ದೇವರ ಬಂಧನವೇ ಬಿಡುಗಡೆಯ ಪಥ


Team Udayavani, Jan 12, 2020, 5:37 AM IST

9

ಧಾರ್ಮಿಕ ಸಂಪ್ರದಾಯಗಳ ಆಚರಣೆಯಲ್ಲಿ ಮೇಲ್ಪಂಕ್ತಿಯಲ್ಲಿರುವ ಅದಮಾರು ಮಠ
ಸಂಸ್ಥಾನವು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ನಾಡಿನಾದ್ಯಂತ ಉನ್ನತ ಕೀರ್ತಿಗೆ ಭಾಜನವಾಗಿದೆ. ಹಾಗಾಗಿಯೇ, ಮುಂದಿನ ಎರಡು ವರ್ಷಗಳ ಪರ್ಯಾಯೋತ್ಸವದ ಕುರಿತು ಭಕ್ತಾಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಜನವರಿ 18ರಂದು ಶ್ರೀಕೃಷ್ಣ ಪೂಜಾದೀಕ್ಷಿತರಾಗಿ ಸರ್ವಜ್ಞ ಪೀಠ ಏರಲಿರುವ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ತಮ್ಮ ಧಾರ್ಮಿಕ, ಸಾಂಸ್ಕೃತಿಕ ನೆಲೆಯ ಚಿಂತನೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಇವತ್ತು ಯಂತ್ರ ನಾಗರೀಕತೆಯ ಕಾಲ. ಎಲ್ಲ ಕ್ಷೇತ್ರದಲ್ಲಿಯೂ ಟೆಕ್ನಾಲಜಿಯೇ. ಬದುಕು ಯಾಂತ್ರಿಕವಾಗುತ್ತಿದೆ. ಕಾರು ತಯಾರಿಸುವ ಫ್ಯಾಕ್ಟರಿಯೊಂದರಲ್ಲಿ ಒಂದು ದಿನ ಸಾವಿರಾರು ಕಾರುಗಳು ಉತ್ಪಾದನೆಯಾಗಬಹುದು. ಒಂದು ಕಾರು ಮತ್ತೊಂದಕ್ಕಿಂತ ಭಿನ್ನವಾಗಿಲ್ಲ. ಎಲ್ಲ ಕಾರುಗಳೂ ಒಂದೇ ರೀತಿ. ಇದು ಯಂತ್ರಗಳ ತಯಾರಿಕೆಯ ಫ‌ಲ. ಮನುಷ್ಯ ಯಂತ್ರವಲ್ಲ ಎನ್ನುವುದು ಇದೇ ಕಾರಣಕ್ಕೆ. ಜಗತ್ತಿನಲ್ಲಿ ಒಬ್ಬ ಮನುಷ್ಯನಂತೆ ಮತ್ತೂಬ್ಬ ಮನುಷ್ಯನಿದ್ದಾನೆಯೆ? ಒಬ್ಬೊಬ್ಬರದು ಒಂದೊಂದು ರೂಪು, ಒಬ್ಬೊಬ್ಬರದ್ದು ಒಂದೊಂದು ಬಗೆ.

ನೂರಾರು ಮನುಷ್ಯರನ್ನು ‘ಮಾಸ್‌ ಪ್ರೊಡಕ್ಷನ್‌’ ಮಾಡಲು ಸಾಧ್ಯವೆ? ಸಾಧ್ಯವೇ ಇಲ್ಲ. ಯಂತ್ರಗಳಲ್ಲಿ ತಯಾರಾಗುವ ಕಾರುಗಳ ಕಾರ್ಯಕ್ಷಮತೆ, ಸಾಮರ್ಥ್ಯ ಎಲ್ಲವೂ ಒಂದೇ ರೀತಿಯವು. ಅವುಗಳನ್ನು ಒಂದೇ ತೆರನಾಗಿ ಬಳಸಿಕೊಂಡರೆ ಅವುಗಳ ಬಾಳ್ವಿಕೆಯೂ ಒಂದೇ ರೀತಿಯಾಗಿರುತ್ತದೆ. ಆದರೆ, ಒಬ್ಬ ಮನುಷ್ಯನ ಕಾರ್ಯಕ್ಷಮತೆಯೇ ಬೇರೆ, ಮತ್ತೂಬ್ಬನ ಸಾಮರ್ಥ್ಯವೇ ಬೇರೆ, ಇನ್ನೊಬ್ಬನ ಚಿಂತನ ಕ್ರಮವೇ ಬೇರೆ, ಮಗದೊಬ್ಬನ ಕರಕೌಶಲವೇ ಬೇರೆ. ಇಂಥ ‘ಇಂಡಿವಿಜುವಲ್‌’ ಐಡೆಂಟಿಟಿ ಏನಿದೆ, ಅದನ್ನು ಗುರುತಿಸುವ ಮತ್ತು ಅದರಲ್ಲಿಯೇ ಒಬ್ಟಾತ ಬದುಕಿನ ಆನಂದವನ್ನು ಕಾಣುವ ಅವಕಾಶಗಳನ್ನು ಒದಗಿಸಬೇಕು. ಅಂಥ ಕೆಲಸವನ್ನು ಒಂದು ದೇವಾಲಯವೊ ಮಠವೊ ಮಾಡಬಹುದಾಗಿದೆ.

