ತಾಲಿಬಾನ್ ಹಿಡಿತಕ್ಕೆ ಅಫ್ಘಾನ್ : 250 ಜಿಲ್ಲೆಗಳು ನಮ್ಮ ಹಿಡಿತದಲ್ಲಿ:ಉಗ್ರರು
Team Udayavani, Jul 10, 2021, 7:15 AM IST
ಕಾಬೂಲ್: ಯುದ್ಧಪೀಡಿತ ದೇಶದಿಂದ ಅಮೆರಿಕದ ಸೇನಾಪಡೆ ವಾಪಸಾಗುತ್ತಿರುವಂತೆಯೇ ಅಫ್ಘಾನಿಸ್ಥಾನದ ಶೇ.85ರಷ್ಟು ಭಾಗ ನಮ್ಮ ವಶಕ್ಕೆ ಬಂದಿದೆ ಎಂದು ತಾಲಿಬಾನ್ ಘೋಷಿಸಿದೆ!
ಇರಾನ್ ನೊಂದಿಗಿನ ಪ್ರಮುಖ ಗಡಿ ಕ್ರಾಸಿಂಗ್ ಇಸ್ಲಾಂ ಖಲಾವನ್ನು ಕೂಡ ಶುಕ್ರವಾರ ತಾಲಿಬಾನ್ ಉಗ್ರರು ಆಕ್ರಮಿಸಿಕೊಂಡಿದ್ದಾರೆ. ಅಲ್ಲದೇ ಅಫ್ಘಾನ್ನ 398 ಜಿಲ್ಲೆಗಳ ಪೈಕಿ 250 ಜಿಲ್ಲೆಗಳು ಈಗ ನಮ್ಮ ವಶದಲ್ಲಿವೆ ಎಂದು ತಾಲಿಬಾನ್ ನಾಯಕರು ಹೇಳಿಕೊಂಡಿದ್ದಾರೆ. ಆದರೆ, ಇದನ್ನು ಅಫ್ಘಾನಿಸ್ಥಾನ ಸರಕಾರ ಅಲ್ಲಗಳೆದಿದೆ. ಇಸ್ಲಾಂ ಖಲಾ ಗಡಿಯು ಸಂಪೂರ್ಣವಾಗಿ ನಮ್ಮ ನಿಯಂತ್ರಣಕ್ಕೆ ಬಂದಿದೆ ಎಂದು ತಾಲಿಬಾನ್ ವಕ್ತಾರ ಝಬೀ ಹುಲ್ಲಾ ಮುಜಾಹಿದ್ ಹೇಳಿದ್ದರೆ, ನಮ್ಮ ಸೇನೆಯು ತಕ್ಕ ಪ್ರತ್ಯುತ್ತರ ನೀಡುತ್ತಿದ್ದು ಹೋರಾಟ ಮುಂದುವರಿದಿದೆ ಎಂದು ಅಫ್ಘನ್ ಸರಕಾರ ಹೇಳಿ ಕೊಂಡಿದೆ.ಇದರ ಜತೆಗೆ ತುರ್ಕ್ಮೇನಿಸ್ಥಾನ್ ಜತೆಗೆ ಹೊಂದಿಕೊಂಡಿರುವ ಅಫ್ಘಾನಿಸ್ಥಾನಹೊಂದಿರುವ ಗಡಿ ಪ್ರದೇಶ ಕೂಡ ಉಗ್ರರ ವಶಕ್ಕೆ ಬಂದಿದೆ.
ಇನ್ನೊಂದೆ ಡೆ, ಅಫ್ಘಾನ್-ತಜಕಿಸ್ಥಾನದ ಗಡಿಯ ಮೂರನೇ ಎರಡರಷ್ಟು ಭಾಗವನ್ನು ತಾಲಿಬಾನ್ ವಶಕ್ಕೆ ಪಡೆದಿದ್ದು, ಎಲ್ಲೆಡೆಯಿಂದಲೂ ತಕ್ಕ ಪ್ರತ್ಯುತ್ತರ ನೀಡಬೇಕಿದೆ ಎಂದು ರಷ್ಯಾ ಹೇಳಿದೆ.
