ಸಿಂಧ್ನಲ್ಲಿ ಇಬ್ಬರು ಹಿಂದೂ ಉದ್ಯಮಿ ಸಹೋದರರ ಕಗ್ಗೊಲೆ
Team Udayavani, Jan 5, 2018, 4:57 PM IST
ಕರಾಚಿ : ಪಾಕಿಸ್ಥಾನದ ಸಿಂಧ್ ಪ್ರಾಂತ್ಯದ ಥಾರ್ಪಾರ್ಕರ್ ಜಿಲ್ಲೆಯಲ್ಲಿ ಬೈಕ್ನಲ್ಲಿ ಬಂದ ದರೋಡೆಕೋರರು ಇಬ್ಬರು ಹಿಂದೂ ಉದ್ಯಮಿ ಸಹೋದರರನ್ನು ಗುಂಡಿಕ್ಕಿ ಸಾಯಿಸಿದ್ದಾರೆ.
ಈ ಘಟನೆಯನ್ನು ಖಂಡಿಸಿ ಅಲ್ಪಸಂಖ್ಯಾಕ ಸಮುದಾಯದವರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ದರೋಡೆಕೋರರ ಗುಂಡಿಗೆ ಬಲಿಯಾದ ಭಾರತೀಯ ಉದ್ಯಮಿ ಸಹೋದರರನ್ನು ದಿಲೀಪ್ ಕುಮಾರ್ ಮತ್ತು ಚಂದರ್ ಮಾಹೇಶ್ವರಿ ಎಂದು ಗುರುತಿಸಲಾಗಿದೆ. ಇವರು ದವಸ-ಧಾನ್ಯ ವ್ಯಾಪಾರಿಗಳು. ಜಿಲ್ಲೆಯ ಮಿಠಿ ಪ್ರದೇಶದ ದವಸ-ಧಾನ್ಯ ಮಾರುಕಟ್ಟೆಯಲ್ಲಿರುವ ತಮ್ಮ ಅಂಗಡಿಯನ್ನು ಇವರು ತೆರೆಯುತ್ತಿದ್ದಾಗ ದರೋಡೆಕೋರರು ಅವರ ಬಳಿ ಇದ್ದ ಹಣವನ್ನು ಲೂಟಿ ಮಾಡಿ ಬಳಿಕ ಅವರ ಮೇಲೆ ಗುಂಡೆಸೆದು ಪರಾರಿಯಾದರು ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಸಿಂಧ್ ಪ್ರಾಂತ್ಯದ ಗೃಹ ಸಚಿವರಾಗಿರುವ ಸೋಹೇಲ್ ಅನ್ವರ್ ಸಿಯಾಲ್ ಅವರು ಈ ಕಗ್ಗೊಲೆಗಳ ಬಗ್ಗೆ ತನಿಖೆ ನಡೆಸುವಂತೆ ಉಮರ್ಕೋಟ್ ಹಿರಿಯ ಪೊಲೀಸ್ ಸುಪರಿಂಟೆಂಡೆಂಟರಿಗೆ ಆದೇಶ ನೀಡಿರುವುದಾಗಿ ತಿಳಿದುಬಂದಿದೆ.