ಚಿತ್ತ ಮತ್ತು ಶರೀರ ಎಂಬ ಎರಡು ಬಗೆಗಳಿವೆ. ಜ್ಞಾನ ಮತ್ತು ಕರ್ಮಕ್ಕೆ ಮಾಧ್ಯಮವಾಗಿರುವಂಥ ಎರಡು ಸಂಗತಿ ಗಳಿವು. ಕೃಷ್ಣ ಹೇಳಿದ್ದಾನೆ, ಕರ್ಮಣಾ ಜ್ಞಾನಮಾತನೋತಿ… ಜ್ಞಾನವೂ ಕರ್ಮವೂ ಬೇರೆ ಬೇರೆ. ಆದರೆ, ಒಂದಕ್ಕೆ ಮತ್ತೂಂದು ಪೂರಕ. ‘ಜ್ಞಾನ’ಪೂರ್ಣವಾಗಿಯೇ ‘ಕಾರ್ಯ’ವೆಸಗಬೇಕು. ‘ಕರ್ಮ’ ವೆಸಗುತ್ತಲೇ ‘ಜ್ಞಾನ’ವನ್ನು ವಿಸ್ತರಿಸಿಕೊಳ್ಳಬೇಕು ಅಥವಾ ‘ಕರ್ಮ’ವೇ ‘ಜ್ಞಾನ’ ವಿಸ್ತರಣೆಗೆ ಹಾದಿಯಾಗಬೇಕು.

ಪೂರ್ವಕಾಲದಲ್ಲಿ ಗುರುಕುಲ ಶಿಕ್ಷಣವೆಂದರೆ ವಿದ್ಯಾರ್ಥಿ ಯಾದವನು ವೇದಪಾಠವನ್ನೂ ಕಲಿಯಬೇಕು, ಹೊಲದಲ್ಲಿಯೂ ಗೇಯಬೇಕು. ಇದು ಹಿಂದಿನವರು ಕರ್ಮವನ್ನು ಮಾಡಿಸುತ್ತ ಜ್ಞಾನವನ್ನು ಕೊಟ್ಟ ಬಗೆ.

ಅದಮಾರು ಮಠದ ಹಿರಿಯ ಯತಿಗಳೂ ನಮ್ಮ ಗುರುಗಳೂ ಆಗಿರುವ ಶ್ರೀ ಶ್ರೀ ವಿಶ್ವಪ್ರಿಯ ಶ್ರೀಪಾದರ ಪಥದರ್ಶಿತ್ವದಲ್ಲಿ ಈ ಸಲದ ಪರ್ಯಾಯ ಮಹೋತ್ಸವದ‌ಲ್ಲಿ ಹೊಸ ಬಗೆಯ ‘ಪ್ರಯತ್ನ’ಗಳನ್ನು ಮಾಡಬೇಕೆಂದಿದೆ. ಇವು ಪ್ರಯತ್ನ ಮಾತ್ರ. ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂಬಂಥ ಪ್ರಯತ್ನ. ಭಿನ್ನವಾಗಿ, ಹೊಸದಾಗಿ, ವಿಶಿಷ್ಟವಾಗಿ- ಮಾಡುತ್ತೇನೆಂಬ ಅತಿಶಯವಾದ ಅಭಿಮಾನ ನಮ್ಮಲ್ಲಿಲ್ಲ.

