ಹಾಡಿನ ಲೋಕದಲ್ಲೊಬ್ಬ ಶಿವಶಂಕರ
Team Udayavani, Jul 24, 2020, 7:21 PM IST
ಗಾಯನವೆನ್ನುವುದು ಒಂದು ತಪಸ್ಸಿದ್ದಂತೆ. ಅದು ಎಲ್ಲರಿಗೂ ಒಲಿಯುವುದಿಲ್ಲ. ಅದರ ಸಿದ್ಧಿಗೆ ಕಠಿನ ಪರಿಶ್ರಮ, ಸಾಧನೆ ಅತ್ಯಗತ್ಯ.
ಅದಮ್ಯ ಇಚ್ಛಾಶಕ್ತಿ ಹಾಗೂ ಕಲಿಯಬೇಕೆನ್ನುವ ಹಂಬಲವಿದ್ದರೆ ಗಾನಸರಸ್ವತಿಯೇ ಕಂಠದಲ್ಲಿ ನೆಲೆಗೊಳ್ಳುತ್ತಾಳೆ ಎಂಬುದಕ್ಕೆ ಶಿವಶಂಕರ್ ಗೇರುಕಟ್ಟೆ ಸಾಕ್ಷಿ. ಇವರು ಗೇರುಕಟ್ಟೆ ನಿವಾಸಿ ಶಿವಣ್ಣ ಆಚಾರ್ಯ ಮತ್ತು ಜಯಶ್ರೀ ದಂಪತಿಯ ಪ್ರಥಮ ಪುತ್ರ.
ಬಾಲ್ಯದಲ್ಲೇ ಅರಳಿದ ಸಂಗೀತ ಪ್ರೀತಿ
ಹಾಡುವುದೇ ತನ್ನ ಜೀವಾಳ ಎನ್ನುವ ಶಿವಶಂಕರ್ ಕೊರಿಂಜದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸಗೈಯುತ್ತಲೇ ಸಂಗೀತದ ಮೇಲೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.
ಭಾವಗೀತೆ, ದೇಶಭಕ್ತಿಗೀತೆ, ಜಾನಪದ ಗೀತೆ, ಚಿತ್ರಗೀತೆಗಳು ಇವರ ಕಂಠದಲ್ಲಿ ಸುಶ್ರಾವ್ಯವಾಗಿ ಮೂಡಿಬರುತ್ತಿದ್ದವು. ಶಾಲೆಯಲ್ಲಿ ಕೇವಲ ಹವ್ಯಾಸವಾಗಿ ಹಾಡುತ್ತಿದ್ದ ಇವರ ಹಾಡಿನ ಪಯಣ ಪ್ರತಿಭಾ ಕಾರಂಜಿಯಿಂದ ಪ್ರಾರಂಭವಾಯಿತು. ವಿದ್ಯಾರ್ಥಿ ದೆಸೆಯಲ್ಲೇ ಗಾಯನ ಸ್ಪರ್ಧೆಯಲ್ಲಿ ಹಲವಾರು ಬಹು ಮಾನಗಳನ್ನು ತನ್ನ ಮುಡಿಗೇರಿಸಿ ಕೊಂಡಿದ್ದರು.
ಶಿವಶಂಕರ್ ತನ್ನ 11ನೇ ವಯ ಸ್ಸಿನಲ್ಲಿ ವಿದುಷಿ ಶ್ಯಾಮಲಾ ನಾಗರಾಜ್ ಕುಕ್ಕಿಲ ಅವರಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಾಥಮಿಕ ತರಬೇತಿ ಆರಂಭಿಸಿ ದ್ದರಿಂದ ಸಂಗೀತದ ಮೇಲಿನ ಆಸಕ್ತಿ ಇನ್ನಷ್ಟು ಗಟ್ಟಿ ಮಾಡಿತಲ್ಲದೇ ಆ ರಂಗದಲ್ಲಿ ಆಳವಾಗಿ ಅಧ್ಯಯನ ಮಾಡುವಂತೆ ಪ್ರೇರೇಪಿಸಿತು. ಪುಂಜಾಲಕಟ್ಟೆಯ ಸ. ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅವರು ಬೆಳ್ತಂಗಡಿಯಲ್ಲಿರುವ ಶ್ರೀ ಗುರುಮಿತ್ರ ಸಮೂಹದ ಸದಸ್ಯ ರಾಗಿ ಸೇರಿದ್ದರು. ಈ ತಂಡದ ಜತೆಗೂಡಿ ಜಿಲ್ಲಾ ಮತ್ತು ರಾಜ್ಯಮಟ್ಟದ ಯುವಜನಮೇಳದಲ್ಲಿ ಭಾಗವಹಿಸಿದ್ದರು. ಪ್ರತಿ ಸ್ಪರ್ಧೆಯಲ್ಲೂ ಬಹುಮಾನ ಪಡೆದ ಸಾಧನೆ ಮಾಡಿದ್ದರು. 8 ಬಾರಿ ಜಿಲ್ಲಾಮಟ್ಟದ ಸ್ಪರ್ಧೆ ಗಳಲ್ಲಿ ಪ್ರಥಮ ಸ್ಥಾನಿಯಾಗಿದ್ದು ಅವರ ಗಾನ ಪ್ರತಿಭೆಗೆ ಹಿಡಿದ ಕೈಗನ್ನಡಿ.
