ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಒಂದು ಆಯ್ಕೆಯಾಗಿದೆ: ಉದ್ಧವ್ ಠಾಕ್ರೆ
ಕೋವಿಡ್ 19 ಲಸಿಕೆಯನ್ನು ಯಾವುದೇ ಭಯವಿಲ್ಲದೆ ತೆಗೆದುಕೊಳ್ಳಬೇಕು
Team Udayavani, Mar 19, 2021, 6:45 PM IST
ನವದೆಹಲಿ: ಒಂದೇ ಸಮನೆ ಹೆಚ್ಚಳವಾಗುತ್ತಿರುವ ಕೋವಿಡ್ 19 ಸೋಂಕು ತಡೆಯಲು ಲಾಕ್ ಡೌನ್ ಒಂದು ಆಯ್ಕೆಯಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ(ಮಾರ್ಚ್ 19) ತಿಳಿಸಿದ್ದಾರೆ.
ಸುದ್ದಿಗಾರರ ಜತೆ ನಡೆಸಿದ ಸಂವಹನದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಜನರು ಕೋವಿಡ್ 19 ಮಾರ್ಗಸೂಚಿಯನ್ನು ಪಾಲಿಸುತ್ತಾರೆ ಎಂಬ ನಂಬಿಕೆ ಇದೆ. ಆದರೂ ಲಾಕ್ ಡೌನ್ ಒಂದು ಆಯ್ಕೆಯಾಗಿದೆ ಎಂದು ಹೇಳಿದರು.
ಪರಿಸ್ಥಿತಿ ಕೈಮೀರುವ ಹಂತದಲ್ಲಿ ಲಾಕ್ ಡೌನ್ ನಮ್ಮ ಆಯ್ಕೆಯಾಗಿದೆ. ಆದರೆ ರಾಜ್ಯದ ಜನರು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂಬುದು ನನ್ನ ವಿಶ್ವಾಸವಾಗಿದೆ. ಜನರು ಸ್ವಯಂ ಆಗಿ ಕೋವಿಡ್ 19 ಮಾರ್ಗಸೂಚಿಯನ್ನು ಅನುಸರಿಸಬೇಕಾಗಿದೆ ಎಂದು ಠಾಕ್ರೆ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಕೋವಿಡ್ 19 ಲಸಿಕೆ ಇದೀಗ ಜತ್ತಿನಲ್ಲಿಯೇ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲು ಜನರು ಕೋವಿಡ್ 19 ಲಸಿಕೆಯನ್ನು ಯಾವುದೇ ಭಯವಿಲ್ಲದೆ ತೆಗೆದುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಠಾಕ್ರೆ ಮನವಿ ಮಾಡಿಕೊಂಡರು.