ರಾಮ ಮಂದಿರಕ್ಕೆ ಸಿಮೆಂಟ್; ಅಯೋಧ್ಯೆಯತ್ತ ಕೊಪ್ಪಳದ ಮುಸ್ಲಿಂ ಯುವಕ!
Team Udayavani, Apr 27, 2017, 11:40 AM IST
ಕೊಪ್ಪಳ:ದ್ವೇಷ ಭಾವನೆಗೆ ಬೇಸತ್ತ ಮುಸ್ಲಿಂ ಯುವಕನೊಬ್ಬ ಭಾವೈಕ್ಯ ಸಾರಲು ಶ್ರೀರಾಮನ ಜನ್ಮಭೂಮಿ ಅಯೋಧ್ಯೆಗೆ ತೆರಳಲು ಸಿದ್ಧತೆ ನಡೆಸಿದ್ದಾನೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಮುಸ್ಲಿಂ ಯುವಕ ಶಂಶುದ್ದೀನ್ ನದಾಫ್ ಬುಧವಾರ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮಿಗಳಿಂದ ಆಶೀರ್ವಾದ ಪಡೆದು ಪ್ರಯಾಣ ಆರಂಭಿಸಿದ್ದಾನೆ.
ಮಾನವ ಕುಲ ಒಂದೇ. ಯಾರೂ ಮೇಲಲ್ಲ-ಕೀಳಲ್ಲ. ಜಾತಿ-ಮತ, ಭೇದ ಭಾವವಿಲ್ಲ. ಪ್ರಸ್ತುತ ದಿನದಲ್ಲಿ ಎಲ್ಲೆಡೆ ಹಿಂದೂ-ಮುಸ್ಲಿಂ ಜನರ ನಡುವೆ ಧಾರ್ಮಿಕ ಹಬ್ಬ ಆಚರಣೆ ವೇಳೆ ಯಾರೋ ಒಂದಿಬ್ಬರು ಕಿಡಿಗೇಡಿಗಳು ಮಾಡುವ ಗಲಾಟೆಗೆ ಇಡೀ ವ್ಯವಸ್ಥೆಯೇ ವಿನಾಕಾರಣ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಒಂದೇ ಓಣಿ, ವಠಾರದಲ್ಲಿ ವಾಸ ಮಾಡಿದ್ದರೂ ಒಬ್ಬರನ್ನೊಬ್ಬರು ಮುಖ ನೋಡದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಂಘರ್ಷ ಏಕೆ ಎನ್ನುವ ಚಿಂತನೆಗೆ ಒಳಗಾಗಿ ಶಂಶುದ್ದೀನ್ ಈ ನಿರ್ಧಾರಕ್ಕೆ ಮುಂದಾಗಿದ್ದಾನೆ.
ಇಂದು ಪಯಣ
ಶಂಶುದ್ದೀನ್ ಈಗಾಗಲೇ ಟಿಕೆಟ್ ಬುಕ್ ಮಾಡಿಸಿದ್ದು, ಏ.27ರಂದು ಕೊಪ್ಪಳ ರೈಲ್ವೆ ಮೂಲಕ ಅಯೋಧ್ಯೆಗೆ ತೆರಳಲಿದ್ದು, ಏ.29ರಂದು ಅಯೋಧ್ಯೆ ತಲುಪಿ ಅಲ್ಲಿ ಶ್ರೀರಾಮನ ಜನ್ಮಭೂಮಿ ದರ್ಶನ ಪಡೆದು ಮೇ.1ಕ್ಕೆ ಅಲ್ಲಿಂದ ಕೊಪ್ಪಳಕ್ಕೆ ಮರಳಲಿದ್ದಾನೆ. ಅಯೋಧ್ಯೆ ದೇವಸ್ಥಾನ ಕಟ್ಟಡಕ್ಕಾಗಿ ಒಂದು ಚೀಲ ಸಿಮೆಂಟ್ ಕೊಡುವ ಕುರಿತು ಹರಕೆ ಹೊತ್ತಿದ್ದಾನೆ.