ಪ್ರಶಸ್ತಿ, ಗೌರವ
2017ರಲ್ಲಿ ರಂಗಗೀತೆ ವಿಭಾಗ ಮತ್ತು 2018ರ ಭಾವಗೀತೆ ವಿಭಾಗದಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ, 2016ರಲ್ಲಿ ಮಂಗಳೂರು ಆಕಾಶವಾಣಿ ನಡೆಸಿದ 92.7 ಬಿಗ್ ಎಫ್.ಎಂ. ಗೋಲ್ಡನ್ ವಾಯ್ಸ…ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆೆ. ಶಿವಶಂಕರ್ ಶ್ರೀ ಶಂಕರ ಚಾನೆಲ್ ನಡೆಸಿದ ಭಜನ್ ಸಾಮ್ರಾಟ್ ರಿಯಾಲಿಟಿ ಶೋದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಉಜಿರೆ ಮತ್ತು ಬೆಳ್ತಂಗಡಿ ಜೆ.ಸಿ.ಐ. ಘಟಕಗಳು ನಡೆಸಿದ ಸ್ಟಾರ್ ಸಿಂಗರ್ ಸ್ಪರ್ಧೆಗಳೆರಡರಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರಲ್ಲದೆ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಯುವ ಸಾಂಸ್ಕೃತಿಕ ಸಾಧಕ ಪುರಸ್ಕಾರ, ಜೆ.ಸಿ.ಐ. ಘಟಕದಿಂದ ಸಮ್ಮಾನ, ಕಲಾಕಾರ್ ಸಮ್ಮಾನ, ಗಾನ ಕೋಗಿಲೆ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ. ನೇತ್ರಾವತಿ ನದಿ ಉಳಿವಿಗಾಗಿ ರಚಿಸಿದ್ದ ನೇತ್ರೆ ಎಂಬ ನಾಟಕಕ್ಕೆ ಹಿನ್ನೆಲೆ ಗಾಯನ ನೀಡಿದ್ದಾರೆ.
ಎಂಜಿನಿಯರ್ ಆಗಿ ಕರ್ತವ್ಯ
ಸಿವಿಲ್ ಎಂಜಿನಿಯರಿಂಗ್ ಮುಗಿಸಿ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಮತ್ತು ಪ್ರವೃತ್ತಿಯನ್ನು ಸರಿದೂಗಿಸಿಕೊಂಡು ಹೋಗುತ್ತಿರುವ ಶಿವಶಂಕರ್ ಇದೀಗ ಪುತ್ತೂರಿನ ವಿದುಷಿ ಸುಚಿತ್ರಾ ಹೊಳ್ಳ ಇವರಿಂದ ಸಂಗೀತ ತರಬೇತಿ ಪಡೆಯುತ್ತಿದ್ದು ಸಂಗೀತ ಕ್ಷೇತ್ರದಲ್ಲಿ ಪ್ರವೀಣನಾಗಬೇಕೆಂಬ ಬಯಕೆ ಹೊಂದಿದ್ದಾರೆ. ವೇದಿಕೆ ಯೆಂದರೆ ಭಯ ಪಡುತ್ತಿದ್ದ ನನಗೆ ಮೈಕ್ ಹಿಡಿದಾಗ ಏನೋ ಹೊಸ ಚೈತನ್ಯ ಸೃಷ್ಟಿಯಾ ದಂತೆ ಭಾಸವಾಗುತ್ತದೆ. ಅದುವೇ ನನಗೆ ನಿರ್ಭಯವಾಗಿ ಹಾಡಲು ಧೈರ್ಯ ನೀಡುವುದು ಎನ್ನುತ್ತಾರೆ ಶಿವಶಂಕರ್.
-ಪೃಥ್ವಿಶ್ ಧರ್ಮಸ್ಥಳ, ಎಸ್ಡಿಎಂ ಕಾಲೇಜು, ಉಜಿರೆ