಜೋಡಿಸಿ ನಮ್ಮ 140 ಮಕ್ಕಳ ಸಾವಿಗೆ ಕಾರಣವಾಯಿತು. ಈ ಹಿಂದೆಯೂ ಭಾರತ ಹಲವು ಬಾರಿ ನಿಯಮಗಳನ್ನು ಉಲ್ಲಂ ಸಿದೆ ಎಂದು ಆರೋಪಿಸಿದ್ದಾರೆ. ಜತೆಗೆ, ನಾವು ಮಾನವೀಯ ನೆಲೆಯಲ್ಲಿ ಜಾಧವ್ ಕುಟುಂಬಕ್ಕೆ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸಿದ್ದೆವು. ಆದರೆ, ಭಾರತ ಇಂಥದ್ದೊಂದು ಕ್ರಮ ಕೈಗೊಂಡ ಉದಾಹರಣೆಯಿದೆಯೇ ಎಂದೂ ಎಜಿ ಖಾನ್ ಪ್ರಶ್ನಿಸಿದ್ದಾರೆ. ಇದಕ್ಕೂ ಮುನ್ನ ಜಾಧವ್ ಪ್ರಕರಣದ ವಿಚಾರಣೆ ಮುಂದೂಡಬೇಕೆಂದು ಪಾಕ್ ಮಾಡಿದ ಮನವಿಯನ್ನು ಕೋರ್ಟ್ ತಿರಸ್ಕರಿಸಿತು.