ಬಳ್ಕುಂಜೆಯವರ ಬರಹಗಳು ಸಮಾಜಕ್ಕೆ ಮಾರ್ಗದರ್ಶಕ: ಮುರಳಿ ಕೆ. ಶೆಟ್ಟಿ
ಬೋಂಬೆ ಬಂಟ್ಸ್ ಅಸೋಸಿಯೇಶನ್ನಿಂದ ಸಾಹಿತಿ ರಾಮ ಮೋಹನ್ ಬಳ್ಕುಂಜೆ ಅವರಿಗೆ ಅಭಿನಂದನ ಸಮಾರಂಭ
Team Udayavani, Sep 19, 2021, 2:13 PM IST
ನವಿಮುಂಬಯಿ: ಬೋಂಬೆ ಬಂಟ್ಸ್ ಅಸೋಸಿಯೇಶನ್ ಇದರ ಸಯಾನ್ ಕಚೇರಿಯಲ್ಲಿ ನಿರತರಾಗಿರುವ ಬಳ್ಕುಂಜೆ ಎಂದರೆ ಎಲ್ಲರಿಗೂ ಗೊತ್ತು. ರಾಮಮೋಹನ್ ಎಂಬುದು ಅವರ ನಿಜ ಹೆಸರಾದರೂ ಎಲ್ಲರೂ ಅವರನ್ನು ಬಳ್ಕುಂಜೆ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಎಲ್ಲರೊಂದಿಗೆ ಬೆಸುಯುವ ಅಪರೂಪದ ವ್ಯಕ್ತಿತ್ವ. ದುಡ್ಡಿನಿಂದ ಜಗತ್ತನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ಪ್ರೀತಿಯಿಂದ ಜಗವನ್ನು ಗೆಲ್ಲಬಹುದು ಎಂಬುದಕ್ಕೆ ಬಳ್ಕುಂಜೆಯರು ನಿದರ್ಶನ. ಸುಸಂಸ್ಕೃತ, ಸೃಜನಶೀಲ ಲೇಖಕರಾಗಿರುವ ಅವರು ಪತ್ರಪುಷ್ಪದ ಸಂಪಾದಕರಾಗಿ ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಭಿವೃದ್ಧಿಯಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಭಾವಜೀವಿಯಾಗಿ ಅಂತರ್ಯ ದಲ್ಲಿ ಸ್ನೇಹಪರತೆಯ ಬಂಧುತ್ವವನ್ನು ತುಂಬಿಕೊಂಡು ಬೋಂಬೆ ಬಂಟ್ಸ್ ಅಸೋಸಿಯೇಶನ್ ಆಡಳಿತ ಪ್ರಬಂಧಕರಾಗಿ ನಮ್ಮೊಂದಿಗಿದ್ದ ಸರಳ ವ್ಯಕ್ತಿತ್ವ ಶಾಂತಿಪ್ರಿಯ ವ್ಯಕ್ತಿಯಾಗಿದ್ದಾರೆ ಎಂದು ಬೋಂಬೆ ಬಂಟ್ಸ್ ಅಸೋಸಿ ಯೇಶನ್ ಅಧ್ಯಕ್ಷ ಮುರಳಿ ಕೆ. ಶೆಟ್ಟಿ ನುಡಿದರು.