ಸೇನೆಗೆ ಉಗ್ರ ಕಮಾಂಡರ್ ನೆರವು!: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಸ್ಥಳೀಯ ಉಗ್ರ ಕಮಾಂಡರ್ವೊಬ್ಬರು ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಅಫ್ಘನ್ ಸೇನೆಯ ನೆರವಿಗೆ ಧಾವಿಸಿದ್ದಾರೆ. ತಾಲಿಬಾನ್ ಹಿಡಿತದಲ್ಲಿರುವ ಪಶ್ಚಿಮ ಅಫ್ಘಾನಿಸ್ಥಾನದ ಭಾಗಗಳನ್ನು ಮತ್ತೆ ಸೇನೆಯ ನಿಯಂತ್ರಣಕ್ಕೆ ತರಲು ಕೈಜೋಡಿಸುವುದಾಗಿ ಹೇಳಿದ್ದಾರೆ. 2001ರಲ್ಲಿ ತಾಲಿಬಾನ್ ಅನ್ನು ಸೋಲಿಸುವಲ್ಲಿ ಅಮೆರಿಕ ಸೇನೆಗೂ ಇವರು ನೆರವಾಗಿದ್ದರು. ಇವರ ಹೆಸರು ಮೊಹಮ್ಮದ್ ಇಸ್ಮಾಯಿಲ್ ಖಾನ್. ಇವರನ್ನು “ಹೆರಾತ್ನ ಹುಲಿ’ ಎಂದೇ ಕರೆಯಲಾಗುತ್ತದೆ. 2009ರಲ್ಲಿ ತಾಲಿಬಾನ್ ಉಗ್ರರು ಇವರ ಮೇಲೆ ದಾಳಿ ನಡೆಸಿದ್ದರೂ ಅವರು ಬದುಕುಳಿದಿದ್ದರು.
ಚೀನೀಯರ ಸ್ಥಳಾಂತರ: ಅಫ್ಘಾನಿಸ್ಥಾನದಲ್ಲಿರುವ ತನ್ನ 210 ಮಂದಿ ನಾಗರಿಕರನ್ನು ಚೀನ ಸರಕಾರ ವಿಶೇಷ ವಿಮಾನದ ಮೂಲಕ ಸ್ಥಳಾಂತರಿಸಿದೆ. ಜು.2ರಂದೇ ಕಾಬೂಲ್ಗೆ ತೆರಳಿದ್ದ ಕ್ಸಿಯಾಮೆನ್ ಏರ್ ಲೈನ್ಸ್, ತನ್ನ 200ಕ್ಕೂ ಹೆಚ್ಚು ನಾಗರಿಕರನ್ನು ಹೊತ್ತು ಹ್ಯುಬೆ ಪ್ರಾಂತ್ಯದಲ್ಲಿ ಬಂದಿಳಿದಿದೆ. ಅಫ್ಘಾನ್ನ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಿದ್ಯಾರ್ಥಿಗಳಿಗೆ ಕರಾಳ ಯುಗ ಮರುಕಳಿಸುವ ಭೀತಿ: ಅಫ್ಘಾನಿಸ್ಥಾನದ ಮೂಲೆ ಮೂಲೆಯನ್ನೂ ತಾಲಿಬಾನ್ ಉಗ್ರರು ಆಕ್ರಮಿಸಿಕೊಳ್ಳುತ್ತಿರುವುದು ಅಲ್ಲಿನ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿದ್ಯಾರ್ಥಿಗಳು, ಕರಾಳ ಯುಗ ಮರುಕಳಿಸುವ ಭೀತಿ ಶುರುವಾಗಿದೆ ಎಂದಿದ್ದಾರೆ. ಎರಡು ದಶಕಗಳ ಸ್ವಾತಂತ್ರ್ಯವನ್ನು ಕಂಡ ಅಫ್ಘಾನ್ನ ಮಹಿಳೆಯರು ಮತ್ತು ಬಾಲಕಿಯರಲ್ಲಿ ಈಗ “ಗೃಹಬಂಧನ’ದ ಆತಂಕ ಮನೆಮಾಡಿದೆ. ನಗರ ಪ್ರದೇಶಗಳಲ್ಲಿ ಸ್ವಲ್ಪವಾದರೂ ಸುರಕ್ಷತೆ ಸಿಗಬಹುದು ಎಂದು ಅತ್ತ ವಲಸೆ ಹೋಗುತ್ತಿದ್ದಾರೆ. ನನಗೆ ಭಯ ಶುರುವಾಗಿದೆ ಎಂದಿದ್ದಾರೆ 26 ವರ್ಷದ ಮಲೀಹಾ ರಹೀಮಿ. ಅಭದ್ರತೆ ಯಿಂದಾಗಿ ಅನೇಕ ಹೆಣ್ಣುಮಕ್ಕಳು ಶಾಲೆಗಳಿಂದ ದೂರವುಳಿಯುತ್ತಿದ್ದಾರೆ. ಬಹುತೇಕ ಮಂದಿ ತಮ್ಮ ಹೆಣ್ಣು ಮಕ್ಕಳಿಗೆ ಆತುರವಾಗಿ ಮದುವೆ ಮಾಡಿಸುತ್ತಿದ್ದಾರೆ ಎಂದು ಸ್ನಾತಕೋತ್ತರ ವಿದ್ಯಾರ್ಥಿನಿ ಫರೀಬಾ ಹೇಳಿದ್ದಾರೆ.
