ಲಸಿಕೆ ಪಡೆಯಲು ಬೆಂಗಳೂರಿಂದ ಬಂದ ಜನ
Team Udayavani, May 11, 2021, 2:09 PM IST
ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಕೋವಿಡ್ ಲಸಿಕೆ ಅಭಾವ ಇರುವ ಕಾರಣ, ಹತ್ತಿರದ ಜಿಲ್ಲೆಗಳಲ್ಲಿ ಪಡೆಯಲು ಮುಗಿಬೀಳುತ್ತಿದ್ದಾರೆ. ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡವರು ಒಮ್ಮೆಲೆ ಕಾರುಗಳಲ್ಲಿ ನೂರಾರು ಮಂದಿ ಆಗಮಿಸುತ್ತಿರುವುದನ್ನು ಕಂಡು ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ 18ರಿಂದ 45 ವರ್ಷದೊಳಗಿನವರು ಲಸಿಕೆ ಪಡೆಯಲು ಸರ್ಕಾರ ಅವಕಾಶ ನೀಡಿದೆ. ಮೊದಲು ಕೋವಿಡ್ ಆ್ಯಪ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಬೆಂಗಳೂರಿನಲ್ಲಿ ಲಸಿಕೆ ಅಲಭ್ಯತೆ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಗೆ ಬೆಂಗಳೂರಿಗರು ಲಗ್ಗೆ ಇಡುತ್ತಿದ್ದಾರೆ. ಕೋವಿನ್ ಆ್ಯಪ್ನಲ್ಲಿ ಎಲ್ಲಿ ಲಸಿಕೆ ಲಭ್ಯತೆ ಇರುತ್ತದೆಯೋ ಅಲ್ಲಿ ಲಸಿಕೆ ಪಡೆಯಲು ರಿಜಿಸ್ಟರ್ ಮಾಡಿಕೊಳ್ಳಬಹುದು.
ಹೀಗಾಗಿ ಬೆಂಗಳೂರಿಗರು ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ, ಶಿಡ್ಲಘಟ್ಟ ತಾಲೂಕಿನಲ್ಲಿ ಲಸಿಕೆ ಪಡೆಯಲು ರಿಜಿಸ್ಟರ್ಮಾಡಿಕೊಂಡಿದ್ದಾರೆ. ಹಾಗಾಗಿ ಬೆಳಗ್ಗಿನಿಂದಲೂ ನೂರಾರು ಮಂದಿ ಆಗಮಿಸಿ ಲಸಿಕೆ ಪಡೆದುಕೊಂಡು ಹೋಗುತ್ತಿದ್ದಾರೆ.
ಸ್ಥಳೀಯರ ಆಕ್ರೋಶ: ಇತ್ತ ಬೆಂಗಳೂರಿಂದ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮಗೇ ಲಸಿಕೆ ಸಿಗಲ್ಲ. ನೀವು ಏಕೆ ಇಲ್ಲಿ ಬರ್ತೀರಾ ಎಂದು ಹೇಳುತ್ತಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಸೋಂಕು ಹೆಚ್ಚುತ್ತಿದೆ. ಇದರಿಂದ ಸ್ಥಳೀಯರಿಗೂ ಹರಡುವ ಆತಂಕವಿದೆ. ಲಸಿಕೆ ಪಡೆಯುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂಬ ದೂರು ಕೇಳಿಬಂದಿದೆ.