ಕರ್ಣಾವತಾರ ಶುರು!
Team Udayavani, Jul 26, 2018, 12:42 PM IST
ಸಾಕ್ಷಾತ್ ಮಲ್ಪೆ ನಿರ್ದೇಶನದ ‘ಕರ್ಣೆ’ ಡಬ್ಬಿಂಗ್ ಎಲ್ಲ ಪೂರ್ಣಗೊಳಿಸಿ ಇನ್ನೇನು ರಿಲೀಸ್ನ ತವಕದಲ್ಲಿದೆ. ಮೇ ಅಂತ್ಯಕ್ಕೆ ರಿಲೀಸ್ ಆಗಬೇಕು ಎಂದು ಲೆಕ್ಕ ಹಾಕಿದ್ದ ‘ಕರ್ಣೆ’ ಕೆಲವು ಕಾರಣದಿಂದ ಮುಂದೂಡಿಕೆಯಾಗುತ್ತಲೇ ಬಂದಿತ್ತು. ಕೊನೆಗೆ ಮಳೆ ಮುಗಿದ ಬಳಿಕ ಕರ್ಣನ ಎಂಟ್ರಿ ಎಂದು ಚಿತ್ರತಂಡ ತಿಳಿಸಿತ್ತು. ಈ ಸಿನೆಮಾ ಮೊಗವೀರ ಜನಾಂಗದ ಕುರಿತ ಕಥೆಯನ್ನು ಒಳಗೊಂಡಿದೆ.
ಕಾಮಿಡಿ ಜತೆಗೆ ತುಳುವಿಗೊಂದು ಒಳ್ಳೆಯ ಕಮರ್ಷಿಯಲ್ ಸಿನೆಮಾ ನೀಡಬೇಕು ಎಂಬ ಯೋಚನೆಯಿಂದ ಕರ್ಣೆ ಸೃಷ್ಟಿ ಮಾಡಲಾಗಿದೆ. ರಕ್ಷಿತ್ ಎಸ್. ಕೋಟ್ಯಾನ್ ಮತ್ತು ರಕ್ಷಿತ್ ಎಚ್.ಸಾಲ್ಯಾನ್ ನಿರ್ಮಾಣದಲ್ಲಿ ಮೂಡಿಬಂದ ಚಿತ್ರದಲ್ಲಿ ತುಳುನಾಡ ಚಕ್ರವರ್ತಿ ಅರ್ಜುನ್ ಕಾಪಿಕಾಡ್ ನಾಯಕ, ಚಿರಶ್ರೀ ಅಂಚನ್ ನಾಯಕಿ. ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಗೋಪಿನಾಥ್ ಭಟ್, ವಿಸ್ಮಯ ವಿನಾಯಕ್, ಮಂಜು ರೈ ಮೂಳೂರು, ಸಾಯಿಕೃಷ್ಣ ಕುಡ್ಲ ಮೊದಲಾದವರು ಬಣ್ಣ ಹಚ್ಚಿದ್ದಾರೆ.
ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿರಲಿದ್ದು ದೇವದಾಸ್ ಕಾಪಿಕಾಡ್, ಸಾಕ್ಷಾತ್ ಮಲ್ಪೆ, ವಿಜಯಕುಮಾರ್ ಕೊಡಿಯಾಲಬೈಲ್ ಅವರ ಸಾಹಿತ್ಯವಿದೆ. ರಘು ಧನ್ವಂತ್ರಿ ಸಂಗೀತ ಸ್ವರ ಸಂಯೋಜನೆ ಮಾಡಿದ್ದಾರೆ. ಆರೂರು ಸುಧಾಕರ ಶೆಟ್ಟಿಯವರ ಕೆಮರಾ ಕೈಚಳಕವಿರಲಿದೆ. ಅರ್ಜುನ್ ಕಾಪಿಕಾಡ್ ಅವರ ಪಾಲಿಗೆ ಬಹುನಿರೀಕ್ಷಿತ ಸಿನೆಮಾ ಎಂದೇ ಬಿಂಬಿತವಾಗಿರುವ ಕರ್ಣೆಯನ್ನು ಅದ್ದೂರಿ ವೆಚ್ಚದಲ್ಲಿ ಮಾಡಿರುವುದರಿಂದ ಸಿನೆಮಾದ ಬಗ್ಗೆ ವ್ಯಾಪಕ ನಿರೀಕ್ಷೆಯೂ ಇದೆ.
ದಿನೇಶ್ ಇರಾ