Moscow;ಒಂದೇ ದಿನದಲ್ಲಿ ದಂಗೆ ದಮನ: ವ್ಲಾಡಿಮಿರ್ ಪುಟಿನ್ ಸದ್ಯಕ್ಕೆ ನಿರಾಳ
ಬೆಲಾರಸ್ ಸಂಧಾನ ಯಶಸ್ವಿ: ಗಡಿಪಾರಿಗೆ ಒಪ್ಪಿಕೊಂಡ ಪ್ರಿಗೋಷಿನ್
Team Udayavani, Jun 26, 2023, 7:20 AM IST
ಮಾಸ್ಕೋ:ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಸವಾಲೆಸೆದು ದಿಢೀರ್ ದಂಗೆಯೆದ್ದಿದ್ದ ವ್ಯಾಗ್ನರ್ ಪಡೆಯ ಮುಖ್ಯಸ್ಥ ಪ್ರಿಗೋಷಿನ್ ಒಂದೇ ದಿನದಲ್ಲಿ ತಣ್ಣಗಾಗಿದ್ದಾರೆ.
ಶನಿವಾರ ರಾತ್ರೋರಾತ್ರಿ ನಡೆದ ಸಂಧಾನ ಸಭೆಯಲ್ಲಿ ಪ್ರಿಗೋಷಿನ್, ನೆರೆರಾಷ್ಟ್ರ ಬೆಲಾರಸ್ಗೆ ಪರಾರಿಯಾಗಲು ಒಪ್ಪಿಕೊಂಡಿದ್ದಾರೆ. ರಷ್ಯಾವನ್ನು ತೊರೆದರೆ ಮಾತ್ರ ಅವರ ವಿರುದ್ಧದ ಸಶಸ್ತ್ರ ದಂಗೆಯ ಆರೋಪಗಳನ್ನು ಕೈಬಿಡುವುದಾಗಿ ಷರತ್ತು ಹಾಕಲಾಗಿತ್ತು. ಅದರಂತೆ, ಡೀಲ್ಗೆ ಒಪ್ಪಿಕೊಂಡ ಪ್ರಿಗೋಷಿನ್ ರಷ್ಯಾ ತೊರೆದಿದ್ದಾರೆ. ಜತೆಗೆ, ರಾಜಧಾನಿ ಮಾಸ್ಕೋದತ್ತ ದಂಗೆಯೆದ್ದು ಹೋಗಿದ್ದ ವ್ಯಾಗ್ನರ್ ಪಡೆಯೂ ತನ್ನ ನೆಲೆಗೆ ವಾಪಸ್ಸಾಗಿದೆ.
ಪುಟಿನ್ ಅವರ ಪರಮಾಪ್ತನಾಗಿದ್ದ ಪ್ರಿಗೋಷಿನ್ ಅವರ ವ್ಯಾಗ್ನರ್ ಸೇನೆ ಶನಿವಾರ ಏಕಾಏಕಿ ತನ್ನ ದೇಶದ ವಿರುದ್ಧವೇ ದಂಗೆಯೆದ್ದಿತ್ತು. ರೊಸ್ತೋವ್-ಆನ್-ಡಾನ್ ಎಂಬ ನಗರವನ್ನು ವಶಕ್ಕೆ ಪಡೆದು, ಮಾಸ್ಕೋದತ್ತ ಮುನ್ನುಗ್ಗಿತ್ತು. ಆದರೆ, ರಾತ್ರಿ ವೇಳೆಗೆ ಬೆಲಾರಸ್ ಅಧ್ಯಕ್ಷರ ಮಧ್ಯಪ್ರವೇಶದ ಬಳಿಕ ತಣ್ಣಗಾದ ಪ್ರಿಗೋಷಿನ್, “ರಷ್ಯನ್ನರ ರಕ್ತಪಾತ ಆಗುವುದನ್ನು ತಡೆಯುವ ಸಲುವಾಗಿ ನಾವು ಮಾಸ್ಕೋಗೆ ತೆರಳದೇ ಮರಳಲು ನಿರ್ಧರಿಸಿದ್ದೇವೆ’ ಎಂದು ಘೋಷಿಸಿದ್ದರು. ಅದರಂತೆ, ವ್ಯಾಗ್ನರ್ ಸೇನೆ ವಾಪಸಾಗಿತ್ತು.
ಒಪ್ಪಂದದ ಷರತ್ತುಗಳೇನು?
– ಪ್ರಿಗೋಷಿನ್ ಕೂಡಲೇ ರಷ್ಯಾ ತೊರೆದು ಬೆಲಾರಸ್ಗೆ ಹೋಗಬೇಕು. ಆಗ ಮಾತ್ರ ಅವರ ವಿರುದ್ಧದ ಆರೋಪಗಳನ್ನು ಕೈಬಿಡಲಾಗುವುದು
– ಹೋರಾಟ ಸ್ಥಗಿತಗೊಳಿಸಿದರೆ, ದಂಗೆಯಲ್ಲಿ ಭಾಗಿಯಾಗಿದ್ದ ವ್ಯಾಗ್ನರ್ ಸೈನಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಿಲ್ಲ.
– ವ್ಯಾಗ್ನರ್ ಪಡೆಯಲ್ಲಿದ್ದುಕೊಂಡೂ ದಂಗೆಯಲ್ಲಿ ಭಾಗಿಯಾಗದ ಸೈನಿಕರನ್ನು ಗುತ್ತಿಗೆ ಆಧಾರದಲ್ಲಿ ರಷ್ಯಾ ಸೇನೆಗೆ ನೇಮಕ ಮಾಡಲಾಗುವುದು.