ಮರೆಯಲಾಗದ ದಿಲ್ಲಿಪ್ರವಾಸ
Team Udayavani, Apr 12, 2021, 7:01 PM IST
ದೇಶ ಸುತ್ತಿ ನೋಡು; ಕೋಶ ಓದಿ ನೋಡು ಇದು ಹಳೆಯ ಗಾದೆ.
ಜೀವನದಲ್ಲಿ ಅನುಭವ ಮುಖ್ಯ. ಒಂದೊಂದು ಅನುಭವ ಒಂದೊಂದು ಪಾಠವನ್ನು ಕಲಿಸುತ್ತದೆ. ದೇಶವನ್ನು ಸುತ್ತಿ ನೋಡಿದಷ್ಟು ಅನುಭವವಾಗುತ್ತದೆ.
ಪ್ರತಿಯೊಂದು ರೀತಿಯ ಪ್ರವಾಸಗಳು ತಮ್ಮದೆ ಆದ ವೈಶಿಷ್ಟ್ಯತೆ ಗಳನ್ನು ಹೊಂದಿರುತ್ತದೆ. ಪ್ರವಾಸವನ್ನು ಸಾಮಾನ್ಯವಾಗಿ ಹಲವು ಬಗೆಗಳಲ್ಲಿ ವಿಂಗಡಿಸಬಹುದು ಕೌಟುಂಬಿಕ ಪ್ರವಾಸ, ಶೈಕ್ಷಣಿಕ ಪ್ರವಾಸ, ಅಧ್ಯಯನ ಪ್ರವಾಸ, ಹೀಗೆ ಹತ್ತು ಹಲವು ವಿಧಗಳನ್ನು ಈ ಪಟ್ಟಿಗೆ ಸೇರಿಸಬಹುದು.
ನನ್ನ ಪದವಿ ಪೂರ್ವ ಶಿಕ್ಷಣದ ಸಂದರ್ಭದಲ್ಲಿ ನಮ್ಮ ಕಾಲೇಜಿನಲ್ಲಿ ಎನ್ಸಿಸಿ ವತಿಯಿಂದ ಹೊರರಾಜ್ಯಕ್ಕೆ ಕ್ಯಾಂಪ್ ಹೋಗುವ ಅವಕಾಶ ದೊರೆಯಿತು.
ಪ್ರವಾಸಕ್ಕೆ ಸಕಲ ಸಿದ್ಧತೆಯನ್ನು ನಡೆಸಿಕೊಂಡು ಬೆಂಗಳೂರಿನ ಯಶವಂತಪುರ ರೈಲ್ವೇ ಸ್ಟೇಷನ್ಗೆ ಬಂದೆವು ಅಲ್ಲಿ ನಮ್ಮನ್ನು ಕೂಡಿ ಹತ್ತು ಜನರ ಒಂದು ಎನ್ ಸಿ ಸಿ ತಂಡ ರೂಪಗೊಂಡಿತ್ತು. ನಮ್ಮ ಉಸ್ತುವಾರಿಯನ್ನು ಎನ್ಸಿಸಿ ಅಧಿಕಾರಿಗಳಿಗೆ ನೀಡಲಾಗಿತ್ತು. ದಿಲ್ಲಿಗೆ ತಲುಪಿ ಅನಂತರ ದಿಲ್ಲಿಯಿಂದ ಪಂಜಾಬಿನ ಅಮೃತಸರಕ್ಕೆ ಮತ್ತೊಂದು ರೈಲನ್ನು ಬದಲಿಸಿ ಕ್ಯಾಂಪ್ ನಡೆಯುವ ಸ್ಥಳಕ್ಕೆ ಹೋಗಿ ಹೆಸರು ನೊಂದಾಯಿಸಿಕೊಂಡೆವು. ಇದು ಹತ್ತುದಿನಗಳ ಕ್ಯಾಂಪ್ ಆದ್ದರಿಂದ ಇದರಲ್ಲಿ ಮೂರು ದಿವಸ ಪಂಜಾಬಿನ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ದೊರೆಯಿತು.
