ಕನ್ನಡಕುದ್ರು ರಸ್ತೆ ದುರಸ್ತಿ: ಸಂಚಾರ ಸುಗಮ
Team Udayavani, Sep 4, 2021, 5:52 AM IST
ಹೆಮ್ಮಾಡಿ: ಮಳೆಯಿಂದಾಗಿ ರಾಡಿಯೆದ್ದಿದ್ದ ಕನ್ನಡಕುದ್ರುವಿನ ಸುಮಾರು 1 ಕಿ.ಮೀ. ಉದ್ದದ ಮಣ್ಣಿನ ರಸ್ತೆಗೆ ಈಗ ಹೆಮ್ಮಾಡಿ ಪಂಚಾಯತ್ ವತಿಯಿಂದ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ವಾಹನ ಸಂಚರಿಸುವುದೇ ಕಷ್ಟವಾಗಿದ್ದ ಈ ರಸ್ತೆಯಲ್ಲಿ ದುರಸ್ತಿಯಿಂದಾಗಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಮೂವತ್ತು ಮುಡಿಯಿಂದ ಕನ್ನಡಕುದ್ರುವಿಗೆ ಸಂಪರ್ಕ ಕಲ್ಪಿಸುವ ಸೇತುವೆಯಿಂದ ತುಸು ಮುಂದಕ್ಕೆ ಸಾಗಿದರೆ ಅಲ್ಲಿಂದ ಕೊನೆಯವರೆಗೆ ಸುಮಾರು 1 ಕಿ.ಮೀ. ಮಣ್ಣಿನ ರಸ್ತೆಯಿದೆ. ಪ್ರತಿ ವರ್ಷದ ಮಳೆಗಾಲದಲ್ಲಿ ಈ ರಸ್ತೆ ಕೆಸರುಮಯವಾಗುತ್ತಿದ್ದು, ವಾಹನ ಸಂಚಾರವೇ ಸಂಕಷ್ಟ ಎಂಬಂತಾಗುತ್ತದೆ.
ಪಂಚಾಯತ್ನಿಂದ ದುರಸ್ತಿ
ಈಗ ಮಳೆ ಸ್ವಲ್ಪ ಕಡಿಮೆಯಾಗಿದ್ದು, ಹೆಮ್ಮಾಡಿ ಗ್ರಾಮ ಪಂಚಾಯತ್ ವತಿಯಿಂದ ಅಧ್ಯಕ್ಷ ಸತ್ಯನಾರಾಯಣ ಹಾಗೂ ಸ್ಥಳೀಯ ಸದಸ್ಯ ರಾಘವೇಂದ್ರ ಪೂಜಾರಿ ಹೆದ್ದಾರಿಮನೆ ಅವರ ಮುತುವರ್ಜಿಯಲ್ಲಿ ಗುತ್ತಿಗೆದಾರರ ಮೂಲಕ ರಸ್ತೆಗೆ ಮಣ್ಣು ಹಾಕಿ, ಜೆಸಿಬಿ ಮೂಲಕ ಸಮತಟ್ಟು ಗೊಳಿಸುವ ಕಾರ್ಯವನ್ನು ಮಾಡಲಾಗಿದೆ.
ಇದನ್ನೂ ಓದಿ:ಅಂಟಾಲಿಯಾ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿ ಸೇರಿ 10 ಮಂದಿ ವಿರುದ್ಧ ಚಾರ್ಜ್ಶೀಟ್
100 ಎಕರೆ ವಿಸ್ತೀರ್ಣವಿರುವ ಈ ಕನ್ನಡಕುದ್ರುವಿನಲ್ಲಿ 61 ಕುಟುಂಬಗಳು ನೆಲೆಸಿವೆ. ನಿತ್ಯ ನೂರಾರು ಮಂದಿ ಈ ಮಾರ್ಗದಲ್ಲಿ ಸಂಚರಿಸುತ್ತಾರೆ.
ಕೆಸರುಮಯ ರಸ್ತೆಯಿಂದಾಗಿ ಕನ್ನಡಕುದ್ರು ವಿನಿಂದ ಪಡಿತರ, ಗ್ರಾ.ಪಂ. ಕಚೇರಿ, ಗ್ರಾಮ ಕರಣಿಕರ ಕಚೇರಿ ಕೆಲಸಕ್ಕೆ, ಪೇಟೆಗೆ ಬರಲು ಇಲ್ಲಿನ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿತ್ತು. ಈಗ ರಸ್ತೆ ದುರಸ್ತಿಯಾಗಿರುವುದರಿಂದ ಗ್ರಾಮಸ್ಥರಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆ ನಿವಾರಣೆಯಾದಂತಾಗಿದೆ.
ಸುದಿನ ವರದಿ
ಹೆಮ್ಮಾಡಿಯ ಕನ್ನಡಕುದ್ರು ಸಂಪರ್ಕಿಸುವ ರಸ್ತೆಯ ಅವ್ಯವಸ್ಥೆ ಕುರಿತಂತೆ “ಉದಯವಾಣಿ ಸುದಿನ’ವು “ಒಂದು ಊರು-ಹಲವು ದೂರು’ ಸರಣಿಯಲ್ಲಿ ಆ. 6 ರಂದು “ಇಲ್ಲಿ ವಾಹನ ಸಾಗುವುದೇ ಸಾಹಸ!’ ಎನ್ನುವುದಾಗಿ ವಿಶೇಷ ವರದಿ ಪ್ರಕಟಿಸಿ, ಗಮನಸೆಳೆದಿತ್ತು.