ಕೆಕೆಆರ್ ವ್ಯವಸ್ಥಾಪಕರ ವಿರುದ್ಧ ಕುಲದೀಪ್ ಕಿಡಿ
Team Udayavani, Sep 15, 2021, 6:35 AM IST
ಹೊಸದಿಲ್ಲಿ: ಲೆಗ್ಸ್ಪಿನ್ನರ್ ಕುಲದೀಪ್ ಯಾದವ್ ಸದ್ಯ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುತ್ತಿಲ್ಲ. ಐಪಿಎಲ್ನಲ್ಲಿ ಕೋಲ್ಕತಾ ನೈಟ್ರೈಡರ್ ಪರ ಆಡುತ್ತಿದ್ದಾರೆ. ಇನ್ನೇನು ಐಪಿಎಲ್ ಮುಂದುವರಿದ ಭಾಗ ಶುರುವಾಗಲು ಕೆಲವೇ ದಿನಗಳಿವೆ, ಈ ನಡುವೆ ತಂಡದ ನಾಯಕತ್ವ, ವ್ಯವಸ್ಥಾಪಕರ ವಿರುದ್ಧವೇ ನೇರವಾಗಿ ಆಕ್ರೋಶ ಹೊರಹಾಕಿದ್ದಾರೆ.
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರಿಗೆ ಸಂದರ್ಶನ ನೀಡಿರುವ ಕುಲದೀಪ್, “ತಂಡದಲ್ಲಿ ಸಂಪರ್ಕ, ಸಂವಹನದ ವ್ಯವಸ್ಥೆ ಬಹಳ ಕಳಪೆಯಾಗಿದೆ. ಎಷ್ಟೋ ವೇಳೆ ನಾನು ಈ ಪಂದ್ಯದಲ್ಲಿ ಆಡುತ್ತೇನೋ, ಇಲ್ಲವೋ ಎಂದು ಗೊತ್ತಾಗಿಲ್ಲ. ಆಯ್ಕೆಯಾಗದಿದ್ದರೆ ಯಾಕೆಂದೂ ಹೇಳುವುದಿಲ್ಲ. ಯಾವ ವಿಚಾರದಲ್ಲಿ ಸುಧಾರಿಸಿಕೊಳ್ಳಬೇಕು ಎಂದೂ ಸ್ಪಷ್ಟವಾಗಿ ತಿಳಿಸುವುದಿಲ್ಲ. ಎಷ್ಟೋ ಪಂದ್ಯಗಳಲ್ಲಿ ನಾನು ಆಡುವುದಕ್ಕೆ ಸೂಕ್ತವಾಗಿದ್ದರೂ, ಅಲ್ಲಿ ಮಿಂಚಬಲ್ಲೆ ಎಂಬ ಖಾತ್ರಿಯಿದ್ದರೂ ಆಯ್ಕೆಯಾಗಿಲ್ಲ’ ಎಂದು ಹೇಳಿದ್ದಾರೆ.
ತಂಡದ ವ್ಯವಸ್ಥಾಪಕರು ಎರಡು ತಿಂಗಳಿಗಾಗಿಯಷ್ಟೇ ಸಿದ್ಧತೆ ಮಾಡಿಕೊಂಡು ಬರುತ್ತಾರೆ. ಆದ್ದರಿಂದ ಪರಿಸ್ಥಿತಿ ಕಷ್ಟವಾಗುತ್ತದೆ. ದೀರ್ಘಕಾಲದಿಂದ ಒಬ್ಬ ಕೋಚ್ ಇದ್ದರೆ, ಅವರೊಂದಿಗೆ ನಮ್ಮ ಸಂಪರ್ಕ ಇದ್ದರೆ, ನಮ್ಮ ಸಾಮರ್ಥ್ಯ ಸರಿಯಾಗಿ ಅರ್ಥವಾಗುತ್ತದೆ. ತಂಡದ ನಾಯಕತ್ವ ವಿದೇಶಿಯರಿಗೆ ಹೋದರಂತೂ ಪರಿಸ್ಥಿತಿ ಇನ್ನೂ ಕಷ್ಟ. ಅವರೊಂದಿಗೆ ಸರಿಯಾಗಿ ಮಾತನಾಡಲೂ ಆಗುವುದಿಲ್ಲ. ಸದ್ಯ ನಾಯಕರಾಗಿರುವ ಇಂಗ್ಲೆಂಡ್ನ ಇಯಾನ್ ಮಾರ್ಗನ್ ಇದನ್ನು ಹೇಗೆ ನಿಭಾಯಿಸುತ್ತಾರೆಂದು ಕಾದು ನೋಡಬೇಕು. ಈಗಿನ ಪರಿಸ್ಥಿತಿಯಲ್ಲಿ ತಂಡದ ವ್ಯವಸ್ಥಾಪಕರಿಗೆ ನನ್ನ ಸಾಮರ್ಥ್ಯದ ಮೇಲೆ ನಂಬಿಕೆಯಿಲ್ಲವೆಂದೇ ಅನಿಸಿದೆ ಎಂದು ಕುಲದೀಪ್ ಹೇಳಿದ್ದಾರೆ.