ಬ್ರೇಕಿಂಗ್ ನ್ಯೂಸ್:ಪಾಸಿಟಿವಿಟಿ ದರ ಇಳಿಕೆ:ನಾಳೆಯಿಂದ ದಕ್ಷಿಣ ಕನ್ನಡ ಜನತೆಗೆ ರಿಲ್ಯಾಕ್ಸ್
Team Udayavani, Jul 1, 2021, 7:10 PM IST
ಮಂಗಳೂರು: ಕೋವಿಡ್ ಪಾಸಿಟಿವಿ ದರ ಕಡಿಮೆಯಾದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆ ‘ಪಟ್ಟಿ 1’ ರಲ್ಲಿ ಸೇರ್ಪಡೆಯಾಗಿದೆ.
ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಗಣನೀಯವಾಗಿ ಕಡಿಮಯಾಗಿದೆ. ಈ ಹಿನ್ನೆಲೆ ಇಂದು ನೂತನ ಮಾರ್ಗಸೂಚಿ ಹೊರಡಿಸಲಾಗಿದ್ದು, ನಾಳೆಯಿಂದ ಅನ್ವಯವಾಗುವಂತೆ ಪ್ರತಿ ದಿನ ಸಂಜೆ 5 ಗಂಟೆಯವರಿಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಹಾಗೂ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಆದೇಶ ಜುಲೈ 5 ಮುಂಜಾನೆ 5 ಗಂಟೆಯವರೆಗೆ ಮಾತ್ರ ಜಾರಿಯಲ್ಲಿರಲಿದೆ. ಹಾಗೂ ಭಾನುವಾರ ವಾರಾಂತ್ಯ ಕರ್ಫ್ಯೂ ಜಾರಿಯಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ವಾರಾಂತ್ಯ ಕರ್ಫ್ಯೂ:
ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ ವಾರಾಂತ್ಯ ಕರ್ಫ್ಯೂ ಇರಲಿದ್ದು ಕೆಲವು ರಿಯಾಯಿತಿ ನೀಡಲಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2ರ ವರೆಗೆ ಹಾಲು, ಹಣ್ಣು, ತರಕಾರಿ, ಮೀನು, ಮಾಂಸದ ಅಂಗಡಿಗಳು, ಬೀದಿಬದಿ ವ್ಯಾಪಾರ, ನ್ಯಾಯಬೆಲೆ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ. ಉಳಿದೆಲ್ಲ ಅಂಗಡಿಗಳು
ಬಂದ್ ಇರಲಿವೆ. ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶವಿದೆ. ರೆಸ್ಟೋರೆಂಟ್ ಮತ್ತು ಹೊಟೇಲ್ಗಳಲ್ಲಿ ಪಾರ್ಸೆಲ್ ಹಾಗೂ ಹೋಂ ಡೆಲಿವರಿಗೆ ಅವಕಾಶವಿದೆ.
ಸಂಜೆ 5ರ ವರೆಗೆ ಬಸ್ ಸಂಚಾರ :
ಲಾಕ್ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂಜೆ 5 ಗಂಟೆಯವರೆಗೆ ಬಸ್ ಸಂಚಾರಕ್ಕೆ ಅವಕಾಶವಿದ್ದು, ಶೇ. 50ರಷ್ಟು ಪ್ರಯಾಣಿಕರೊಂದಿಗೆ ಅನುಮತಿ ಇಡಲಾಗಿದೆ. ವಾರಾಂತ್ಯ ಕರ್ಫ್ಯೂನಲ್ಲೂ ಬಸ್ ಸಂಚಾರಕ್ಕೆ ಅನುಮತಿ ಇದೆ. ಆದರೆ ಖಾಸಗಿ ಬಸ್ಗಳ ಓಡಾಟ ಸಾಧ್ಯತೆ ಕಡಿಮೆ. ಕೆಎಸ್ಸಾರ್ಟಿಸಿ ಬಸ್ಗಳ ಸಂಚಾರ ಇರಲಿದೆ.
ಏನೆಲ್ಲ ಅವಕಾಶ? :
ಎಲ್ಲ ಉತ್ಪಾದನಾ ಘಟಕಗಳು, ಕೈಗಾರಿಕೆಗಳು ಶೇ. 50ರಷ್ಟು ಸಿಬಂದಿಯೊಂದಿಗೆ ಮತ್ತು ಗಾರ್ಮೆಂಟ್ಸ್ ಗಳು ಶೇ. 30ರಷ್ಟು ಸಿಬಂದಿಯೊಂದಿಗೆ ಕಾರ್ಯಾಚರಿಸಬಹುದು.
