ಪಶ್ಚಿಮ ಬಂಗಾಳ : ನಮಗೆ ದುರ್ಯೋಧನ, ದುಶ್ಯಾಸನರು ಬೇಕಾಗಿಲ್ಲ : ಮೋದಿ, ಶಾ ವಿರುದ್ಧ ಮಮತಾ ಕಿಡಿ
ಬಿಜೆಪಿ ಬೌಲ್ಡ್ ಔಟ್ ಆಗಲಿದೆ : ಬಿಜೆಪಿ ವಿರುದ್ಧ ಬ್ಯಾನರ್ಜಿ ಆಕ್ರೋಶ
Team Udayavani, Mar 19, 2021, 5:43 PM IST
ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಮತ್ತೆ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ದುರ್ಯೋಧನ ಹಾಗೂ ದುಷ್ಯಾಸನ ಎಂದು ಕರೆದಿದ್ದಲ್ಲದೇ, ತೃಣಮೂಲ ಕಾಂಗ್ರೆಸ್ ನ ಮಾಜಿ ಸಂಸದ, ಈಗಿನ ಪಶ್ಚಿಮ ಬಂಗಾಳದ ಬಿಜೆಪಿಯ ಪ್ರಭಾವಿ ನಾಯಕ ಸುವೇಂದು ಅಧಿಕಾರಿಯವರನ್ನು ಮಿರ್ ಜಾಫರ್ ಎಂದು ಕರೆದಿದ್ದಾರೆ.
ಓದಿ : ನೀರಿನಲ್ಲಿ ಎಂಜಾಯ್ ಮಾಡುತ್ತಾ, ಆಟವಾಡುತ್ತಿದೆ ನೋಡಿ ಸ್ಲಾತ್ ಪ್ರಾಣಿ
ಬಿಜೆಪಿಗೆ ವಿದಾಯ ಹೇಳಿ, ನಮಗೆ ಬಿಜೆಪಿ ಬೇಕಾಗಿಲ್ಲ, ನಾವು ಮೋದಿ ಮುಖ ನೋಡಲು ಬಯಸುವುದಿಲ್ಲ, ನಾವು ಗಲಭೆಗಳನ್ನು ಬಯಸುವುದಿಲ್ಲ, ಲೂಟಿಕೋರರು ನಮಗೆ ಬೇಕಾಗಿಲ್ಲ, ದುರ್ಯೋಧನ, ದುಶ್ಯಾಸನರು, ಮಿರ್ ಜಾಫರ್ ನಮಗೆ ಬೇಕಾಗಿಲ್ಲ ಎಂದು ಬ್ಯಾನರ್ಜಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಮಾರ್ಚ್ 27 ರಂದು ಆಟ ಆರಂಭವಾಗಲಿದ್ದು, ಬಿಜೆಪಿ ಬೌಲ್ಡ್ ಔಟ್ ಆಗಲಿದೆ ಎಂದು ಕೂಡ ಹೇಳಿದ್ದಾರೆ.
ಇನ್ನು, ಮಮತಾ ಬ್ಯಾನರ್ಜಿ ತಮ್ಮ ಮಾಜಿ ಆಪ್ತ ಸುವೇಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಆತನನ್ನು ಕುರುಡಾಗಿ ನಂಬಿದ್ದೆ, ನಂಬಿಕೆಗೆ ದ್ರೊಹ ಬಗೆದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ನಾನು ಅವರನ್ನು ಕುರುಡಾಗಿ ನಂಬಿದ್ದೆ, ಕುರುಡಾಗಿ ಅವರ ಮೇಲೆ ವಿಶ್ವಾಸ ಇಟ್ಟಿದ್ದೆ. ನನಗೆ ದ್ರೋಹ ಬಗೆದಿದ್ದಾರೆ. 2014 ರಿಂದ ಅವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಿದ್ದರು. ನನ್ನನ್ನು ಕ್ಷಮಿಸಿ ನಾನು ಅವರನ್ನು ನಂಬಿದ್ದೆ ಎಂದರು.
ನಿನ್ನೆ(ಮಾ.18) ಪುರುಲಿಯಾದ ಚುನಾವಣಾ ಪ್ರಚಾರ ಸಭೆಯಲ್ಲಿ ತನ್ನ ವಿರುದ್ಧ ಮಾತನಾಡಿದ್ದ ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಮಮತಾ, ಮೋದಿ ಟೆಲಿ ಪ್ರಾಮ್ಟರ್ ಬಳಸಿಕೊಂಡು ‘ಕೆಮನ್ ಆಚೊ ಬೆಂಗಾಲ್’(ಹೇಗಿದ್ದೀರಿ ಬೆಂಗಾಲ್) ಅಂತ ಕೇಳುತ್ತಾರೆ. ಭಾಲೊ ಅಚೆ( ತುಂಬಾ ಚೆನ್ನಾಗಿದ್ದೇವೆ) ಎಂದು ನಾವು ಹೆಳುತ್ತೇವೆ. ಪರಿವರ್ತನೆ ನನ್ನ ಘೋಷಣೆ. ನೀವು ಯಾಕೆ ನನ್ನ ಘೋಷಣೆಯನ್ನು ಕದಿಯುತ್ತೀರಿ..? ನೀವು ಕೂಡ ನನ್ನನ್ನೇ ಅನುಸರಿಸುತ್ತಿದ್ದೀರಾ ..? ಎಂದು ಪ್ರಶ್ನಿಸಿದ್ದಾರೆ.