ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಉಚಿತ ಅಕ್ಕಿ: ಯು.ಟಿ. ಖಾದರ್
Team Udayavani, Mar 19, 2017, 12:20 PM IST
ಬೆಳಗಾವಿ:ರಾಜ್ಯದಲ್ಲಿರುವ ಅನಾಥಾಶ್ರಮ ಹಾಗೂ ವೃದ್ಧಾಶ್ರಮ ಸೇರಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸಂಸ್ಥೆಗಳನ್ನು ಗುರುತಿಸಿ ಅವುಗಳಿಗೆ ಉಚಿತವಾಗಿ ಅಕ್ಕಿ ಪೂರೈಸಲು ಸರ್ಕಾರ ನಿರ್ಧರಿಸಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂತಹ ಸಂಸ್ಥೆಗಳನ್ನು ಗುರುತಿಸಿ ಅರ್ಜಿ ಸ್ವೀಕರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮುಂದಿನ ತಿಂಗಳಿಂದ ಈ ಯೋಜನೆ ಜಾರಿಗೆ ಬರಲಿದ್ದು, ಇದರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು. ದಾಸೋಹ ಯೋಜನೆಯಡಿ ತಲಾ ಒಬ್ಬ ವ್ಯಕ್ತಿಗೆ 15 ಕೆಜಿಯಂತೆ ಆರು ತಿಂಗಳ ಅಕ್ಕಿಯನ್ನು ಏಕಕಾಲಕ್ಕೆ ನೀಡಲಾಗುವುದೆಂದು ಸಚಿವರು ಹೇಳಿದರು. ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಮೀಣ ಪ್ರದೇಶದ ಕಾರ್ಡ್ದಾರರು ನಮಗೆ ಸೀಮೆ ಎಣ್ಣೆ ಬೇಡವೆಂದು ಬರೆದುಕೊಟ್ಟರೆ ಅವರಿಗೆ ಪುನರ್ ಬೆಳಕು ಯೋಜನೆಯಡಿ ಉಚಿತವಾಗಿ ಎರಡು ರಿಚಾರ್ಜಬಲ್ ಎಲ್ಇಡಿ ಬಲ್ಬ್ಗಳನ್ನು ನೀಡಲಾಗುವುದೆಂದು ಹೇಳಿದರು.