ನೆಂಪು-ಹೆಮ್ಮಾಡಿ ರಸ್ತೆ ಬದಿಯಲ್ಲಿ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ ಮರಗಳು
Team Udayavani, Mar 6, 2021, 5:10 AM IST
ವಂಡ್ಸೆ: ನೆಂಪುವಿನಿಂದ ಹೆಮ್ಮಾಡಿ ತನಕ ಮುಖ್ಯ ರಸ್ತೆಯ ವಿಸ್ತರಣೆ, ಡಾಮರು ಕಾಮಗಾರಿ ಪೂರ್ಣಗೊಂಡಿದೆ. ಆದರೆ ರಸ್ತೆಗೇ ತಾಗಿಕೊಂಡಂತೆ ಮರಗಳು ಇದ್ದು ಇವುಗಳ ವಿಲೇವಾರಿ ಮಾಡದೇ ಇರುವುದರಿಂದ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.
ನೆಂಪುವಿನಿಂದ ಹೆಮ್ಮಾಡಿವರೆಗೆ ಉತ್ತಮ ರಸ್ತೆ ನಿರ್ಮಾಣಗೊಂಡಿದ್ದು, ಕೊಲ್ಲೂರು ಕ್ಷೇತ್ರಕ್ಕೆ ಹೋಗುವ ಪ್ರಯಾಣಿಕರಿಗೆ ಅನಾಯಾಸ ಪ್ರಯಾಣ ಕಲ್ಪಿಸಲು ನೆರವಾಗಿದೆ. ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರು ಸರಕಾರದಿಂದ 20 ಕೋ.ರೂ. ವೆಚ್ಚದಲ್ಲಿ ರಸ್ತೆ ಕಾಮ ಗಾರಿಗೆ ಅನುದಾನ ಒದಗಿಸಿದ್ದರು. ಆದರೆ ರಸ್ತೆಯಂಚಿನ ಮರಗಳನ್ನು ಸ್ಥಳಾಂತರಿಸುವುದು ಅಥವಾ ಕಡಿಯದೇ ಇರುವುದರಿಂದ ಸಮಸ್ಯೆ ಎದುರಾಗಿದೆ.
ಸ್ಟಿಕ್ಕರ್ ಬಳಸಲು ಸಲಹೆ
ರಸ್ತೆಯಂಚಿನಲ್ಲಿರುವ ಮರಗಳು ಅಪಾಯಕಾರಿಯಾಗಿದ್ದರೂ, ಅವು ಗಳನ್ನು ಕಡಿಯುವುದರ ಬದಲಾಗಿ ವಾಹನ ಚಾಲಕರಿಗೆ ರಾತ್ರಿಯೂ ಕಾಣಿಸು ವಂತೆ ಅವುಗಳಿಗೆ ಪೈಂಟ್ ಕೊಡುವುದು, ಸ್ಟಿಕ್ಕರ್, ರಿಫ್ಲೆಕ್ಟರ್ಗಳನ್ನು ಅಳವಡಿಸುವ ಕೆಲಸವಾಗಬೇಕಿದೆ. ಈ ಬಗ್ಗೆ ಮನವಿ ಸಲ್ಲಿಸಿರುವುದಾಗಿ ನ್ಯಾಯವಾದಿ ಕೆ.ಬಿ. ಶೆಟ್ಟಿಯವರು ಹೇಳುತ್ತಾರೆ.
ಈ ಕೂಡಲೇ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಮರಗಳ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
ಕಾನೂನಿನ ತೊಡಕು
ಮರಗಳು ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು ತೆರವಿಗೆ ಕಾನೂನು ತೊಡಕು ಇದೆ. ಇಲಾಖೆ ಮೇಲಧಿಕಾರಿಗಳು ಅನುಮತಿ ನೀಡಿದರೆ ಮಾತ್ರ ತೆರವು ಮಾಡಬಹುದು ಎಂದು ಅಧಿಕಾರಿ ಗಳು ಹೇಳಿದ್ದಾರೆ.