ಕೊರೊನಾ ಸೋಂಕು ನಿಯಂತ್ರಣಕ್ಕೆ ಹರಸಾಹಸ
Team Udayavani, May 28, 2021, 9:31 PM IST
ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿನ ಪ್ರಮಾಣ ವಿಪರೀತವಾಗಿದ್ದು, ನಿಯಂತ್ರಣಕ್ಕೆ ಜಿಲ್ಲಾಡಳಿತ ಹರಸಾಹಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಖುದ್ದು ಜಿಲ್ಲಾ ಧಿಕಾರಿಗಳ ನೇತೃತ್ವದಲ್ಲಿ ಅಧಿ ಕಾರಿಗಳ ತಂಡ ಹಳ್ಳಿಗಳಲ್ಲಿ ಸೋಂಕಿತರ ಮನೆಬಾಗಿಲಿಗೆ ಹೋಗಿ ಕೋವಿಡ್ ಕೇರ್ ಸೆಂಟರ್ ಗಳಿಗೆ ಬನ್ನಿ ಎಂದು ಮನವಿ ಮಾಡುತ್ತಿದೆ.
ಕೋವಿಡ್ ಸೋಂಕು ತಗುಲಿ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿರುವವರೇ ಸದ್ಯ ತಲೆನೋವಾಗಿದ್ದು, ಅವರಿಂದ ಮನೆಯ ಇತರೆ ಸದಸ್ಯರಿಗೆ ಸೋಂಕು ತಗಲುವ ಆತಂಕ ದಟ್ಟವಾಗಿದೆ. ಈ ನಿಟ್ಟಿನಲ್ಲಿ ಸೋಂಕಿತರ ಮನವೊಲಿಸುವ ಕಸರತ್ತು ನಡೆಯುತ್ತಿದೆ.
517 ಗ್ರಾಮಗಳಲ್ಲಿ ಸೋಂಕು ಜಾಸ್ತಿ: ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಚಿತ್ರದುರ್ಗ ಜಿಲ್ಲೆಯ 517 ಹಳ್ಳಿಗಳು ಸೋಂಕಿಗೆ ತುತ್ತಾಗಿವೆ. ಈ ಎಲ್ಲಾ 517 ಹಳ್ಳಿಗಳಲ್ಲಿ 6ಕ್ಕಿಂತ ಹೆಚ್ಚು ಪ್ರಕರಣಗಳಿದ್ದು, ಹಾಟ್ಸ್ಪಾಟ್ ಗ್ರಾಮಗಳು ಎಂದು ಗುರುತಿಸಲಾಗಿದೆ.
ಜಿಲ್ಲೆಯ 5500ಕ್ಕಿಂತ ಹೆಚ್ಚು ಸಕ್ರಿಯ ಸೋಂಕಿತರಲ್ಲಿ ಸುಮಾರು 850 ಮಂದಿ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರದುರ್ಗ ತಾಲೂಕಿನ 138 ಹಳ್ಳಿಗಳಿಗೂ ಕೋವಿಡ್ ಸೋಂಕು ವ್ಯಾಪಿಸಿದೆ. ಮೇ 3 ರಿಂದ ಈವರೆಗೆ 783 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 407 ಸಕ್ರಿಯ ಪ್ರಕರಣಗಳಿವೆ. ಚಿತ್ರದುರ್ಗ ತಾಲೂಕಿನ ಪಿಳ್ಳೇಕೆರೆನಹಳ್ಳಿ, ಮದಕರಿಪುರ, ಸೀಬಾರ, ತುರುವನೂರು, ಜಿ.ಆರ್. ಹಳ್ಳಿ, ಕ್ಯಾಸಾಪುರ, ಬೆಳಗಟ್ಟ, ಪಂಡರಹಳ್ಳಿ, ಹಿರೇಗುಂಟನೂರು, ಕಾಲ್ಗೆರೆ, ಡಿ.ಎಸ್. ಹಳ್ಳಿ, ಭೀಮಸಮುದ್ರ, ಕಾಸವರಹಟ್ಟಿ, ವಿಜಯಪುರ, ಸಿ.ಜಿ. ಹಳ್ಳಿ, ಗೊಡಬನಾಳ್ ಗ್ರಾಮದಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದೆ.
ನಗರದ ಪ್ರದೇಶಗಳಲ್ಲಿ ಮಾತ್ರವೇ ಹೆಚ್ಚಿದ್ದ ಕೋವಿಡ್ ಸೋಂಕು ಇದೀಗ ಹಳ್ಳಿ ಹಳ್ಳಿಗೂ ವ್ಯಾಪಿಸಿದೆ. ಮನೆ ಮಂದಿಯೆಲ್ಲ ಸೋಂಕಿಗೆ ತುತ್ತಾಗಿರುವ ಉದಾಹರಣೆಗಳಿವೆ. ಕೋವಿಡ್ ಸೋಂಕಿತರಲ್ಲಿ ಕೆಲವರು ಹೋಂ ಐಸೋಲೇಷನ್, ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಮತ್ತು ಚಿತ್ರದುರ್ಗ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರ ಮನೆಬಾಗಿಲಿಗೆ ಹೊರಟ ಜಿಲ್ಲಾಡಳಿತ: ಗ್ರಾಮೀಣ ಪ್ರದೇಶದಲ್ಲಿ ಶರವೇಗದಲ್ಲಿ ಹರಡುತ್ತಿರುವ ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಳ್ಳಿಗಳತ್ತ ಮುಖ ಮಾಡಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತದ ನೇತೃತ್ವದಲ್ಲಿ “ವೈದ್ಯರ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ದಿನ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮನೆ ಮನೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡುವುದು, ಕೋವಿಡ್ ಸೋಂಕಿನ ಸರಪಳಿ ತುಂಡರಿಸುವುದು ಸೇರಿದಂತೆ ಕೋವಿಡ್-19 ಕುರಿತು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ದಿನ ಬಿಟ್ಟು ದಿನ ಲಾಕ್ಡೌನ್ ಜಾರಿಗೊಳಿಸಲಾಗಿದೆ.
ಕೋವಿಡ್ ಸೋಂಕಿತರಿಗಾಗಿ ಜಿಲ್ಲೆಯಾದ್ಯಂತ ವಿವಿಧೆಡೆ ಹಾಸ್ಟೆಲ್ಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೋವಿಡ್ ಸೋಂಕು ದೃಢಪಟ್ಟ ಸಂದರ್ಭದಲ್ಲಿ ಹೋಂ ಐಸೋಲೇಷನ್ ಬದಲಾಗಿ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗೆ ಸೋಂಕಿತರನ್ನು ಶಿಫ್ಟ್ ಮಾಡಲಾಗುತ್ತಿದೆ.
ಒಟ್ಟಿನಲ್ಲಿ ಹಳ್ಳಿಗಳಲ್ಲಿ ಹೋಂ ಐಸೋಲೇಷನ್ನಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲಿಸಲು ಜಿಲ್ಲಾಡಳಿತ ಪ್ರಯತ್ನ ಆರಂಭಿಸಿದೆ. “ಹಳ್ಳಿ ಕಡೆ ವೈದ್ಯರ ನಡೆ’ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿ ರಿಯಲ್ ಲೈಫ್ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್
Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ
Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ
Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ
Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