ಬೆಳೆಗಳಿಗೆ ಬೆಂಬಲ ಬೆಲೆ
ಬೆಳೆಗಳಿಗೆ ಬೆಂಬಲ ಬೆಲೆ ಕೇಂದ್ರ ಸಂಪುಟದಿಂದ ಮಹತ್ವದ ನಿರ್ಧಾರ
Team Udayavani, Jul 4, 2019, 5:29 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ಹಾಲಿ ಸಾಲಿನಲ್ಲಿ ದೇಶದಲ್ಲಿ ಮುಂಗಾರು ಮಳೆ ವ್ಯಾಪಿಸುತ್ತಿದ್ದಂತೆ ಕೇಂದ್ರ ಸರ್ಕಾರ ಬೆಳೆಗಾರರಿಗೆ ನೆರವು ನೀಡುವ ಕ್ರಮಗಳನ್ನು ಘೋಷಣೆ ಮಾಡಿದೆ. ಭತ್ತ, ರಾಗಿ ಜೋಳಕ್ಕೆ ಹಾಲಿ ಸಾಲಿನಲ್ಲಿ ಬೆಂಬಲ ಬೆಲೆ ಪರಿಷ್ಕರಿಸುವ ನಿರ್ಧಾರ ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆ ಬುಧವಾರ ಕೈಗೊಂಡಿದೆ.
ಪ್ರತಿ ಕ್ವಿಂಟಲ್ ಭತ್ತಕ್ಕೆ 65 ರೂ, ಜೋಳಕ್ಕೆ 120 ರೂ., ರಾಗಿಗೆ 253 ರೂ. ಬೆಂಬಲ ಬೆಲೆ ನೀಡಲು ನಿರ್ಧರಿಸಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ. ಕಳೆದ ವರ್ಷ ಉತ್ಪಾದನಾ ವೆಚ್ಚದ ಕನಿಷ್ಠ ಶೇ.1.5ರಷ್ಟು ಬೆಲೆ ನೀಡಲು ನಿರ್ಧರಿಸಲಾಗಿತ್ತು. ಅದರಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ‘ಎ’ ದರ್ಜೆಯ ಭತ್ತಕ್ಕೆ ಪ್ರತಿ ಕ್ವಿಂಟಲ್ಗೆ 65 ರೂ. ಬೆಂಬಲ ಬೆಲೆ ಪ್ರಕಟಿಸಲಾಗಿದೆ. 2018-19ರಲ್ಲಿ 200 ರೂ. ಏರಿಕೆ ಮಾಡಲಾಗಿತ್ತು. ಸಾಮಾನ್ಯ ಗ್ರೇಡ್ ಭತ್ತಕ್ಕೆ ಪ್ರತಿ ಕ್ವಿಂಟಲ್ಗೆ 1,815, ಎ ಗ್ರೇಡ್ಗೆ 1,835 ರೂ.ಗೆ ಏರಿಕೆ ಮಾಡಲಾಗಿದೆ. ತೊಗರಿ ಬೇಳೆ, ಹೆಸರು ಬೇಳೆ, ಉದ್ದಿನ ಬೇಳೆಗಳಿಗೆ ಕ್ರಮವಾಗಿ ಪ್ರತಿ ಕ್ವಿಂಟಲ್ಗೆ 215 ರೂ., 75 ರೂ., ಮತ್ತು 100 ರೂ. ಬೆಂಬಲ ಬೆಲೆ ಪ್ರಕಟಿಸಲಾಗಿದೆ.
ಅಭಿವೃದ್ಧಿಗೆ ಹೊಣೆ ಖಾಸಗಿಗೆ: ಮಂಗಳೂರು, ಅಹಮದಾಬಾದ್, ಲಕ್ನೋ ವಿಮಾನ ನಿಲ್ದಾಣಗಳನ್ನು ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೂ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಅದಕ್ಕೆ ಸಂಬಂಧಿಸಿದ ಬಿಡ್ ಪ್ರಕ್ರಿಯೆಯೂ ಮುಕ್ತಾಯವಾಗಿದ್ದು, ಅದಾನಿ ಸಮೂಹ ಸಂಸ್ಥೆ ಕಾಮಗಾರಿ ನಡೆಸಲಿದೆ.
ಕಾರ್ಮಿಕ ಮಸೂದೆ: ಕಾರ್ಮಿಕರ ಸುಧಾರಣೆಗೆ ಸಂಬಂಧಿಸಿದಂತೆ 44 ಕಾನೂನುಗಳನ್ನು ಸಮ್ಮಿಳನಗೊಳಿಸಿ ಹೊಸ ವಿಧೇಯಕ (ಕೋಡ್ ಆನ್ ವೇಜಸ್ ಬಿಲ್) ಅನ್ನು ಸಿದ್ಧಪಡಿಸಲಾಗಿದೆ. ಅದಕ್ಕೂ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಸಂಬಳ, ಸಾಮಾಜಿಕ ಭದ್ರತೆ, ಕೈಗಾರಿಕಾ ಭದ್ರತೆ ಮತ್ತು ಕಲ್ಯಾಣ, ಕೈಗಾರಿಕಾ ಬಾಂಧವ್ಯ ಎಂಬ ಅಂಶಗಳನ್ನು ಸೇರಿಸಿಕೊಳ್ಳಲಾಗಿದೆ. ದೇಶಾದ್ಯಂತ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಪಡಿಸಲು ಇದರಿಂದ ನೆರವಾಗಲಿದೆ. 2017ರಲ್ಲಿ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ನಂತರ ಅದನ್ನು ಸಂಸತ್ನ ಆಯ್ಕೆ ಸಮಿತಿಗೆ ಒಪ್ಪಿಸಲಾಗಿತ್ತು. ಇದರ ಜತೆಗೆ ಬಾಡಿಗೆ ತಾಯ್ತನ (ನಿಯಂತ್ರಣ) ವಿಧೇಯಕ 2019ಕ್ಕೂ ಸಂಪುಟ ಅನುಮೋದನೆ ನೀಡಿದೆ.