ಪಾಕ್ ವಿರುದ್ಧ ಆಕ್ರೋಶ: ಎಲ್ಲಿಯವರೆಗೆ ಪಾಕಿಸ್ಥಾನವು ತನ್ನ ನೆಲದಲ್ಲಿ ತಾಲಿಬಾನ್ ಉಗ್ರರಿಗೆ ಆಶ್ರಯ ನೀಡುತ್ತದೋ, ಅಲ್ಲಿಯವರೆಗೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿಯೊಂದಿಗೆ ತಾಲಿಬಾನ್ ಮಾತುಕತೆ ನಡೆಸುವುದಿಲ್ಲ ಎನ್ನುವುದು ಸ್ಪಷ್ಟ ಎಂದು ಅಫ್ಘಾನಿಸ್ಥಾನದ ಖ್ಯಾತ ತಜ್ಞ , ಪತ್ರಕರ್ತ ಅಹ್ಮದ್ ರಶೀದ್ ಹೇಳಿದ್ದಾರೆ. ಪಾಕಿಸ್ಥಾನಕ್ಕೆ ನಿಜಕ್ಕೂ ಪ್ರಾಮಾಣಿಕತೆ ಎಂಬುದು ಇದ್ದರೆ ಕೂಡಲೇ ತನ್ನ ನೆಲದಲ್ಲಿರುವ ತಾಲಿಬಾನ್ ನಾಯಕರಿಗೆ “ಸಂಧಾನ ಮಾತುಕತೆ ನಡೆಸುವಂತೆ’ ಅಥವಾ “ಪಾಕ್ ತೊರೆಯುವಂತೆ’ ಖಡಕ್ಕಾಗಿ ಸೂಚಿಸಲಿ. ಪಾಕ್ ತನ್ನ ಲಾಭಕ್ಕಾಗಿ ತಾಲಿಬಾನ್ ಅನ್ನು ಬಳಸಿಕೊಳ್ಳುತ್ತಿದೆ. ಇದು ಹೀಗೇ ಮುಂದುವರಿದರೆ ಅಫ್ಘಾನಿಸ್ಥಾನದ ಅಂತ್ಯವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ರಶೀದ್ ಕಳವಳ ವ್ಯಕ್ತಪಡಿಸಿದ್ದಾರೆ.
ಅಫ್ಘಾನ್ನ ಸದ್ಯದ ಪರಿಸ್ಥಿತಿ ಕಳವಳಕಾರಿ. ಹಿಂಸೆ ಯಾವುದಕ್ಕೂ ಪರಿಹಾರವಲ್ಲ. ಮೊದಲು ಆ ದೇಶದಲ್ಲಿನ ಹಿಂಸಾಚಾರ ಕೊನೆಯಾಗಬೇಕು. ದೇಶವನ್ನು ಯಾರು ಆಳಬೇಕು ಎನುವುದನ್ನು ನಿರ್ಲಕ್ಷಿಸಬಾರದು.
– ಎಸ್.ಜೈಶಂಕರ್, ವಿದೇಶಾಂಗ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು