ರಾಬಕೊ ಹಾಲು ಒಕ್ಕೂಟಕ್ಕೂ ಲಾಕ್ಡೌನ್ ಎಫೆಕ್ಟ್
Team Udayavani, Jun 11, 2021, 9:27 PM IST
ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಕೋವಿಡ್ ಸೋಂಕು ಎರಡನೇ ಅಲೆ ಪರಿಣಾಮ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟದ ಮೇಲೂ ಪರಿಣಾಮ ಬೀರಿದೆ. ಸೋಂಕು ನಿಯಂತ್ರಣಕ್ಕಾಗಿ ಕಳೆದ ಒಂದು ತಿಂಗಳಿಂದ ವಿಧಿ ಸಲಾಗಿರುವ ಲಾಕ್ಡೌನ್ನಿಂದ ನಂದಿನಿ ಹಾಲು ಮತ್ತದರ ಉತ್ಪನ್ನಗಳ ಮಾರಾಟ ಕುಸಿದಿದ್ದು, ಹೆಚ್ಚುವರಿ ಹಾಲು ಶಾಲಾ ಮಕ್ಕಳಿಗೆ ವಿತರಿಸಲು ಸಿದ್ಧತೆ ನಡೆಸಿದೆ.
ರಾಬಕೊ ಹಾಲು ಒಕ್ಕೂಟದಲ್ಲಿ ಬಳ್ಳಾರಿ 1.10 ಲಕ್ಷ ಲೀಟರ್, ರಾಯಚೂರು 30 ಸಾವಿರ ಲೀಟರ್, ಕೊಪ್ಪಳ ಜಿಲ್ಲೆ 60 ಲಕ್ಷ ಲೀಟರ್ ಸೇರಿ ಪ್ರತಿದಿನ ಸರಾಸರಿ ಒಟ್ಟು 2 ಲಕ್ಷಕ್ಕೂ ಹೆಚ್ಚು ಹಾಲು ರೈತರಿಂದ ಬರುತ್ತಿದೆ. ಈ ಪೈಕಿ ಮೂರು ಜಿಲ್ಲೆಗಳಲ್ಲಿ ಪ್ರತಿದಿನ 1.35 ಲಕ್ಷ ಲೀಟರ್ ಮಾರಾಟವಾಗುತ್ತಿದ್ದ ಹಾಲು 1.20 ಲಕ್ಷ ಲೀಟರ್ಗೆ ಕುಸಿದಿದ್ದು, ಪ್ರತಿದಿನ 15 ಸಾವಿರ ಲೀಟರ್ ಹಾಲು ಉಳಿಯುತ್ತಿದೆ. ಇನ್ನು ಪ್ರತಿದಿನ 10 ಸಾವಿರ ಲೀಟರ್ ಮೊಸರು ಮಾರಾಟವೂ ಕುಸಿದಿದ್ದು, ಲಾಕ್ಡೌನ್ ನಿಮಿತ್ತ ನಂದಿನಿ ಪಾರ್ಲರ್ ಮಳಿಗೆಗಳು ಬಂದ್ ಆಗಿರುವುದು ಈ ಕುಸಿತಕ್ಕೆ ಕಾರಣವಾಗಿದೆ. ಇದರಿಂದ ಒಕ್ಕೂಟಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನಷ್ಟವಾಗದಿದ್ದರೂ ಮಾರಾಟ ಕುಸಿತವಾಗಿದೆ.
ಪಾರ್ಲರ್ಗಳು ಬಂದ್: ಕೋವಿಡ್ ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್ಡೌನ್ ವಿ ಧಿಸಿದೆ. ಕೆಲವೊಂದು ಜಿಲ್ಲೆಗಳಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ವಿನಾಯಿತಿ ನೀಡಲಾಗಿದೆ. ಇದರಿಂದ ಆ ಜಿಲ್ಲೆಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಸ್ವಲ್ಪ ಮಟ್ಟಿಗೆ ಸ್ಥಿರವಾಗಿದೆ. ಆದರೆ, ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯಲ್ಲಿ ವಾರದಲ್ಲಿ ಕಳೆದ ಮೇ ತಿಂಗಳಾಂತ್ಯ ಸೋಂಕಿನ ಪ್ರಮಾಣ ಜಾಸ್ತಿಯಿದ್ದ ಹಿನ್ನೆಲೆಯಲ್ಲಿ ವಾರದಲ್ಲಿ 2 ದಿನಗಳು ಮಾತ್ರ ಅಗತ್ಯ ವಸ್ತುಗಳಿಗೆ ಖರೀದಿಗೆ ಅವಕಾಶ ನೀಡಿದ್ದು, ಇನ್ನುಳಿದ ಐದು ದಿನಗಳು ಸಂಪೂರ್ಣ ಲಾಕ್ಡೌನ್ ಇತ್ತು.
ಇದರಿಂದ ನಂದಿನಿ ಉತ್ಪನ್ನಗಳ ಮಾರಾಟದ ನಂದಿನಿ ಪಾರ್ಲರ್ ಮಳಿಗೆಗಳು ಸಹ ಬಂದ್ ಆಗಿರುವುದು ಮಾರಾಟ ಕುಸಿಯಲು ಕಾರಣವಾಗಿದೆ. ಮೊಸಲು 10 ಸಾವಿರ ಲೀಟರ್ ಮಾರಾಟ ಕುಸಿದಿದ್ದು, ಇನ್ನುಳಿದ ಉತ್ಪನ್ನಗಳಾದ ತುಪ್ಪ, ಲಸ್ಸಿ ಇತರೆ ಸಿಹಿ ತಿನಿಸುಗಳಿಗೂ ಒಂದಷ್ಟು ಬೇಡಿಕೆ ಕಡಿಮೆಯಾಗಿದೆ ಎಂದು ರಾಬಕೊ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ತಿರುಪತೆಪ್ಪ ತಿಳಿಸಿದರು.
ಹಾಲಿನ ಪೌಡರ್ಗೆ ಪರಿವರ್ತನೆ: ಸದ್ಯ ಲಾಕ್ ಡೌನ್ ಪರಿಣಾಮ ಮಾರಾಟ ಕುಸಿತದಿಂದ ಪ್ರತಿದಿನ ಸರಾಸರಿ ಉಳಿಯುವ 15 ಸಾವಿರ ಲೀಟರ್ ಹಾಲನ್ನು ಧಾರವಾಡ ಡೈರಿಗೆ ಕಳುಹಿಸಿ ಹಾಲಿನ ಪೌಡರ್ನ್ನಾಗಿ ಪರಿವರ್ತಿಸಲಾಗುತ್ತದೆ. ಈ ಪೌಡರ್ ಅನ್ನು ಪುನಃ ವಾಪಸ್ ಪಡೆದ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿನ ಅಂಗನವಾಡಿ, ಪ್ರಾಥಮಿಕ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆಯಡಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಈ ಮೊದಲು ತಿಂಗಳಿಗೆ 400 ಟನ್ ಹಾಲಿನ ಪೌಡರ್ ಬೇಕಾಗುತ್ತಿತ್ತು. ಬೇರೆ ಒಕ್ಕೂಟಗಳಿಂದ ಖರೀದಿಸಿ ವಿತರಿಸಲಾಗುತ್ತಿತ್ತು ಎಂದು ಸ್ಪಷ್ಟಪಡಿಸಿದರು.
ಪ್ರೌಢಶಾಲೆಗೂ ಕ್ಷೀರಭಾಗ್ಯ: ಲಾಕ್ಡೌನ್ ಪರಿಣಾಮ ಒಕ್ಕೂಟದಲ್ಲಿ ಪ್ರತಿದಿನ ಉಳಿಯುತ್ತಿರುವ ಹಾಲನ್ನು ಪೌಡರ್ ಆಗಿ ಪರಿವರ್ತಿಸಿ ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ, ಪ್ರಾಥಮಿಕ ವಿದ್ಯಾರ್ಥಿಗಳಿಗೆ ವಿತರಿಸಿದಂತೆ, ಪ್ರೌಢಶಾಲೆ ವಿದ್ಯಾರ್ಥಿಗಳಿಗೂ ಜೂನ್-ಜುಲೈ ತಿಂಗಳಲ್ಲಿ ವಿತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಲಾಕ್ಡೌನ್ ಪರಿಣಾಮ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಕ್ಷೀರಭಾಗ್ಯ ಯೋಜನೆ, ಶಾಲೆಗಳು ಆರಂಭವಾದಲ್ಲಿ ಪುನಃ ಚಾಲನೆ ಪಡೆದುಕೊಳ್ಳಲಿದೆ. ಆಗ ಉಳಿದ ಈ ಎಲ್ಲ ಹಾಲನ್ನು ನಿಭಾಯಿಸಬಹುದು ಎನ್ನುತ್ತಾರೆ ಅವರು. ಲಾಕ್ಡೌನ್ನಿಂದ ಒಕ್ಕೂಟಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟವಾಗದಿದ್ದರೂ ಉತ್ಪನ್ನಗಳ ಮಾರಾಟವಂತೂ ಕುಸಿತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಪೈಪ್ ಲೈನ್ ತಪಾಸಣೆ ವೇಳೆ ದುರಂತ… ನೀರಿನ ಹೊಂಡಕ್ಕೆ ಬಿದ್ದು ಮೂವರ ದುರ್ಮರಣ
ಪ್ರಜ್ವಲ್ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ
Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು
ಹುಚ್ಚು ರಾಜಕಾರಣಕ್ಕೆ ಸಿದ್ದು ದೊಡ್ಡ ಬೆಲೆ ತೆರಬೇಕಾದೀತು: ಡಿವಿಎಸ್
Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