ಇತ್ತೀಚೆಗೆ ಸಯಾನ್ನ ನಿತ್ಯಾನಂದ ಸಭಾಗೃಹದಲ್ಲಿ ಜರಗಿದ ಬೋಂಬೆ ಬಂಟ್ಸ್ ಅಸೋಸಿಯೇಶನ್ ಮುಖವಾಣಿ ಪತ್ರಪುಷ್ಪದ ಸಂಪಾದಕ, ಸಾಹಿತಿ ರಾಮ ಮೋಹನ್ ಬಳ್ಕುಂಜೆ ಅವರ ವಿದಾಯಕೂಟ ಮತ್ತು ಅಭಿನಂದನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಮಾರು 25 ವರ್ಷಗಳ ಸೇವಾವಧಿಯ ಪ್ರಾರಂಭದಲ್ಲಿ ಕಚೇರಿಯ ಪ್ರಬಂಧಕರಾಗಿ, 2005ರಿಂದ ಅಸೋಸಿಯೇಶನ್ ಮುಖವಾಣಿ ಪತ್ರಪುಷ್ಪದ ಸಂಪಾದಕರಾಗಿ ಆಯ್ಕೆಯಾದರು. ಅವರ ಸಂಪಾದಕೀಯ ಬರಹಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತಿತ್ತು. ಅವರ ನಿವೃತ್ತಿಯ ಜೀವನ ಸುಖ, ಶಾಂತಿ, ಆರೋಗ್ಯ, ಐಶ್ವರ್ಯದಿಂದ ಕೂಡಿರಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಹಾಗೂ ರಿಜೆನ್ಸಿ ಹೊಟೇಲ್ ಸಮೂಹದ ಮಾಲಕ ಜಯರಾಮ ಎನ್. ಶೆಟ್ಟಿ ಅವರು ಉಪಸ್ಥಿತರಿದ್ದರು. ಆರಂಭದಲ್ಲಿ ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ರಂಗಕರ್ಮಿ, ಸಾಹಿತಿ ನಾರಾಯಣ ನಂದಳಿಕೆ ಅವರು ರಾಮ್ಮೋಹನ್ ಅವರನ್ನು ಅಭಿನಂದಿಸಿ ಮಾತನಾಡಿದರು. ಬಳ್ಕುಂಜೆಯವರ ಸಾಧನೆಗಳ ಬಗ್ಗೆ ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷರಾದ ಎನ್. ಸಿ. ಶೆಟ್ಟಿ, ಜಯರಾಮ ಎಸ್. ಮಲ್ಲಿ, ನ್ಯಾಯವಾದಿ ಕಡಂದಲೆ ಪ್ರಕಾಶ್ ಎಲ್. ಶೆಟ್ಟಿ, ರತ್ನಾಕರ ವಿ. ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ನ್ಯಾಯವಾದಿ ಉಪ್ಪೂರು ಶೇಖರ್ ಶೆಟ್ಟಿ, ನ್ಯಾಯವಾದಿ ಡಿ. ಕೆ. ಶೆಟ್ಟಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ್ ಎಸ್. ಶೆಟ್ಟಿ, ಪತ್ರಪುಷ್ಪ ಸಮಿತಿಯ ಕಾರ್ಯಾಧ್ಯಕ್ಷ ಕಿಶೋರ್ ಶೆಟ್ಟಿ, ನ್ಯಾಯವಾದಿ ಅಶೋಕ್ ಶೆಟ್ಟಿ, ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅವರು ಮಾತನಾಡಿ ಶುಭಹಾರೈಸಿದರು.
ಇದನ್ನೂ ಓದಿ:ಯಜಮಾನ ಚಿತ್ರಕ್ಕೆ ‘ಸೈಮಾ’ ಪ್ರಶಸ್ತಿಗಳ ಗೊಂಚಲು |ಈ ಯಶಸ್ಸಿಗೆ ಅಭಿಮಾನಿಗಳೇ ಕಾರಣ ಎಂದ ದರ್ಶನ್
ಮಹಿ ಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಅರುಷಾ ಎನ್. ಶೆಟ್ಟಿ ಅವರು ಮಾತನಾಡಿ, 2006ರಲ್ಲಿ ಶ್ರೀಮತಿ ಜಯಂತಿ ಕುರ್ಕಾಲ್ ಪ್ರಶಸ್ತಿ ಯನ್ನು ಪಡೆದ ಬಳ್ಕುಂಜೆ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆಗೈದಿದ್ದಾರೆ ಎಂದು ನುಡಿದು ಅವರಿಗೆ ಶುಭಹಾರೈಸಿದರು. ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಗೋಪಾಲ್ ಶೆಟ್ಟಿ ಅವರು ಮಾತನಾಡಿ, ಬಳ್ಕುಂಜೆಯವರು ನಮ್ಮ ಮಹಿಳಾ ವಿಭಾಗಕ್ಕೆ ಕಾಲ ಕಾಲಕ್ಕೆ ಸಲಹೆಗಳನ್ನು ನೀಡುತ್ತಿದ್ದು ಅವರ ಸೇವೆ ಅಪಾರವಾಗಿದೆ. ಇಂದಿನ ಅವರ ಸಮ್ಮಾನ ಅರ್ಥಪೂರ್ಣವಾಗಿದೆ ಎಂದು ನುಡಿದು ಶುಭಹಾರೈಸಿದರು.
