Udupi ಮನೋವ್ಯಾಧಿಗೆ ಗೀತೆಯೊಂದೇ ಪರಿಹಾರ: ಕೆ.ಕೆ. ಮೊಹಮ್ಮದ್
Team Udayavani, Dec 26, 2023, 11:53 PM IST
ಉಡುಪಿ: ಬೆಂಗಳೂರಿನ ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಕೋಟಿಗೀತಾ ಲೇಖನಯಜ್ಞ ಸಮಿತಿ ಆಶ್ರಯದಲ್ಲಿ ನಡೆದ ಗೀತೋತ್ಸವದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಉತ್ಖನನದಲ್ಲಿ ಪ್ರಮುಖ ಪಾತ್ರವಾಹಿಸಿದ್ದ ಖ್ಯಾತ ಇತಿಹಾಸಕಾರ ಮತ್ತು ಪುರಾತತ್ವ ಶಾಸ್ತ್ರಜ್ಞ ಕೆ.ಕೆ. ಮೊಹಮ್ಮದ್ ಅವರನ್ನು ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಗೌರವಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಬಾಲ್ಯದಲ್ಲೇ ನನ್ನನ್ನು ಭಗವದ್ಗೀತೆ ಆಕರ್ಷಿಸಿತ್ತು. ಅದರ ಶ್ಲೋಕಗಳು ಹೆಚ್ಚಿನ ಪ್ರಭಾವ ಬೀರಿದ್ದವು ಎಂದು ಹೇಳುತ್ತಾ ಉತ್ಖನನದಲ್ಲಿ ಪಾಲ್ಗೊಂಡಿದ್ದ ತಮ್ಮ ಪ್ರಮುಖ ಅನುಭವಗಳನ್ನು ವಿವರಿಸಿದರು. ಮನೋವ್ಯಾಧಿಗಳು ದಿನೇದಿನೇ ಹೆಚ್ಚಾಗುತ್ತಿರುವ ಈ ಕಾಲ ಘಟ್ಟದಲ್ಲಿ ಗೀತೆಯೊಂದೇ ಅದಕ್ಕೆ ಸೂಕ್ತ ಪರಿಹಾರ ಎಂದರು.
ಪುತ್ತಿಗೆ ಹಿರಿಯ ಶ್ರೀಗಳು ಮೊಹಮ್ಮದ್ ಅವರ ಪ್ರಾಮಾಣಿಕತೆ ಮತ್ತು ಅವರ ವೃತ್ತಿಯ ಬದ್ಧತೆಯನ್ನು ಮೆಚ್ಚಿದರು ಹಾಗೂ ಮೊಹಮ್ಮದ್ ಅವರಿಗೆ ಕೋಟಿ ಗೀತಾ ಲೇಖನ ಯಜ್ಞದ ಪುಸ್ತಕವನ್ನು ನೀಡಿದರು. ಈ ವೇಳೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ವಿರಚಿತ ನವನೀತ ಗೀತ ಕೃತಿಯನ್ನು ಕೆ.ಕೆ. ಮೊಹಮ್ಮದ್ ಲೋಕಾರ್ಪಣೆ ಮಾಡಿದರು.