ಉದಾಹರಣೆಗೆ ಕಲ್ಪಿಸಿಕೊಳ್ಳಿ- ಬೆಂಗಳೂರಿನಂಥ ಮಹಾನಗರಿಯಲ್ಲಿ ಒಮ್ಮೆ ಕರೆಂಟು ಹೋಯಿತು! ಒಮ್ಮೆ ಯಲ್ಲ, ಕೆಲವು ದಿನಗಳವರೆಗೆ ವಿದ್ಯುತ್ತೇ ಇಲ್ಲ. ಏನಾದೀತು? ಪೆಟ್ರೋಲ್‌, ಡೀಸೆಲ್‌ಗ‌ಳ ಪೂರೈಕೆಯೇ ಕೆಲವು ದಿನಗಳ ಮಟ್ಟಿಗೆ ಸ್ಥಗಿತಗೊಂಡರೆ ಏನಾದೀತು? ನಗರವೇ ಮೇಲೆ ಕೆಳಗಾದೀತು. ಸಿಕ್ಕಿದ್ದನ್ನು ತಿಂದು ಬದುಕುವ ಸ್ಥಿತಿ ಬಂದೊದಗೀತು.

ಹಳ್ಳಿಯಲ್ಲಿ ಹಾಗಾಗುತ್ತದೆಯೆ? ಸಾಧ್ಯವಿಲ್ಲ. ಕರೆಂಟ್‌ ಇಲ್ಲದಿದ್ದರೂ, ಪೆಟ್ರೋಲ್‌ ಇಲ್ಲದಿದ್ದರೂ ಸಾಯುವ ಸ್ಥಿತಿ ಹಳ್ಳಿಗರಿಗೆ ಬರ ಲಾರದು. ಹೇಗಾದರೂ ಬದುಕಿಯಾರು! ಇವತ್ತಿಗೂ ಸ್ವತಂತ್ರವಾಗಿರುವುದು ಹಳ್ಳಿಗಳೇ ಹೊರತು ಪಟ್ಟಣಗಳಲ್ಲ. ಪಟ್ಟಣಗಳ ಮಂದಿಯ ಹಸಿವು ನೀಗಿಸುವ ಸಾಮಗ್ರಿಗಳು ಪೂರೈಕೆಯಾಗುವುದು ಹಳ್ಳಿಗಳಿಂದಲೇ.
ಹೀಗೆ ಮಾತನಾಡುವಾಗಲೆಲ್ಲ ಮೊದಲು ನಮ್ಮನ್ನು ನಾವು ಅವಲಂಬನೆಯಿಂದ ಕಳಚಿಕೊಳ್ಳುವ ಪ್ರಯತ್ನ ಮಾಡಬೇಕು.

ಉದಾಹರಣೆಗೆ, ವಿದ್ಯುದ್ದೀಪ ಎಂದಿಟ್ಟುಕೊಳ್ಳಿ. ಇದರ ಅವಲಂಬನೆ ಯನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು, ಆಗ ಕರೆಂಟು ಹೋದರೂ ದೊಡ್ಡ ತೊಂದರೆಯೇನೂ ಅನ್ನಿಸುವುದಿಲ್ಲ. ದೇವರ ಪೂಜೆಯನ್ನು ವಿದ್ಯುದ್ದೀಪಗಳಿಲ್ಲದೆ ತೈಲದೀಪದ ಬೆಳಕಿನಲ್ಲಿಯೇ ಮಾಡುವ ಪ್ರಯತ್ನ ಮಾಡಬೇಕು. ಇದು ಒಂದು ಬಗೆಯಲ್ಲಿ ಕಾಲಪಥದಲ್ಲಿ ಹಿಂದೆ ಸರಿದಂತೆ. ಹಾಗೆಂದು ವಿದ್ಯುದ್ದೀಪವನ್ನು ಬಳಸಲೇಬಾರದು ಎಂದು ನನ್ನ ಅಭಿಪ್ರಾಯವಲ್ಲ. ಮಿತವಾಗಿ ಬಳಸಿದರೆ ಉತ್ತಮ ಎಂದಷ್ಟೇ ಹೇಳಬಲ್ಲೆ.