ಮೊದಲು ವಾಘಾ ಬಾರ್ಡರ್ ಗೆ ಕರೆದುಕೊಂಡು ಹೋದರು. ಅನಂತರ ಪಂಜಾಬಿನ ಪ್ರಸಿದ್ಧ ದೇವಾಲಯವಾದ ಸ್ವರ್ಣಮಂದಿರ. ಈ ಸ್ಥಳ ಖಂಡಿತವಾಗಿಯೂ ಪುಣ್ಯಕ್ಷೇತ್ರವೇ ಹೌದು. ಅಲ್ಲಿನ ಜನರ ನಂಬಿಕೆ ರೀತಿನೀತಿಗಳು ಅಪಾರ. ದೇಶ ಪ್ರೇಮಕ್ಕೆ ಮತ್ತೂಂದು ಹೆಸರೆ ಪಂಜಾಬಿಗರು. ಮುಂದೆ ನಮ್ಮ ಪಯಣ ಜಲಿಯನ್ ವಾಲಾಬಾಗ್ ಕಡೆ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮೂಖವಾಗಿ ಗುತಿಸಲ್ಪಟ್ಟ ಪ್ರದೇಶ. ದೇಶಕ್ಕಾಗಿ ಹಲವು ಮಂದಿ ಹೋರಾಟಗಾರರು ಜೀವತೆತ್ತ ಪುಣ್ಯ ಸ್ಥಳ.
ಮರು ದಿನ ನಮ್ಮನ್ನು ಪಂಜಾಬಿನ ಯುದ್ಧ ಶಸ್ತ್ರಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿ ನಮ್ಮ ದೇಶದ ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳನ್ನು ನೋಡಲು ಅವಕಾಶ ದೊರೆಯಿತು. ಮುಂದೆ ಕ್ಯಾಂಪ್ ಮುಗಿದು ಬೆಂಗಳೂರಿಗೆ ಹೊರಟೆವು. ಪಂಜಾಬಿನಿಂದ ಹೊರಟು ದೆಹಲಿಗೆ ಬಂದು ಅಲ್ಲಿ ಕೆಂಪುಕೋಟೆ, ಸರ್ವೋಚ್ಚ ನ್ಯಾಯಾಲಯವನ್ನು ನೋಡಿದೆವು. ಅನಂತರ ನನ್ನ ನೆಚ್ಚಿನ ಸ್ಥಳ ಉತ್ತರಪ್ರದೇಶದ ತಾಜ್ಮಹಲನ್ನು ನೋಡಲು ಸಹ ಅನುಮತಿ ದೊರೆಯಿತು. ಈ ಪ್ರಸಿದ್ಧ ಸ್ಥಳಗಳನ್ನು ನೋಡಿದ ಕ್ಷಣಗಳನ್ನು ,ಅನುಭವಗಳನ್ನು ಖಂಡಿತವಾಗಿಯೂ ಮರೆಯಲು ಅಸಾಧ್ಯ .
ಪ್ರವಾಸ ಎಂಬುದು ಮೈಮನಗಳನ್ನು ಪುಳಕಿತಗೊಳಿಸುವ, ಉತ್ಸಾಹ, ಹುಮ್ಮಸ್ಸನ್ನು ಇಮ್ಮಡಿಗೊಳಿಸುವ ಮಾರ್ಗ. ಆಯಾ ಸ್ಥಳಗಳ ಸಂಸ್ಕೃತಿ-ಸಂಪ್ರದಾಯಗಳನ್ನು ಹತ್ತಿರದಿಂದ ತಿಳಿದುಕೊಳ್ಳಲು ಅನುಕೂಲಮಾಡಿಕೊಡುತ್ತದೆ.
ಸುಪ್ರಿತಾ ಎಸ್.ಕೆ. ತುಮಕೂರು ವಿವಿ