ಎಲ್ಲ ಬಗೆಯ ಅಂಗಡಿ, ಮುಂಗಟ್ಟುಗಳನ್ನು ಸಂಜೆ 5ರ ವರೆಗೆ ತೆರೆಯಬಹುದು. ಹೋಂ ಡೆಲಿವರಿಗೆ ದಿನದ 24 ಗಂಟೆಯೂ ಅವಕಾಶ.
ಹೊಟೇಲ್, ರೆಸ್ಟೋರೆಂಟ್, ಬಾರ್ ಹಾಗೂ ಕ್ಲಬ್ಗಳು ಸಂಜೆ 5ರ ವರೆಗೆ ಶೇ. 50 ಗ್ರಾಹಕರೊಂದಿಗೆ ಕಾರ್ಯಾಚರಿಸಬಹುದು. (ಹವಾ ನಿಯಂತ್ರಿತ ರಹಿತವಾಗಿ) ಬಾರ್ಗಳಲ್ಲಿ ಊಟಕ್ಕೆ ಅವಕಾಶವಿದ್ದು ಮದ್ಯ ಪೂರೈಸುವಂತಿಲ್ಲ. ಮದ್ಯ ಪಾರ್ಸೆಲ್ಗೆ ಮಾತ್ರ ಅವಕಾಶ. ರೆಸಾರ್ಟ್ಗಳು, ಲಾಡ್ಜ್ಗಳು ಶೇ. 50ರಷ್ಟು ಗ್ರಾಹಕರನ್ನು ಮೀರದಂತೆ ಕಾರ್ಯಾಚರಿಸಬಹುದು.
ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಹೊರಾಂಗಣ ಸಿನೆಮಾ, ಧಾರಾವಾಹಿಗಳ ಚಿತ್ರೀಕರಣ ನಡೆಸಬಹುದು.
ಎಲ್ಲ ರೀತಿಯ ನಿರ್ಮಾಣ ಕಾಮಗಾರಿಗಳು, ಅದಕ್ಕೆ ಸಂಬಂಧಿಸಿದ ವ್ಯವಸ್ಥೆಗಳು ಕಾರ್ಯ ನಿರ್ವಹಿಸಬಹುದು.
ಬೆಳಗ್ಗೆ 5ರಿಂದ ಸಂಜೆ 6ರ ವರೆಗೆ ಪಾರ್ಕ್ಗಳು ತೆರೆದಿರುತ್ತವೆ. ಹವಾ ನಿಯಂತ್ರಿತವಲ್ಲದ ಜಿಮ್ನಾ ಶಿಯಂಗಳು ಶೇ. 50ರ ಗ್ರಾಹಕರೊಂದಿಗೆ ತೆರೆಯಬಹುದು. ಎಲ್ಲ ಹೊರಾಂಗಣ ಕ್ರೀಡೆಗಳಿಗೆ ಅವಕಾಶ. ಶೇ. 50 ಸಿಬಂದಿಯೊಂದಿಗೆ ಎಲ್ಲ ರೀತಿಯ ಕಚೇರಿಗಳು ಕಾರ್ಯಾಚರಿಸಬಹುದು.
ಜಿಲ್ಲೆಯಾದ್ಯಂತ ಛತ್ರಗಳು, ಹೊಟೇಲ್ಗಳು, ರೆಸಾರ್ಟ್ಗಳು ಸಭಾಂಗಣ ಇತ್ಯಾದಿಗಳಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆಯೊಂದಿಗೆ 40 ಜನರು ಮೀರದಂತೆ ಮದುವೆ ನಡೆಸಲು ಅವಕಾಶವಿದೆ.
ಹವಾನಿಯಂತ್ರಿತ ರೆಸ್ಟೋರೆಂಟ್, ಹೊಟೇಲ್ಗಳು, ಬಾರ್ಗಳಿಗೆ ಅವಕಾಶವಿಲ್ಲ. ಪಬ್ಗಳಿಗೂ ಅವಕಾಶ ನಿರಾಕರಿಸಲಾಗಿದೆ. ಹವಾನಿಯಂತ್ರಿತ ಅಂಗಡಿ ಮಳಿಗೆಗಳು, ಮಾಲ್ಗಳು, ಶಾಪಿಂಗ್ ಕಾಂಪ್ಲೆಕ್ಸ್ಗಳು ತೆರೆಯಲು ಅವಕಾಶವಿಲ್ಲ.