ರೊಹಿಂಗ್ಯಾ ಉಗ್ರರಿಂದ 28 ಹಿಂದೂಗಳ ಕಗ್ಗೊಲೆ?
Team Udayavani, Sep 25, 2017, 6:00 AM IST
ಯಾಂಗೂನ್/ಹೈದರಾಬಾದ್: ರೊಹಿಂಗ್ಯಾಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಮ್ಯಾನ್ಮಾರ್ನಿಂದ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಆ ದೇಶದ ರಾಖೀನೆ ಪ್ರಾಂತ್ಯದಲ್ಲಿ 28 ಮಂದಿ ಹಿಂದೂಗಳನ್ನು ಬರ್ಬರವಾಗಿ ಕೊಂದಿರುವ ರೊಹಿಂಗ್ಯಾ ಉಗ್ರರು ಸಾಮೂಹಿಕವಾಗಿ ಸಮಾಧಿ ಮಾಡಿದ್ದಾರೆ ಎಂದು ಸೇನೆ ದೃಢಪಡಿಸಿದೆ.
ಈ ಅಂಶವನ್ನು ಸೇನೆಯ ವೆಬ್ಸೈಟ್ನಲ್ಲಿ ಅಪ್ಡೇಟ್ ಮಾಡಲಾಗಿದೆ. ರಾಖೀನೆ ಪ್ರಾಂತ್ಯದಲ್ಲಿ ಆರ್ಸಾ ತೀವ್ರಗಾಮಿ ಸಂಘಟನೆಯು ಕೊಂದು ಹಾಕಿದೆ ಎಂದು ಹೇಳಲಾಗಿರುವ 28 ಮಂದಿ ಹಿಂದೂಗಳ ಮೃತದೇಹವನ್ನು ಸಮಾಧಿಯಿಂದ ಹೊರ ತೆಗೆಯಲಾಗಿದೆ ಎಂದು ಅದರಲ್ಲಿ ಉಲ್ಲೇಖೀಸಲಾಗಿದೆ.
ಆ.26ರಂದು ಮ್ಯಾನ್ಮಾರ್ ಸೇನೆ ಸಮುದಾಯದ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಕೂಡ ಸುಪ್ರೀಂಕೋರ್ಟ್ನಲ್ಲಿ ಅವರು ಅಕ್ರಮ ವಲಸಿಗರು ಎಂದು ಅಫಿಡವಿಟ್ ಸಲ್ಲಿಸಿತ್ತು. ಈ ನಡುವೆ ಭಾರತ ಹೈದರಾಬಾದ್ನಿಂದ ವಿಶೇಷ ಹಡಗಿನ ಮೂಲಕ ಮ್ಯಾನ್ಮಾರ್ಗೆ ಪರಿಹಾರ ಸಾಮಗ್ರಿಗಳನ್ನು ಭಾನುವಾರ ಕಳುಹಿಸಿಕೊಟ್ಟಿದೆ.