“ಪ್ರಾಣತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸಬೇಕು’
ಘಾಟ್ಕೋಪರ್ ಕನ್ನಡ ವೆಲ್ಫೇರ್ ಸೊಸೈಟಿಯಿಂದ ಸ್ವಾತಂತ್ರ್ಯ ದಿನಾಚರಣೆ
Team Udayavani, Aug 24, 2021, 2:05 PM IST
ಘಾಟ್ಕೋಪರ್: ಕನ್ನಡ ವೆಲ್ಫೇರ್ಸೊಸೈಟಿ ಘಾಟ್ಕೋಪರ್ ವತಿಯಿಂದ 75ನೇ ಸ್ವಾತಂತ್ರ್ಯ ದಿನವನ್ನು ಘಾಟ್ಕೋಪರ್ ಪೂರ್ವದಲ್ಲಿರುವ ಕನ್ನಡ ವೆಲ್ಫೇರ್ ಸೊಸೈಟಿಯ ಕಚೇರಿಯಲ್ಲಿ ಆ. 15ರಂದು ಆಚರಿಸಲಾಯಿತು.
ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಧ್ವಜಾರೋಹಣಗೈದು ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಾಗೂ ಪ್ರಾಣತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸಬೇಕು. ದೇಶಕ್ಕಾಗಿ ನಾವು ಮಾಡಬೇಕಾದ ಕರ್ತವ್ಯದ ಬಗ್ಗೆ ತಿಳಿದು ಕೊಳ್ಳಬೇಕಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನು ದೇಶಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ದೇಶವು ವಿಶ್ವಗುರುವಾಗಲು ಸಾಧ್ಯ. ಇಂದಿಗೆ ನಮ್ಮ ದೇಶವು ಸ್ವತಂತ್ರಗೊಂಡ 74 ವರ್ಷ ಕಳೆದರೂ ಇನ್ನೂ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದಕ್ಕಾಗಿ ಎಲ್ಲರೂ ಚಿಂತನೆ ನಡೆಸಿದಾಗ ಸಮಸ್ಯೆಗಳು ಪರಿಹಾರಗೊಳ್ಳಲು ಸಾಧ್ಯವಿದೆ ಎಂದರು.
ಮಾಜಿ ಅಧ್ಯಕ್ಷ, ಸಾಹಿತಿ ನಾರಾಯಣ ಶೆಟ್ಟಿ ನಂದಳಿಕೆ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟ ಎಂಬುದು ಮಹಾಭಾರತ ಕಥೆಯಂತೆ ನಡೆದ ಹೋರಾಟವಾಗಿದೆ. ಇದರಲ್ಲಿ ಅನೇಕ ಮಹನೀಯರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿ ನಮಗೆ ಸ್ವಾತಂತ್ರ್ಯವನ್ನು ದೊರಕಿಸಿ
ಕೊಟ್ಟರು. ಇವರ ಬಲಿದಾನವು ವ್ಯರ್ಥವಾಗದೆ ದೇಶವನ್ನು ಸಮೃದ್ಧಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದರು.
ಇದನ್ನೂ ಓದಿ:ರಾಪ್ಟಿಂಗ್, ಬೋಟಿಂಗ್ ಹಾಗೂ ಜಲಕ್ರೀಡೆಗೆ ಅನುಮತಿ ನೀಡಿ : ಆರ್.ಅಶೋಕ್ ಗೆ ಮನವಿ
ಕನ್ನಡ ವೆಲ್ಫೇರ್ ಸೊಸೈಟಿಯ ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಲ್ಲೂರು ಮಾತನಾಡಿ, ನಮಗೆ 74 ವರ್ಷಗಳ ಹಿಂದೆ ಮಧ್ಯರಾತ್ರಿ ಸ್ವಾತಂತ್ರ್ಯ ದೊರೆತರೂ ಅದೇ ದಿನ ನಮ್ಮ ದೇಶದ ವಿಭಜನೆಯ ಕರಿಛಾಯೆಯನ್ನು ಮರೆಯುವಂತಿಲ್ಲ. ದೇಶಕ್ಕಾಗಿ ಪ್ರಾಣ ಬಲಿದಾನಗೈದ ಅನೇಕ ಮಹನೀಯರನ್ನು ನಮ್ಮ ಇತಿಹಾಸವು ಮರೆತಿರುವುದು ವಿಷಾದ ನೀಯ. ಅಂತಹ ಮಹನೀಯರನ್ನು ಈ ಸಂದರ್ಭ ಸ್ಮರಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದೇಶಸೇವೆಗೆ ನಾವು ಸದಾ ಸಿದ್ಧರಿರಬೇಕು ಎಂದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ ನಂದಳಿಕೆ ಮಾತನಾಡಿ, ನಮ್ಮ ಸಂಸ್ಥೆಯು ಅನೇಕ ವರ್ಷಗಳಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಾ ಬಂದಿದೆ. ಇದು ನಮಗೆ ಮತ್ತು ಮುಂದಿನ ಮಕ್ಕಳಿಗೆ ದೇಶಭಕ್ತಿಯ ಪ್ರೇರಣೆ ನೀಡುತ್ತದೆ. ನಾವು ನಮ್ಮ ದೇಶಕ್ಕಾಗಿ ಯಾವುದೇ ತ್ಯಾಗವನ್ನು ಮಾಡಲು ಸಿದ್ಧರಿರಬೇಕು ಎಂದರು.
ಈ ಸಂದರ್ಭ ಕೋಶಾಧಿಕಾರಿ ಹರೀಶ್ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ರಮಾನಂದಶೆಟ್ಟಿ, ತಿಮ್ಮ ದೇವಾಡಿಗ, ಅಜಿತ್ ಶೆಟ್ಟಿ,ಪ್ರಮೀಳಾ ರಮಾನಂದ ಶೆಟ್ಟಿ, ಸುಜಲಾ ಅಜಿತ್ ಶೆಟ್ಟಿ, ಸಕ್ಷಮ್ ಹರೀಶ್ ಶೆಟ್ಟಿ, ಪ್ರಣಿತಾ ರಾಮಾನಂದ್ ಶೆಟ್ಟಿ, ಚಿರಾಗ್ ರಾಧಾಕೃಷ್ಣ ಶೆಟ್ಟ, ತನಿಷ್ಕ್ ನವೀನ್ ಶೆಟ್ಟಿ,ರಿಷಿಕಾ ಶೆಟ್ಟಿ, ತನಿಷಾ ಎಸ್. ಶಿರಿಯ ಮೊದಲಾದವರು ಸ್ವಾತಂತ್ರ್ಯೋತ್ಸವ ಬಗ್ಗೆ ಮಾತನಾಡಿದರು. ಮಕ್ಕಳಿಂದ ದೇಶಭಕ್ತಿ ಗೀತೆಗಳ ಗಾಯನ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.