ಬಂಟ್ವಾಳಕ್ಕೆ ಬಂತು ಕೆಎಸ್ಸಾರ್ಟಿಸಿ ಐಸಿಯು ಬಸ್ : ಜು. 13ರಿಂದ ನಿತ್ಯ ಕಾರ್ಯಾಚರಣೆ
Team Udayavani, Jul 11, 2021, 6:50 AM IST
ಬಂಟ್ವಾಳ: ಕೋವಿಡ್ ನಿಯಂತ್ರಣದಲ್ಲಿ ಕೈ ಜೋಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರಿಗೆ ಸುರಕ್ಷಾ-ಐಸಿಯು ಬಸ್ಸನ್ನು ವಿನ್ಯಾಸಗೊಳಿಸಿದ್ದು, ಕರಾವಳಿಗೆ ಮೊದಲ ಬಸ್ ಬಿ.ಸಿ.ರೋಡ್ ಘಟಕಕ್ಕೆ ಆಗಮಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ಮತ್ತು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗ ವ್ಯಾಪ್ತಿಯಲ್ಲಿ ಇದೇ ಮೊದಲ ಐಸಿಯು ಬಸ್. ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಜೂ. 17ರಂದು ಉಪಮುಖ್ಯಮಂತ್ರಿಯಾಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಐಸಿಯು ಬಸ್ ಕುರಿತು ಚರ್ಚಿಸಿದ್ದು, ಡಿಸಿಎಂ ಒಪ್ಪಿಗೆ ಸೂಚಿಸಿದ್ದರು.
ಆ್ಯಂಬುಲೆನ್ಸ್ ರೀತಿಯಲ್ಲೇ ಸೈರನ್ ವ್ಯವಸ್ಥೆಯನ್ನು ಬಸ್ ಒಳಗೊಂಡಿದ್ದು, ಒಳಗೆ ಮಿನಿ ಕ್ಲಿನಿಕ್ನ ಸೌಲಭ್ಯಗಳಿವೆ. ಹಿಂಭಾಗದಲ್ಲಿ ರೋಗಿಗಳು ಪ್ರವೇಶಿಸುವ ವ್ಯವಸ್ಥೆ ಇರುತ್ತದೆ.
ಐಸಿಯು ಬಸ್ ವೈಶಿಷ್ಟ್ಯಗಳು
ಆರೋಗ್ಯ ಸೇವೆ ನಿಟ್ಟಿನಲ್ಲಿ ಐಸಿಯು ಬಸ್ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡಿದ್ದು, ಐದು ಹಾಸಿಗೆಗಳು, ಪ್ರತಿ ಬೆಡ್ಗಳಿಗೂ ಆಕ್ಸಿಜನ್ ಸೌಲಭ್ಯ, ರೋಗಿಗಳ ರಕ್ತದೊತ್ತಡ, ಆಕ್ಸಿಜನ್ ಪ್ರಮಾಣ, ಇಸಿಜಿ, ದೇಹದ ಉಷ್ಣಾಂಶ ಮೊದಲಾದವುಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಇರುತ್ತದೆ. ಐವಿ ವ್ಯವಸ್ಥೆ, ವೆಂಟಿಲೇಟರ್ ಅಳವಡಿಸುವ ಸೌಲಭ್ಯ, ತುರ್ತು ಔಷಧ ವ್ಯವಸ್ಥೆ, ತುರ್ತು ಅಗತ್ಯಗಳಿಗೆ ಜನರೇಟರ್ ವ್ಯವಸ್ಥೆಯೂ ಇದೆ. ಜತೆಗೆ ನೋಟಿಸ್ ಬೋರ್ಡ್, ರೋಗಿಗಳ ಶೀಘ್ರ ಗುಣಮುಖರಾಗುವ ಕುರಿತು ಬರಹಗಳೂ ಇವೆ.
ಹಳ್ಳಿ ಹಳ್ಳಿಗೂ ಸಂಚಾರ
ಜು. 13ರಂದು ಶಾಸಕ ರಾಜೇಶ್ ನಾೖಕ್ ನೇತೃತ್ವದಲ್ಲಿ ಪೊಳಲಿ ಕ್ಷೇತ್ರದಲ್ಲಿ ಸಾರಿಗೆ ಸುರಕ್ಷಾ ಐಸಿಯು ಬಸ್ಸಿಗೆ ಚಾಲನೆ ದೊರೆಯಲಿದೆ. ಬಳಿಕ ಬಂಟ್ವಾಳದ ಪ್ರತಿ ಗ್ರಾಮಗಳಿಗೆ ತೆರಳಿ ಸಂಚಾರಿ ಆಸ್ಪತ್ರೆಯ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ.
ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬಂದಿ ರೋಗಿಗಳ ತಪಾಸಣೆಯ ಜತೆಗೆ ಅಗತ್ಯ ಔಷಧ ನೀಡಲಿದ್ದಾರೆ. ಈ ಬಸ್ ಸರಾಸರಿ 2 ತಿಂಗಳಿಗೊಮ್ಮೆ ಒಂದು ಗ್ರಾಮಕ್ಕೆ ಭೇಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕ ರಾಜೇಶ್ ನಾೖಕ್ ಅವರ ವಿಶೇಷ ಪ್ರಯತ್ನದಿಂದ ಐಸಿಯು ಬಸ್ ಬಂಟ್ವಾಳಕ್ಕೆ ಆಗಮಿಸಿದ್ದು, ಸಂಚಾರಿ ಆಸ್ಪತ್ರೆಯ ರೀತಿಯಲ್ಲಿ ಕೆಲಸ ನಿರ್ವಹಿಸಲಿದೆ. ಘಟಕದ ಚಾಲಕರೇ ಚಾಲನೆ ಮಾಡಲಿದ್ದು, ಆರೋಗ್ಯ ಇಲಾಖೆ ವೈದ್ಯರು, ಸಿಬಂದಿ ರೋಗಿಗಳ ತಪಾಸಣೆ ನಡೆಸಲಿದ್ದಾರೆ.
– ಶ್ರೀಶ ಭಟ್, ಘಟಕ ವ್ಯವಸ್ಥಾಪಕರು, ಕೆಎಸ್ಆರ್ಟಿಸಿ, ಬಿ.ಸಿ.ರೋಡ್