ಯುವ ವಿಭಾಗದ ಕಾರ್ಯಾಧ್ಯಕ್ಷ ಶಶಿಕಾಂತ್ ಶೆಟ್ಟಿ ಮಾತನಾಡಿ, ಯುವ ವಿಭಾಗಕ್ಕೆ ಬಳ್ಕುಂಜೆಯವರಿಂದ ದೊರೆತ ಸಹಕಾರ, ಮಾರ್ಗದರ್ಶನ ಅನನ್ಯ. ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಬೋಂಬೆ ಬಂಟ್ಸ್ ಅಸೋಸಿಯೇಶನ್ನ ಪದಾಧಿಕಾರಿಗಳು, ಗಣ್ಯರು ಬಳ್ಕುಂಜೆ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಗೌರವಿಸಿ ಅಭಿನಂದಿಸಿ ಶುಭಹಾರೈಸಿದರು. ಅಸೋಸಿಯೇಶನ್ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಮಾಜಿ ಅಧ್ಯಕ್ಷರುಗಳು, ಕಾರ್ಯಕ್ರಮ ವ್ಯವಸ್ಥಾಪನ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದವರು, ಬಳ್ಕುಂಜೆಯವರ ಹಿತೈಷಿಗಳು, ಅಭಿಮಾನಿ ಬಳಗದ ವತಿಯಿಂದ ಸಂಗ್ರಹಿಸಲಾದ ನಿಧಿಯನ್ನು ಅತಿಥಿ-ಗಣ್ಯರು ಬಳ್ಕುಂಜೆ ಅವರಿಗೆ ಪ್ರದಾನಿಸಿ ಶುಭಹಾರೈಸಿದರು. ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಕಾರ್ಯದರ್ಶಿ, ಅಸೋಸಿಯೇಶನ್ ಕಾರ್ಯಕಾರಿ ಸಮಿತಿಯ ಸದಸ್ಯ ಪೇಟೆಮನೆ ಪ್ರಕಾಶ್ ಶೆಟ್ಟಿ ನಿರ್ವಹಿಸಿದರು. ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ ಶೆಟ್ಟಿ ವಂದಿಸಿದರು.
ಈ ಮೊದಲು 14 ವರ್ಷಗಳ ಕಾಲ ಬೇರೊಂದು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಬಹಳಷ್ಟು ಕಷ್ಟವನ್ನು ಅನುಭವಿಸಿದ್ದೆ. ಆದರೆ ಇಲ್ಲಿನ ನನ್ನ 25 ವರ್ಷಗಳ ಸೇವೆಯಲ್ಲಿ ನನಗೆ ಸಿಕ್ಕ ಪ್ರೀತಿ, ಗೌರವ, ಅಭಿಮಾನವನ್ನು ನಾನು ಜೀವನ ಪರ್ಯಂತ ಮರೆಯುವಂತಿಲ್ಲ. ಇದಕ್ಕೆ ಕಾರಣ ಇವರೆಲ್ಲರೂ ನಮ್ಮವರು. ನನ್ನ ಕುಟುಂಬ ಎಂಬ ಭಾವನೆ ನನ್ನಲ್ಲಿ ಬೆಳೆದಿದೆ. ಇಂದು ನಿಮ್ಮೆಲ್ಲರನ್ನು ಬಿಟ್ಟು ಹುಟ್ಟೂರಿಗೆ ತೆರಳುವಾಗ ಮದುವೆಯ ದಿವಸ ಗಂಡನ ಮನೆಗೆ ಹೆಣ್ಣೊಬ್ಬಳು ಹೋಗುವ ಮನಸ್ಥಿತಿ ನನ್ನದಾಗಿದೆ. ಇಂದು ನನಗೆ ಬಹಳಷ್ಟು ಮಾನಸಿಕ ವೇದನೆಯಾಗುತ್ತಿದೆ. ನನಗೆ ಏನೇ ಕಷ್ಟ ಬಂದರೂ ಅಪತ್ಕಾಲದಲ್ಲಿ ಇಲ್ಲಿಯವರೆಲ್ಲರೂ ನನ್ನನ್ನು ಅವರ ಕುಟುಂಬದ ಓರ್ವ ಸದಸ್ಯನಂತೆ ಕಂಡಿದ್ದಾರೆ. ನಾನು ಅಸೋಸಿಯೇಶನ್ಗೆ ಋಣಿಯಾಗಿದ್ದೇನೆ. ಕಾರ್ಯಕ್ರಮದ ಆಯೋಜಕ ಶ್ರೀಧರ ಶೆಟ್ಟಿ ಅವರಿಗೆ ಕೃತಜ್ಞನಾಗಿದ್ದೇನೆ.