ವೃದ್ಧರು ಇದ್ದಾರೆ, ಅವರು ಜೀವನವಿಡೀ ವಿದ್ಯುದ್ದೀಪದ ಬೆಳಕಿನಲ್ಲಿಯೇ ಕಳೆದವರು, ಅವರಿಗೆ ಒಮ್ಮೆಲೆ ಮಿತ ಬಳಕೆಗೆ ಹೊಂದುವುದು ಕಷ್ಟ. ಆದರೆ, ಯುವಪೀಳಿಗೆಯವರು ಇಂಥ ಆದರ್ಶವನ್ನು ಅನುಸರಿಸುವಂತಾದರೆ ಉತ್ತಮ. ‘ನಾನು ಮಾಡುತ್ತೇನೆ’ ಎಂಬ ‘ಅಹಂ’ ನಮ್ಮಲ್ಲಿಲ್ಲ. ‘ಪ್ರಯತ್ನ ಮಾಡುತ್ತೇನೆ’ ಎಂಬುದಷ್ಟೇ ನಮ್ಮ ವಿನಯ.
ಪರ್ಯಾಯ ಪೂರ್ವ ತಯಾರಿಯಲ್ಲಿ ಭತ್ತ, ಬಾಳೆ, ಕಟ್ಟಿಗೆ ಮುಹೂರ್ತಗಳಂಥ ಸಂಪ್ರದಾಯಗಳಿವೆ.

ಇವುಗಳಲ್ಲಿ ಆದಷ್ಟು ಹಳ್ಳಿಯ ಮಂದಿ ಒಳಗೊಳ್ಳುವಂಥ ಪ್ರಯತ್ನ ಮಾಡಿದ್ದೇವೆ. ಸುತ್ತಮುತ್ತಲಿನ ಗ್ರಾಮಗಳಲ್ಲಿರುವ, ನಶಿಸುವ ಸ್ಥಿತಿಯಲ್ಲಿರುವ ಕಲಾಕಾರರ ಕರಕೌಶಲ್ಯದ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಯೋಚನೆಯೂ ಇದೆ. ವಿವಿಧ ಗ್ರಾಮಗಳ ಭಕ್ತಾಭಿಮಾನಿಗಳು ಪರ್ಯಾಯದ ಆರಂಭೋತ್ಸವದ ಸಂದರ್ಭದಲ್ಲಷ್ಟೇ ಹೊರೆ ಕಾಣಿಕೆಗಳನ್ನು ಒಪ್ಪಿಸುವ ಸಂಪ್ರದಾಯವಿದೆ.

ಅದರ ಬದಲಿಗೆ, ಎರಡು ವರ್ಷಗಳ ಪರ್ಯಾಯೋತ್ಸವದ ಬೇರೆ ಬೇರೆ ನಿಗದಿತ ಅವಧಿಗಳಲ್ಲಿ ಹೊರೆಕಾಣಿಕೆಗಳನ್ನು ತಂದೊಪ್ಪಿಸುವುದು ಸೂಕ್ತವೆಂದು ನಿರ್ಧರಿಸಿ ಈ ನಿಟ್ಟಿನಲ್ಲಿ ಸಾರ್ವಜನಿಕ ಸಹಕಾರ ಕೋರಿದ್ದೇವೆ. ಪರ್ಯಾಯದ ದಿನವಷ್ಟೇ ಹೊರೆಕಾಣಿಕೆಗಳನ್ನು ನೀಡದೇ, ಎರಡು ವರ್ಷದ ಬೇರೆ ಬೇರೆ ಅವಧಿಗಳಲ್ಲಿ ಹೊರ ಕಾಣಿಕೆಗಳನ್ನು ತಂದೊಪ್ಪಿಸುವುದು ಮಾತ್ರವಲ್ಲದೆ, ಮಠದ ಕಾರ್ಯಕಲಾಪಗಳಲ್ಲಿ ಭಾಗವಹಿಸಬಹುದಾಗಿದೆ.

ಎಷ್ಟೋ ಮಂದಿಗೆ ಪರ್ಯಾಯ ಶ್ರೀಪಾದರನ್ನು ಹತ್ತಿರದಿಂದ ಕಂಡು ಮಂತ್ರಾಕ್ಷತೆ ಸ್ವೀಕರಿಸುವ ಹಂಬಲವಿರುತ್ತದೆ. ಅದು ಕೂಡ ಕೈಗೂಡಲು ಸಾಧ್ಯ. ಜೊತೆಗೆ ಆಚಾರ್ಯ ಮಧ್ವರ ತತ್ವಸಿದ್ಧಾಂತಗಳನ್ನು ಕೇಳಿ, ಬದುಕಿನಲ್ಲಿ ಅಳವಡಿಸಿಕೊಳ್ಳಲು ಅವಕಾಶವನ್ನು ಲೌಕಿಕರಿಗೆ ಒದಗಿಸುವ ಯೋಚನೆ ಇದೆ.

