ಸೆಪ್ಟೆಂಬರ್ 5ರಂದು ರಾಜ್ಯಾದ್ಯಂತ ಕರಾಳ ದಿನಾಚರಣೆ
Team Udayavani, Jun 23, 2017, 3:15 PM IST
ಹುಬ್ಬಳ್ಳಿ: ಅನುದಾನಿತ ಶಾಲಾ-ಕಾಲೇಜು ನೌಕರರಿಗೆ ಸರಕಾರ ಪಿಂಚಣಿ ಯೋಜನೆ ಜಾರಿಗೊಳಿಸದಿದ್ದರೆ ಸೆಪ್ಟಂಬರ್ 5ರ ಶಿಕ್ಷಕರ ದಿನಾಚರಣೆಯಂದು ರಾಜ್ಯಾದ್ಯಂತ ಕರಾಳ ದಿನ ಹಾಗೂ ಆಗಸ್ಟ್ 16ರಂದು ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ತೀರ್ಮಾನಿಸಿದೆ.
ನಗರದ ಸಿದ್ಧಾರೂಢ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಘದ ರಾಜ್ಯ ಕಾರ್ಯಕಾರಣಿಯಲ್ಲಿ ಸದಸ್ಯರು ಈ ತೀರ್ಮಾನ ಕೈಗೊಂಡರು. 1-4- 2006ರ ಪೂರ್ವದಲ್ಲಿ ನೇಮಕಗೊಂಡು ನಂತರ ಅನುದಾನಕ್ಕೊಳಪಟ್ಟ ಹಾಗೂ 1-4-2006ರ ನಂತರ ಅಧಿಕೃತವಾಗಿ ನೇಮಕಗೊಂಡು ವೇತನ ಪಡೆಯುತ್ತಿರುವ ಯಾವೊಬ್ಬ ಅನುದಾನಿತ ಶಾಲಾ-ಕಾಲೇಜಿನ ನೌಕರನಿಗೆ ಸರಕಾರ ಪಿಂಚಣಿ ಯೋಜನೆ ಜಾರಿಗೊಳಿಸಿರುವುದಿಲ್ಲ.
ಈ ಯೋಜನೆ ಜಾರಿಗಾಗಿ ಸಂಘಟನೆಯು ಅನೇಕ ಬಾರಿ ಹೋರಾಟ ಮಾಡಿತು. ಆದರೂ ಇದುವರೆಗೆ ಸರಕಾರ ಸಂಘದ ಬೇಡಿಕೆಗಳನ್ನು ಈಡೇರಿಸಿಲ್ಲ. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ.
ಈ ಎರಡು ಹಂತಗಳ ಪ್ರತಿಭಟನೆಗೆ ಸರಕಾರ ಸ್ಪಂದಿಸದಿದ್ದರೆ ಅಕ್ಟೋಬರ್ ನಲ್ಲಿ ರಾಜ್ಯಮಟ್ಟದಲ್ಲಿ ಪಿಂಚಣಿ ವಂಚಿತ ನೌಕರರ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ಅನಿದಿಷ್ಟಾವಧಿಯ ಹೋರಾಟ ಮಾಡಲು ಹಾಗೂ ಸಮಾವೇಶದ ದಿನಾಂಕವನ್ನು ನಂತರ ನಿಗದಿಪಡಿಸಲು ತೀರ್ಮಾನಿಸಿದರು.
ಸಭೆಯಲ್ಲಿ ರಾಜ್ಯಾಧ್ಯಕ್ಷ ಜಿ. ಹನಮಂತಪ್ಪ ಮಾತನಾಡಿ, ಸರಕಾರ ಅನುದಾನಿತ ನೌಕರರ ಸೇವೆಗೆ ಸೇರಿದ ದಿನಾಂಕ ಪರಿಗಣಿಸಿ ಅಖಂಡ ಸೇವೆ ಆಧಾರದ ಮೇಲೆ ವೇತನ ನಿಗದಿಗೊಳಿಸಿ ಪಿಂಚಣಿ ನೀಡಬೇಕು. 1-4-2006ರ ನಂತರ ನೇಮಕಗೊಂಡ ಪ್ರತಿಯೊಬ್ಬ ನೌಕರನಿಗೂಹಳೆಯ ನಿಶ್ಚಿತ ಪಿಂಚಣಿಯನ್ನೆ ನೀಡಬೇಕು.
ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಭವಿಷ್ಯದಲ್ಲಿ ನೇಮಕವಾಗುವ ಅನುದಾನಿತ ನೌಕರನಿಗೆ ಸರಕಾರಿ ನೌಕರರಿಗೆ ಇರುವಂತೆ ನೂತನ ಪಿಂಚಣಿ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಅನುದಾನಿತ ನೌಕರರು ಒಗ್ಗಟ್ಟಾಗಿ ಹೋರಾಟ ಮಾಡಿದಿದ್ದರೆ ಸರಕಾರ ನಮ್ಮ ಸಮಸ್ಯೆ ಪರಿಹರಿಸಲಾರದು ಎಂದರು.
ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಂಘಟನೆ ಮುಖಂಡರಾದ ಕೆ.ವೈ. ಹಡಗಲಿ, ಆರ್.ಎ. ಸನದಿ, ಎಚ್.ಎಂ. ಶಶಿಕುಮಾರ, ಆರ್. ಎಸ್. ಗಂಗನಹಳ್ಳಿ, ಅಜಮೀರ ನಂದಾಪುರ, ಗಣೇಶ ಶೆಟ್ಟಿಗಾರ, ಆಂಜನೇಯ, ಗಂಗೂರ, ಡಾ| ಸರ್ವಮಂಗಳಾ ಕುದರಿ, ಮಲ್ಲಿಕಾರ್ಜುನ ಬಿರಾದಾರ, ಬಿ.ಜಿ. ಕೊರಗ, ದಳವಾಯಿ, ಚಂದಪ್ಪ ಯಾದವ, ಅಂತ್ಯಪ್ಪ ಬಿರಾದಾರ, ಡಿ.ಕೆ. ಬಳಗಾನೂರ, ವಿನಾಯಕ ಶೇಟ್ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