-ರಾಮ ಮೋಹನ್ ಬಳ್ಕುಂಜೆ, ಸಮ್ಮಾನಿತರು
ಸರಳ, ಸಜ್ಜನ ವ್ಯಕ್ತಿತ್ವದ ಬಳ್ಕುಂಜೆಯವರು 82ರ ಹರೆಯದ ನವ ತರುಣ. ಅವರಿಗೆ ಅಷ್ಟು ವಯಸ್ಸಾದರೂ ಅವರ ಪಾದರಸದಂತಹ ಕಾರ್ಯಚಟುವಟಿಕೆ ಇತರರಿಗೆ ಮಾದರಿ. ಅವರ ಚಿಂತನ-ಚಿಲುಮೆ ಬರಹಗಳು ಸಮಾಜಕ್ಕೆ ದಾರಿದೀಪವಾಗಿದ್ದು, ಮುಂಬಯಿ ಸಾಹಿತ್ಯ ಕ್ಷೇತ್ರಕ್ಕೆ ಅವರ ಸೇವೆ ಅಪಾರವಾಗಿದೆ. ಬೋಂಬೆ ಬಂಟ್ಸ್ ಅಸೋಸಿಯೇಶನ್ನ ಮುಖವಾಣಿಗೆ ಹೊಸ ಆಯಾಮವನ್ನು ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.
-ನಾರಾಯಣ ಶೆಟ್ಟಿ ನಂದಳಿಕೆ, ರಂಗಕರ್ಮಿ, ಸಾಹಿತಿ
ಬಳ್ಕುಂಜೆಯವರು 82 ರ ಹರೆಯದವರೆಗೆ ಬೋಂಬೆ ಬಂಟ್ಸ್ ಅಸೋಸಿಯೇಶನ್ನಲ್ಲಿ ಸೇವೆಗೈದು ಡಬ್ಬಲ್ ನಿವೃತ್ತಿಯನ್ನು ಪಡೆಯುತ್ತಿರುವುದು ಅಭಿಮಾನದ ಸಂಗತಿ. ಅವರ ಸಂಪಾದಕೀಯದಲ್ಲಿ ಇರುತ್ತಿದ್ದ ಸಾಮಾಜಿಕ ಕರ್ತವ್ಯಪ್ರಜ್ಞೆ ನಮಗೊಂದು ಪಾಠವಾಗಿದೆ. ದೇವರು ಅವರಿಗೆ ಸುಖ, ಶಾಂತಿ, ಆಯುರಾರೋಗ್ಯವನ್ನಿತ್ತು ನೂರಾರು ವರ್ಷಗಳ ಕಾಲ ಬಾಳುವಂತೆ ಅನುಗ್ರಹಿಸಲಿ. ಭವಿಷ್ಯದಲ್ಲಿ ಅವರಿಗೆ ಯಾವುದೆ ಸಂಕಷ್ಟ ಬಂದರೂ ಅಸೋಸಿಯೇಶನ್ ಮುಖಾಂತರ ಅವರೊಂದಿಗೆ ನಾವು ಸದಾಯಿದ್ದೇವೆ.
-ಕಡಂದಲೆ ಜಯರಾಮ್ ಶೆಟ್ಟಿ
ಮಾಲಕರು, ರಿಜೆನ್ಸಿ ಹೊಟೇಲ್ ಸಮೂಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