ಶ್ರೀಕೃಷ್ಣನ ಬದುಕು ಕೂಡ ಹಾಗೆಯೇ ಇದ್ದದ್ದು. ನಂದಗೋಕುಲದಲ್ಲಿ ಹಳ್ಳಿಗರೊಂದಿಗೆ ಬದುಕಿದವನು ಆತ. ಶ್ರೀಕೃಷ್ಣ ಪೂಜಾ ಕೈಂಕರ್ಯವನ್ನು ಕೈಗೊಳ್ಳುವ ಸದವಸರದಲ್ಲಿ ‘ಇನ್‌ಕ್ಲೂಸಿವ್‌’ ಆಗುವ ಪ್ರಯತ್ನದ ಜೊತೆಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಯ ವಿಸ್ತರಣೆಯಂಥ ಪ್ರಯತ್ನವನ್ನು ಕೂಡ ನಾವು ಮಾಡುತ್ತೇವೆ.

ಅಜ್ಞಾನ ನಾಶ ಮಾಡುವ ದೇವರ ನಾಮ
ಸನಾತನ ಧರ್ಮದ ಸ್ವರೂಪ ವಿಶಿಷ್ಟವಾದುದು. ಸನಾತನ ಮತ ಪರಂಪರೆಯಲ್ಲಿ ದೇವಸ್ಥಾನ, ಮಠಗಳಂಥ ಧಾರ್ಮಿಕ ಸಂಸ್ಥೆಗಳಿವೆ (Institution). ಕೆಲವರು ಪ್ರತಿನಿತ್ಯ ದೇವಾಲಯಗಳನ್ನು ಸಂದರ್ಶಿಸುತ್ತಾರೆ. ಹೋಗದವರೂ ಇದ್ದಾರೆ. ದೇವಾಲಯಕ್ಕೆ ಹೋದರೂ ಹೋಗದಿದ್ದರೂ ಆತ ಸನಾತನಿಯಾಗಿ ಉಳಿಯುವ ಸೌಲಭ್ಯ ಈ ಧರ್ಮದಲ್ಲಿದೆ. ಇದು ಅನುಕೂಲವೂ ಹೌದು, ಪ್ರತಿಕೂಲವೂ ಹೌದು. ಬೇರೆ ಧರ್ಮಗಳಲ್ಲಿ ಇಂಥ ಸೌಲಭ್ಯಗಳಿಲ್ಲ.

ಇಂಥ ಮುಕ್ತ ಮಾರ್ಗವನ್ನು ಅನುಸರಿಸುತ್ತ, ಅನುಸರಿಸುತ್ತ ಒಬ್ಟಾತ ಪಥಭ್ರಷ್ಟನಾಗುವ ಸಾಧ್ಯತೆಯಿದೆ. ದೇವರ ತಾಣಗಳಿಗೆ ತಮ್ಮನ್ನು ತಾವು ಬಂಧಿಸಿಕೊಳ್ಳಬೇಕು; ಒಂದು ಬಗೆಯಲ್ಲಿ ಗೂಟಕ್ಕೆ ಗೋವನ್ನು ಕಟ್ಟಿದ ಹಾಗೆ. ನಿಜವಾದ ಅರ್ಥದಲ್ಲಿ ಇದು ಬಂಧನವಲ್ಲ, ಬಿಡುಗಡೆಯ ಪಥ !

ನಾವು ಪ್ರತಿನಿತ್ಯ ದೇವಾಲಯಕ್ಕೆ ಹೋಗಬೇಕಾಗಿರುವ ಅಗತ್ಯವಾದರೂ ಏನು? ಯಾವಾಗಲಾದರೂ ಒಮ್ಮೆ ಹೋದರೆ ಸಾಲದೆ ಎಂದು ಕೇಳಬಹುದು. ಇದು ಒಂದು ಬಗೆಯ ಶ್ರದ್ಧೆ. ಇಂಥ ಶ್ರದ್ಧೆ ಇದ್ದರೆ ಮಾತ್ರ ಕೆಲವು ಸಾಧನೆ ಸಾಧ್ಯ.

