ಕಲ್ಲುತೂರಾಟಗಾರರಿಗೆ ಪಾಸ್ಪೋರ್ಟ್ ಸಿಗದು!
Team Udayavani, Aug 2, 2021, 7:10 AM IST
ಶ್ರೀನಗರ: ಇನ್ನು ಮುಂದೆ ಕಲ್ಲುತೂರಾಟ, ಕಾನೂನು ಸುವ್ಯವಸ್ಥೆ ಹದಗೆಡಿಸಿದ ಪ್ರಕರಣ ಸೇರಿದಂತೆ ರಾಜ್ಯದ ಭದ್ರತೆಗೆ ಧಕ್ಕೆ ತರುವಂತಹ ಯಾವುದೇ ಕೇಸು ಎದುರಿಸುತ್ತಿದ್ದರೂ ಅಂಥವರ ಪಾಸ್ ಪೋರ್ಟ್ಗೆ ದೃಢೀಕರಣವೂ ಸಿಗುವುದಿಲ್ಲ, ಅವರಿಗೆ ಸರಕಾರದ ಯೋಜನೆಗಳು ಮತ್ತು ಸೇವೆಗಳ ಲಾಭವೂ ಸಿಗುವುದಿಲ್ಲ!
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಆಡಳಿತ ಇಂಥದ್ದೊಂದು ಆದೇಶ ಹೊರಡಿಸಿದೆ. ಪೊಲೀಸರು ಹಾಗೂ ಭದ್ರತಾ ಪಡೆಗಳೊಂದಿಗೆ ಸಂಘರ್ಷ ನಡೆದಾಗಲೆಲ್ಲ ಕಲ್ಲುತೂರಾಟ ನಡೆಸುವಂಥ ಕಣಿವೆ ರಾಜ್ಯದ ಯುವಕರಿಗೆ ಕಡಿವಾಣ ಹಾಕುವಲ್ಲಿ ಈ ಆದೇಶ ನೆರವಾಗಲಿದೆ.
ದಾಖಲೆ ಪರಿಶೀಲಿಸಿದ ಬಳಿಕ ದೃಢೀಕರಣ: ಕಾಶ್ಮೀರದ ಅಪರಾಧ ತನಿಖಾ ವಿಭಾಗ(ಸಿಐಡಿ)ದ ವಿಶೇಷ ಶಾಖೆಯ ಎಸ್ಎಸ್ಪಿ ಹೊರಡಿಸಿರುವ ಸುತ್ತೋಲೆಯಲ್ಲಿ ಎಲ್ಲ ಘಟಕಗಳಿಗೂ ಈ ಕುರಿತು ಸೂಚನೆ ನೀಡಲಾಗಿದೆ. ಪಾಸ್ಪೋರ್ಟ್ ದೃಢೀಕರಣಕ್ಕೆ ಬಂದೊಡನೆ ಸ್ಥಳೀಯ ಪೊಲೀಸ್ ಠಾಣೆಯ ದಾಖಲೆಗಳನ್ನು ಮತ್ತು ಸಿಸಿಟಿವಿ ದೃಶ್ಯಾವಳಿ, ಫೋಟೋ ಮುಂತಾದ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಬೇಕು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಪಾಸ್ಪೋರ್ಟ್ ಮಾತ್ರವಲ್ಲದೆ ಸರಕಾರದ ಯೋಜನೆಗಳು, ಸೇವೆಗಳಿಗೆ ಸಂಬಂಧಿಸಿದ ದೃಢೀಕರಣದ ವೇಳೆಯೂ ಆ ವ್ಯಕ್ತಿಯು ಕಲ್ಲುತೂರಾಟದಂಥ ಪ್ರಕರಣದಲ್ಲಿ ಭಾಗಿಯಾಗಿದ್ದನೇ ಎಂಬುದನ್ನು ನೋಡಿ, ಆತ ಭಾಗಿಯಾಗಿರುವುದು ಸಾಬೀತಾದರೆ ದೃಢೀಕರಣ ನೀಡಬಾರದು ಎಂದು ಆದೇಶಿಸಲಾಗಿದೆ.