ಥ್ಯಾಂಕ್ಸ್… :ನನ್ನ ಕನಸಿಗೆ ನೀರೆರೆಯುವ ಅಮ್ಮ
ಯುವಿ ಫ್ಯೂಷನ್ ; ಹದಿನೈದು ದಿನಗಳಿಗೊಮ್ಮೆ ಯುವ ಬೆಳದಿಂಗಳು
Team Udayavani, May 31, 2020, 1:15 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನನ್ನ ಬಗ್ಗೆ ಅರ್ಥಮಾಡಿಕೊಳ್ಳಲು ನನಗೆ ಬರೋಬ್ಬರಿ 19 ವರ್ಷಗಳೇ ಬೇಕಾಯಿತು.
ಒಂದನೇ ತರಗತಿಯಿಂದಲೇ ನಾನು ಇಟ್ಟುಕೊಂಡ ಗುರಿ ಏನೆಂದರೆ ನಾನು ಐ.ಎ.ಎಸ್. ಅಂದು ನನಗೆ ಈ ಹುದ್ದೆಯ ಕಾರ್ಯವ್ಯಾಪ್ತಿಯ ಅರಿವು ಇರಲಿಲ್ಲ. ಬಳಿಕ ಹುದ್ದೆಯ ಮಹತ್ವದ ಅರಿವು ನನ್ನಲ್ಲಿ ಆಯಿತು.
ನನ್ನ ಗುರಿಗಳು ಬದಲಾಗಿದ್ದೂ ಇದೆ. ಒಮ್ಮೆ ಡಾಕ್ಟರ್, ಒಮ್ಮೆ ಏರ್ ಹೊಸ್ಟಸ್ ಹೀಗೆ ಅದು ಮುಂದುವರಿದಿತ್ತು.
ನಾನು ಬೆಳೆಯುತ್ತಾ ಹೋದಂತೆ ಸಮಾಜದ ಬಗ್ಗೆ ಹೆಚ್ಚಿನ ಆಸಕ್ತಿ ಲಭಿಸತೊಡಗಿತು. ಪತ್ರಿಕೆ, ದೂರದರ್ಶನ, ಫೋನುಗಳಿಂದ ಬೇರೆ ಬೇರೆ ರೀತಿಯ ವಿಚಾರಗಳನ್ನು ಕೇಳತೊಡಗಿದೆ. ಇದರಿಂದ ನನ್ನ ಜೀವನದ ಲಕ್ಷ್ಯದಲ್ಲಿ ಬಹುದೊಡ್ಡ ಬದಲಾವಣೆ ಕಾಣಲಾರಂಭಿಸಿತು.
ಸಮಾಜದ ಸ್ಥಿತಿಗತಿಗಳು ಹಾಗೂ ನನ್ನ ಮನೆಯಲ್ಲಿ ನಡೆಯುತ್ತಿದ್ದ ಸಮಸ್ಯೆಗಳು ನನ್ನ ಗುರಿಯಲ್ಲಿನ ಸ್ವಾರ್ಥವನ್ನು ಹಾಗೂ ನನ್ನ ಗುರಿಯನ್ನು ಬದಲಾಯಿಸಿದವು. ಒಂದು ಗುರಿಯನ್ನು ಮಾತ್ರ ಇಟ್ಟುಕೊಂಡಿದ್ದ ನನಗೆ ಹತ್ತಾರು ಗುರಿಗಳು ಮನಸ್ಸಿನಲ್ಲಿ ಮೂಡಿದವು.
ಗುರಿಗಳ ಸಂಖ್ಯೆ ಹೆಚ್ಚಾದಂತೆ ದುಡ್ಡು ಸಂಪಾದಿಸಬೇಕು ಎನ್ನುವ ಹಂಬಲ ಹೆಚ್ಚಾಯಿತು. ದುಡ್ಡಿಗಾಗಿ ಹಾತೊರೆಯುತ್ತಿದ್ದ ನನ್ನಲ್ಲಿ, ದುಡ್ಡೇ ಜೀವನವಲ್ಲ ಎಂಬ ಪಾಠದ ಅರಿವಾಯಿತು. ದುಡ್ಡು ಜೀವನದ ಒಂದು ಭಾಗ ಮಾತ್ರ. ದುಡ್ಡಿನಿಂದ ಬಹಳಷ್ಟು ಕೆಲಸಗಳನ್ನು ನಾನು ಮಾಡಬೇಕೆಂದು ನಿರ್ಧರಿಸಿದ್ದೆ. ಬಳಿಕ ಆ ಕೆಲಸಗಳನ್ನು ನನ್ನ ಗುರಿಯನ್ನಾಗಿ ಬದಲಿಸಿದೆ.
ಇಷ್ಟನ್ನು ಸಾಧಿಸಲು ಯಾರಾದರೊಬ್ಬರ ಸಹಾಯ, ಬೆಂಬಲದ ಮಾತುಗಳು ಇರಲೇಬೇಕು. ನನ್ನ ಸರ್ವಸ್ವವಾದ ಹಾಗೂ ನಡೆದಾಡುವ ದೇವಿಯಾದ ನನ್ನ ತಾಯಿಯ ಸಹಕಾರ ಇದೆ. ನನ್ನ ಗುರಿಗಳನ್ನು ಜೀವಂತವಿರಿಸಿ ಅವುಗಳನ್ನು ಈಡೇರಿಸಲು ನನ್ನಲ್ಲಿ ಶಕ್ತಿತುಂಬುವ ಜವಾಬ್ದಾರಿಯನ್ನು ಹೊತ್ತಿರುವ ಏಕೈಕ ವ್ಯಕ್ತಿ ತಾಯಿ. ನನ್ನನ್ನು ಸಾಧನೆಯ ಅಂಚಿಗೆ ತಲುಪಿಸುವ ಅವಳಿಗೂ ಸಾರ್ಥಕ್ಯವನ್ನು ನೀಡಲು ಇಚ್ಛಿಸುತ್ತೇನೆ.
ಒಂದೇ ಗುರಿಯಿದ್ದರೆ ಅದರೆಡೆಗೆ ಹೋಗುವುದು ಸುಲಭ ಮತ್ತು ಅದರಿಂದ ಯಾವುದೇ ಪಾಠಗಳನ್ನು ನಾನು ಕಲಿಯಲು ಅಸಾಧ್ಯ ಆದ್ದರಿಂದ ಹೆಚ್ಚು ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ನಾನು ಅಹಂಕಾರವನ್ನು ಕಳೆದು ನಿರಹಂಕಾರದಿಂದ ಬೆಳೆಯಬಲ್ಲೆ. ನನ್ನೊಂದಿಗೆ ಇತರರನ್ನು ಬೆಳೆಸಿ, ದೇಶವನ್ನೂ ಬೆಳೆಸಬಲ್ಲೆ. ನಾನು ಅಂದುಕೊಂಡ ಗುರಿಗಳನ್ನು ಮುಟ್ಟಿದರೆ, ಜನನಿ ಮತ್ತು ಜನ್ಮಭೂಮಿಯ ಋಣವನ್ನು ಸ್ವಲ್ಪ ಮಟ್ಟಿಗೆ ತೀರಿಸಿದಂತೆ.
– ಮನೀಷಾ ಕಶ್ಯಪ್, ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