ಸಂಘದಿಂದ ವಿದ್ಯಾಕ್ಷೇತ್ರದ ಯೋಜನೆಗೆ ತಯಾರಿ: ವಿಶ್ವನಾಥ್ ಪೂಜಾರಿ ಕಡ್ತಲ
Team Udayavani, Jul 16, 2021, 1:05 PM IST
ಪುಣೆ: ಪುಣೆ ಬಿಲ್ಲವ ಸಂಘವು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಸಂಘವು ಇತ್ತೀಚೆಗಿನ ವರ್ಷಗಳಲ್ಲಿ ಹಲವಾರು ಉತ್ತಮ ಯೋಜನೆಗಳನ್ನು ಕೈಗೊಂಡಿದೆ. ಸಂಘಕ್ಕೆ ಅಗತ್ಯವಾಗಿ ಬೇಕಾಗಿದ್ದ ಜಾಗದ ಖರೀದಿ, ಜಾಗದಲ್ಲಿ ಸ್ಥಾಪಿಸಲಿರುವ ಗುರು ಮಂದಿರ, ಸಭಾಭವನಕ್ಕೆ ಬೇಕಾದ ಕಾರ್ಯಗಳು ನಡೆಯಲಿವೆ. ಅದರ ಜತೆಯಲ್ಲಿ ವಿದ್ಯಾಕ್ಷೇತ್ರದಲ್ಲೂ ಮುನ್ನಡೆಯಬೇಕು ಎಂಬ ಸಂಕಲ್ಪ ನಮ್ಮದಾಗಿದೆ ಎಂದು ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ತಿಳಿಸಿದರು.
ಇತ್ತೀಚೆಗೆ ಪುಣೆ ಬಿಲ್ಲವ ಸಂಘದ ಕಚೇರಿಯಲ್ಲಿ ಜರಗಿದ ಬಿಲ್ಲವ ಸಮಾಜ ಸೇವಾ ಸಂಘದ ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಲದೇವರಾದ ಕೋಟಿ-ಚೆನ್ನಯರ ಆಶೀರ್ವಾದ ಪಡೆದು, ನಮ್ಮ ಆರಾಧ್ಯ ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತÌ-ಆದರ್ಶ ತತ್ವಗಳ ಪ್ರೇರಣೆಯಂತೆ ಮತ್ತು ವಿದ್ಯೆಯಿಂದ ಸ್ವತಂತ್ರರಾಗಿ ಎಂಬ ಅವರ ತತ್ತÌಗಳನ್ನು ಸಾಕಾರಗೊಳಿಸಲು ಸಂಘವು ಪುಣೆಯಲ್ಲಿ ಶೈಕ್ಷಣಿಕ ರಂಗದಲ್ಲಿ ಅಭಿವೃದ್ಧಿ ಹೊಂದಲೂ ಯೋಜನೆ ರೂಪಿಸಿದೆ. ಇದಕ್ಕೆ ಬೇಕಾದ ಜಾಗವನ್ನೂ ಖರೀದಿಸುವ ಬಗ್ಗೆ ಕಾರ್ಯಕಾರಿ ಸಮಿತಿಯಲ್ಲಿ ನಿರ್ಣಯ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಪ್ಲೇ ಗ್ರೂಪ್ನಿಂದ ಹನ್ನೆರಡನೇ ತರಗತಿವರೆಗೆ ಶಾಲೆಯೊಂದನ್ನು ಪ್ರಾರಂಭಿಸುವ ಬಗ್ಗೆ ಕಾರ್ಯಪ್ರರ್ವತ್ತರಾಗಿದ್ದೇವೆ. ಈ ಬಗ್ಗೆ ಸಮಾಲೋಚಿಸಿ ಪೂರ್ಣ ಯೋಜನೆಯನ್ನು ಕೈಗೊಳ್ಳಲಿದ್ದೇವೆ ಎಂದರು
ಬ್ರಹ್ಮಶ್ರೀ ನಾರಾಯಣಗುರುಗಳ ಆಶೀರ್ವಾದ ದಿಂದ ಕಟ್ಟಡ ಸಮಿತಿಯ ಅಧ್ಯಕ್ಷ ಸಂದೇಶ್ ಪೂಜಾರಿ ಅವರ ಮುಂದಾಳತ್ವದಲ್ಲಿ ಸಂಘವು ಈಗಾಗಲೇ ಖರೀದಿಸಿದ ಜಾಗದಲ್ಲಿ ಗುರು ಮಂದಿರ ನಿರ್ಮಾಣಕ್ಕೆ ನೀಲ ನಕ್ಷೆ ತಯಾರಿಸಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲಿದೆ. ಬಿಲ್ಲವ ಸಮಾಜದ ಉತ್ಸಾಹಿ ಯುವ ತಂಡದವರು, ಆಡಳಿತ ಸಮಿತಿಯವರು, ಮಹಿಳಾ ವಿಭಾಗದವರು, ಹಿರಿಯರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಈ ಮಹತ್ಕಾರ್ಯಗಳನ್ನು ನಾವೆಲ್ಲರೂ ಕೂಡಿ ಮಾಡಬಹುದು. ಬಿಲ್ಲವ ಸಮಾಜದ ಎಲ್ಲ ಮಕ್ಕಳು ಸಹಿತ ಎಲ್ಲ ಸಮಾಜಗಳ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಉದ್ದೇಶದಿಂದ ಈ ವಿದ್ಯಾಸಂಸ್ಥೆಯ ನಿರ್ಮಾಣಕ್ಕೆ ಯೋಚಿಸಿದ್ದೇವೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಸಂದೇಶ್ ಪೂಜಾರಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿಯ ಪ್ರಮುಖರಾದ ಭಾಸ್ಕರ್ ಪೂಜಾರಿ, ರಾಜೇಶ್ ಪೂಜಾರಿ, ಸುದೀಪ್ ಪೂಜಾರಿ, ಪ್ರಕಾಶ್ ಪೂಜಾರಿ, ಧನಂಜಯ್ ಪೂಜಾರಿ, ಉಮಾ ಪೂಜಾರಿ, ಗೀತಾ ಪೂಜಾರಿ, ನಮಿತಾ ಪೂಜಾರಿ ಭಾಗವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ಬಂಗೇರ ಸ್ವಾಗತಿಸಿ, ಕಾರ್ಯಕ್ರಮ ನೀರೂಪಿಸಿ, ವಂದಿಸಿದರು.