ನಾವು ಒಂದು ನಗೆಹನಿಯನ್ನು ಕೇಳಿದಾಗ ನಗುತ್ತೇವೆ. ಪದೇ ಪದೇ ಅದನ್ನೇ ಹೇಳಿದರೆ ನಗು ಬರುತ್ತದೆಯೆ? ಇಲ್ಲ. ಒಂದು ಮಾತನ್ನು ಮತ್ತೆ ಮತ್ತೆ ಹೇಳಿದರೆ ಅರ್ಥ ಹೀನವೆನಿಸುತ್ತದೆ. ಹೇಳಿದ್ದನ್ನೇ ಹೇಳುವವನನ್ನು ಮರುಳನೆಂದು ಕರೆಯುತ್ತಾರೆ. ಆದರೆ, ಮಂತ್ರಗಳನ್ನು ಪದೇ ಪದೇ ಉಚ್ಚರಿಸುತ್ತೇವೆ. ಸಾವಿರ ಬಾರಿ ಜಪ ಮಾಡುತ್ತೇವೆ.

ಪ್ರತಿದಿನ ತ್ರಿಕಾಲ ಸಂಧ್ಯಾವಂದನೆ ಮಾಡುತ್ತೇವೆ. ದೇವರ ಮುಂದೆ ಪ್ರಾರ್ಥನೆ ಮಾಡುತ್ತೇವೆ. ಇವುಗಳನ್ನು ಮಾಡಿದಷ್ಟೂ ಉತ್ತಮ. ಪ್ರತಿದಿನ ದೇವಸ್ಥಾನಕ್ಕೆ ಹೋಗಿ ಅದೇ ಪ್ರಾರ್ಥನೆಯನ್ನು ಮತ್ತೆ ಮತ್ತೆ ಮಾಡಿದವನನ್ನು ಯಾರೂ ಮರುಳನೆಂದು ಕರೆಯುವುದಿಲ್ಲ. ಒಂದರ್ಥದಲ್ಲಿ ಆತ ಮರುಳನೇ. ಆದರೆ, ಲೌಕಿಕವಾದ ಮರುಳಾಟವಲ್ಲ ಅದು, ಅಲೌಕಿಕ ನೆಲೆಯ ಮರುಳುತನ. ಅಂಥ ಮರುಳುತನ ಎಲ್ಲರ ಬದುಕಿಗೆ ಅಗತ್ಯ. ಪ್ರತಿನಿತ್ಯ ಯಾಕೆ ಮಂದಿರವನ್ನು ಸಂದರ್ಶಿಸಬೇಕು ಎಂಬುದಕ್ಕೂ ಅಲ್ಲೇ ಉತ್ತರ ಅಡಗಿದೆ.

ಸಾಧನೆಯ ತುರೀಯವನ್ನು ತಲುಪಿದವನು ಮಾತ್ರ ಎಲ್ಲದರಿಂದ ಅತೀತನಾಗಿರುತ್ತಾನೆ. ಸಮಾಧಿ ಸ್ಥಿತಿಯಲ್ಲಿದ್ದವನಿಗೆ ಮೂರ್ತರೂಪದ ದೇವರ ಹಂಗಿರಲಾರದು. ಪೂಜೆ, ಜಪಾದಿಗಳ ಬಂಧನವಿರಲಾರದು. ಆದರೆ, ಅಂಥ ಎತ್ತರವನ್ನು ಏರಿದವರಿಲ್ಲ ; ಇದ್ದರೂ ಅಪೂರ್ವ. ಹಾಗಾಗಿ, ಸಾಮಾನ್ಯ ಲೌಕಿಕರಿಗೆ ಸಂಪ್ರದಾಯವನ್ನು, ಪರಂಪರೆಯನ್ನು ಅನುಸರಿಸುವ ಶ್ರದ್ಧೆ ಅವಶ್ಯವಾಗಿ ಬೇಕು.

ಶಾಸ್ತ್ರ-ಪುರಾಣ ಎಂಬುದರ ಬಗ್ಗೆ ಯಾವುದಾದರೂ ಪ್ರಶ್ನೆಯನ್ನು ಸಾಧಕನಲ್ಲಿ ಕೇಳಿದರೆ ಅವನು ಒಂದು ಉತ್ತರ ಕೊಡುತ್ತಾನೆ. ಆ ಉತ್ತರದಿಂದ ಆ ಸಾಧಕನ ಎತ್ತರವನ್ನು ಅಳೆಯಬಹುದೇ ಹೊರತು ಆ ವಿಷಯದ ಎತ್ತರವಲ್ಲ. ಪ್ರತಿಯೊಂದು ವಿಷಯವೂ ಅದರದೇ ಆದ ಎತ್ತರದಲ್ಲಿರುತ್ತದೆ, ಆಳವಾಗಿರುತ್ತದೆ. ಅದನ್ನು ನಾವು ನಮ್ಮ ಮಟ್ಟದಲ್ಲಿ ಗ್ರಹಿಸುತ್ತೇವೆ. ಹೀಗೆ ಗ್ರಹಿಸಲು ಕೂಡ ಶ್ರದ್ಧೆ ಬೇಕು.

ಕೃಷ್ಣ ಎಂಬ ನಾಮದ ಅರ್ಥವೇನು? ಕರ್ಷತೀತಿ ಕೃಷ್ಣಃ ಆಕರ್ಷಿಸುವವನು ಕೃಷ್ಣ ಎಂದು ಇದರರ್ಥ. ಅದೇ ರೀತಿ ಅಪಕರ್ಷತೀತಿ ಕೃಷ್ಣಃ ಎಂದೂ ತಿಳಿಯಬಹುದು- ನಮ್ಮ ದೋಷಗಳು, ದುರ್ಗುಣಗಳು ಅವನ ಗುಣಾನುಸಂಧಾನದಿಂದ ದೂರವಾಗುತ್ತವೆ ಎಂಬರ್ಥದಲ್ಲಿ. ಆದ್ದರಿಂದ ಆತ ‘ಅಪಂರ್ಷತಿ’.

ಅಂದರೆ ನಮ್ಮ ದೋಷವನ್ನು ನಾಶಮಾಡುವವನು. ಕೃಷ್ಣ ಎಂದರೆ ಕೃಷಿಯಿಂದ ಲಭ್ಯನಾಗುವವನು ಎಂದೂ ತಿಳಿಯಬಹುದು. ಷ ಕಾರ ಅವನ ಬಲವನ್ನು ಸೂಚಿಸುತ್ತದೆ. ದೇವರ ನಾಮವನ್ನು ಒಮ್ಮೊಮ್ಮೆ ಉಚ್ಚರಿಸಿದಾಗ ಒಂದೊಂದು ಅರ್ಥ. ದೇವರನ್ನು ಒಮ್ಮೊಮ್ಮೆ ನೋಡಿದಾಗ ಒಂದೊಂದು ರೀತಿಯ ಪ್ರಸನ್ನಭಾವ. ಅದಕ್ಕಾಗಿಯೇ ಪ್ರತಿಬಾರಿ ಅವನ ನಾಮಸ್ಮರಣೆ ಮಾಡಬೇಕು, ಅವನ ಮೂರ್ತಿಯನ್ನು ದರ್ಶಿಸಬೇಕು.

ತವ ನಾಮ ಕಿಂ? ಎಂದು ಕೆೇಳುತ್ತೇವೆ, ಸಂಸ್ಕೃತದಲ್ಲಿ. ನಿನ್ನ ಹೆಸರೇನು ಎಂಬುದು ಕನ್ನಡದ ವಾಕ್ಯ. ಭಗವಂತನ ಉಪಾಧಿಗಳಿಗೆ ನಾಮ ಎನ್ನುತ್ತೇವೆ. ಲೌಕಿಕರಿಗಿರುವುದು ಹೆಸರು ಮಾತ್ರ. ಲೌಕಿಕರ‌ ಹೆಸರುಗಳಲ್ಲಿ ವಿಶೇಷವೇನಿಲ್ಲ. ‘ಆನಂದ’ ಎಂಬ ಹೆಸರಿನವನು ದುಃಖವನ್ನು ಹೊಂದಿರಬಹುದು. ‘ಪ್ರಿಯಾ’ ಎಂಬ ಹೆಸರಿನವಳು ಪ್ರಿಯಳಾಗಿರಲಾರಳು. ‘ವಿನಯ’ ಎಂಬ ಹೆಸರಿನವರಲ್ಲಿ ಅಹಂಕಾರವಿರಬಹುದು. ಲೌಕಿಕದ ಹೆಸರುಗಳಿಗೂ ಗುಣಗಳಿಗೂ ಸಂಬಂಧವಿಲ್ಲ. ಆದರೆ, ಭಗವಂತನ ನಾಮವು ಅವನ ಗುಣವನ್ನು ಪ್ರತಿನಿಧಿಸುತ್ತದೆ, ಅವನ ರೂಪವನ್ನು ನಮ್ಮ ಮುಂದೆ ಕಡೆದು ನಿಲ್ಲಿಸುತ್ತದೆ. ಅದಕ್ಕಾಗಿಯೇ ಭಗವಂತನ ನಾಮವನ್ನು ಪುನರಾವರ್ತಿತವಾಗಿ ಉಚ್ಚರಿಸಬೇಕೆಂದು ಹೇಳುವುದು.

