ಅಕ್ರಮ ಮರಳು ಸಾಗಾಟ ತಡೆಗೆ ಸ್ಕೂಟರ್ನಲ್ಲಿ ತೆರಳಿ ದಾಳಿ ಮಾಡಿದ ಮಂಗಳೂರು ಕಮಿಷನರ್, ಡಿಸಿಪಿ!
Team Udayavani, Feb 28, 2021, 8:45 AM IST
ಉಳ್ಳಾಲ: ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಸ್ಕೂಟರ್ನಲ್ಲಿ ತೆರಳಿ ತಲಪಾಡಿ ಟೋಲ್ಗೇಟ್ ಬಳಿ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಿಸುತ್ತಿದ ಲಾರಿಯನ್ನು ವಶಕ್ಕೆ ತೆಗೆದುಕೊಂಡ ಘಟನೆ ಶನಿವಾರ ಬೆಳಗ್ಗಿನ ಜಾವ ನಡೆದಿದೆ.
ಉಚ್ಚಿಲ, ಸೋಮೇಶ್ವರ ಸಮುದ್ರ ತೀರದಿಂದ ತಡರಾತ್ರಿ ಮರಳು ಕಳ್ಳಸಾಗಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ವಾರದ ಹಿಂದೆ ತಲಪಾಡಿಯ ದೇವಿಪುರ ದೇವಸ್ಥಾನದ ಬಳಿ ಅಕ್ರಮ ಮರಳು ಸಾಗಾಟ ನಡೆಸಿದ ಲಾರಿ ಹಿಮ್ಮುಖವಾಗಿ ಚಲಿಸಿ ಅಪಘಾತವಾದ ಬಳಿಕ ಒಳರಸ್ತೆಗಳಲ್ಲಿ ಮರಳು ಸಾಗಾಟ ನಡೆಯುತ್ತಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ:11 ವರ್ಷ ಸೇವೆ ಸಲ್ಲಿಸಿದ ಬಾಂಬ್ ಪತ್ತೆ ಶ್ವಾನಕ್ಕೆ ಭಾವುಕ ವಿದಾಯ
ಇದಾದ ಬಳಿಕ ಕೆಲವು ದಿನಗಳ ಕಾಲ ಮರಳು ಸಾಗಾಟ ನಿಂತಿದ್ದು, ಇದೀಗ ಮತ್ತೆ ಆರಂಭಗೊಂಡಿರುವ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರಿಗೆ ಮತ್ತು ಇತರ ಅಧಿಕಾರಿಗಳಿಗೆ ಮಾಹಿತಿ ನೀಡದೆ ಕಮಿಷನರ್ ಮತ್ತು ಡಿಸಿಪಿ ಸಾಮಾನ್ಯರಂತೆ ಸ್ಕೂಟರ್ನಲ್ಲಿ ತೆರಳಿ ಟೋಲ್ಗೇಟ್ ಬಳಿ ಕಾದು ಕುಳಿತಿದ್ದರು.
ಎಸ್ಕಾರ್ಟ್ ಕಾರು, ಓರ್ವ ಆರೋಪಿ ವಶಕ್ಕೆ
ಲಾರಿಯನ್ನು ತಡೆಯಲು ಯತ್ನಿಸಿದವರು ಕಮಿಷನರ್ ಮತ್ತು ಡಿಸಿಪಿ ಎಂದು ಗೊತ್ತಿಲ್ಲದ ಮರಳು ಲಾರಿಯ ಎಸ್ಕಾರ್ಟ್ ವಾಹನ (ಕಾರು) ದಲ್ಲಿದ್ದವರು ಮಾತಿನ ಚಕಮಕಿ ನಡೆಸಿದರು. ಆಗ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ ಕಮಿಷನರ್ ಕಾರಿನಲ್ಲಿದ್ದ ಚಂದ್ರ ಎಂಬಾತನನ್ನು ವಶಕ್ಕೆ ತೆಗೆದುಕೊಂಡರು.
ಇದನ್ನೂ ಓದಿ: ಆರೋಪಿಗಳ ಕಾರು ಮಾರಾಟ ಪ್ರಕರಣ : ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು
ಸ್ಥಳದಲ್ಲಿದ್ದ ಟೋಲ್ ಸಿಬಂದಿಯ ಬೈಕ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಕ್ರಮ ಮರಳು ಸಾಗಾಟ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಎರಡು ಪ್ರಕರಣಗಳು ದಾಖಲಿಸಲಾಗಿವೆ.