ಮೋದಿ ನುಡಿದಿದ್ದ ಭವಿಷ್ಯ ನಿಜವಾಯಿತು…ವಿಶ್ವದ ಮುಂದೆ ಕೈಚಾಚಲು ನಾಚಿಕೆಯಾಗುತ್ತಿದೆ: ಪಾಕ್
Team Udayavani, Jan 17, 2023, 9:48 AM IST
ಇಸ್ಲಾಮಾಬಾದ್: ಆಹಾರಬಿಕ್ಕಟ್ಟು, ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ನಲುಗಿ ಹೋಗಿರುವ ನೆರೆ ರಾಷ್ಟ್ರ ಪಾಕಿಸ್ಥಾನ, ಈಗ ಜಗತ್ತಿನ ಮುಂದೆ ತನ್ನ ಅಸಹಾಯಕ ಪರಿಸ್ಥಿತಿಯನ್ನು ತೆರೆದಿಟ್ಟಿದ್ದು, ಪರಮಾಣು ಸಜ್ಜಿತ ರಾಷ್ಟ್ರವಾಗಿದ್ದರೂ, ಆಹಾರಕ್ಕಾಗಿ ವಿಶ್ವದ ಮುಂದೆ ಕೈಚಾಚುವ ಪರಿಸ್ಥಿತಿ ಎದುರಾಗಿದೆ ಎಂದು ಅವಲತ್ತುಕೊಂಡಿದೆ.
ಸ್ವತಃ ಪಾಕಿಸ್ಥಾನ ಪ್ರಧಾನಿ ಶೆಹಬಾಜ್ ಷರೀಫ್, ಜಗತ್ತಿನ ಮುಂದೆ ಕೈ ಚಾಚಲು ನಾಚಿಕೆಯಾಗುತ್ತಿದೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಪಾಕಿಸ್ಥಾನ ಆಡಳಿತಾತ್ಮಕ ಸೇವೆ (ಪಿಎಎಸ್) ಪಾಸಿಂಗ್ ಔಟ್ ಪರೇಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶದ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ವಿದೇಶಿ ಸಾಲಗಳನ್ನು ಪಡೆದುಕೊಳ್ಳುವುದೇ ಪರಿಹಾರವಲ್ಲ. ಹೆಚ್ಚಿನ ಸಾಲ ನೀಡಿ ಎಂದು ನೆರೆ ರಾಷ್ಟ್ರಗಳ ಮುಂದೆ ಕೈ ಚಾಚುವುದು ನಿಜಕ್ಕೂ ಮುಜುಗರ ತಂದಿದೆ ಎಂದಿದ್ದಾರೆ.
ಮೋದಿ ನುಡಿದಿದ್ದ ಭವಿಷ್ಯ ನಿಜವಾಯಿತು!
ಪಾಕಿಸ್ಥಾನದ ದುರಹಂಕಾರವನ್ನು ಭಾರತ ಮಟ್ಟಹಾಕಿದೆ. ಭಿಕ್ಷಾಪಾತ್ರೆ ಹಿಡಿದು ಪಾಕ್ ಜಗತ್ತಿನ ಮುಂದೆ ಅಂಗಲಾಚುವಂತೆ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ಥಾನದ ವಿರುದ್ಧ ವಾಗ್ಧಾಳಿ ನಡೆಸಿದ್ದರು. 2019ರಲ್ಲಿ ರಾಜಸ್ಥಾನದ ಬರ್ಮಾರ್ನಲ್ಲಿ ಮೋದಿ ಹೇಳಿದ್ದ ಆ ಭವಿಷ್ಯ, ಈಗ ಪಾಕಿಸ್ಥಾನದ ಪಾಲಿಗೆ ಅಕ್ಷರಶಃ ನಿಜವಾಗಿದೆ. ಮೋದಿ ಅವರ ಅಂದಿನ ವೀಡಿಯೋವನ್ನೇ ಮಾಜಿ ಪ್ರಧಾನಿ ಇಮ್ರಾನ್ ಅವರ ಪಕ್ಷ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶೆಹಬಾಜ್ ನೇತೃತ್ವದ ಸರಕಾರ ಮೋದಿ ನುಡಿದಿದ್ದ ಭವಿಷ್ಯವನ್ನು ನಿಜವಾಗಿಸಿದೆ ಎಂದು ಟೀಕಿಸಿದೆ.