‘ಮ’ ಎಂದರೆ ಜ್ಞಾನ. ‘ಅ ಮ’ ಎಂದರೆ ಅಜ್ಞಾನ ಎಂದರ್ಥ. ನ ಅಮ ಅಂದರೆ ನಾಮ ಅಂದರೆ ಅಜ್ಞಾನವಿಲ್ಲದ್ದು ಅಂದರೆ ವಸ್ತು ಯಾ ವ್ಯಕ್ತಿಯ ಜ್ಞಾನವನ್ನು ಸರಿಯಾಗಿ ತಂದುಕೊಡುವಂತಹ ಪದ. ಭಗವಂತನನ್ನು ಬೇರೆ ಬೇರೆ ಬಗೆಯಲ್ಲಿ ಅರ್ಥವಿಸಲು ಅಗತ್ಯವಿರುವ ಮಾಧ್ಯಮಗಳೇ ನಾಮಗಳು. ಹಾಗಾಗಿ, ಭಗವಂತನನ್ನು ಬೇರೆ ಬೇರೆ ನಾಮಗಳಲ್ಲಿ ಹೇಳಿದಾಗ ಬೇರೆ ಬೇರೆ ಅರ್ಥಗಳು ಹೊಳೆದು ಅವನನ್ನು ಗ್ರಹಿಸಲು ಅನುಕೂಲವಾಗುತ್ತದೆ.

ಸಾವಿರ ಬಾರಿ ನಾಮೋಚ್ಚಾರಣೆ ಮಾಡುವಾಗ ಒಂದು ಬಗೆಯ ಅನುಸಂಧಾನ ಏರ್ಪಡುತ್ತದೆ. ಅದನ್ನೇ ಆಚಾರ್ಯ ಮಧ್ವರು ಪ್ರತಿಪಾದಿಸಿದ್ದು. “ಸಮಯ ವ್ಯರ್ಥ ಮಾಡದೆ ದೇವರ ನಾಮೋಚ್ಚರಣೆಯಲ್ಲಿ ಕಾಲಕ್ಷೇಪ ಮಾಡು’ ಎಂದಿದ್ದಾರೆ. ಭಗವಂತನ ಧ್ಯಾನ ಮಾಡುತ್ತ ಮಾಡುತ್ತ ಆತನನ್ನು ಸರಿಯಾಗಿ ಗ್ರಹಿಸಲು ಸಾಧ್ಯ ಎಂಬುದನ್ನು ಅವರು ಪ್ರತಿಪಾದಿಸಿದ್ದಾರೆ. ಆಚಾರ್ಯರ ತತ್ವವನ್ನು ಮತ್ತು ಗುರುಗಳ ನಡೆಯನ್ನು ಅನುಸರಿಸುವುದು ನಮ್ಮ ಮುಂದಿರುವ ಲಕ್ಷ್ಯ.

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

13

Guru Purnima Spcl: ತಾಯಿ ಜನ್ಮ ಕೊಟ್ಟಳು, ಗುರು ಪುನರ್ಜನ್ಮಕೊಟ್ಟರು!

Guru Purnima: ಅವರ ಜೀವನವೇ ನನಗೊಂದು ಸಂದೇಶ

Guru Purnima: ಅವರ ಜೀವನವೇ ನನಗೊಂದು ಸಂದೇಶ

Guru Purnima Spcl: ಅರಿವೆಂಬ ಗುರುವು ಗುರುವೆಂಬ ಅರಿವು

Guru Purnima Spcl: ಅರಿವೆಂಬ ಗುರುವು ಗುರುವೆಂಬ ಅರಿವು

Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!

Guru Purnima Spcl: ಅಮ್ಮ, ರಾಜ್‌, ವಿಷ್ಣು ನನ್ನ ಗುರುಗಳು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.