ಪಂದ್ಯ ನಡೆಯಲು ಕೆಲವೇ ಗಂಟೆ ಬಾಕಿ : ನ್ಯೂಜಿಲ್ಯಾಂಡಿನ ಪಾಕ್ ಪ್ರವಾಸ ದಿಢೀರ್ ರದ್ದು!
Team Udayavani, Sep 18, 2021, 7:20 AM IST
ರಾವಲ್ಪಿಂಡಿ: ಇನ್ನೇನು 18 ವರ್ಷಗಳ ಅನಂತರ ಪಾಕಿಸ್ಥಾನ ನೆಲದಲ್ಲಿ ಐತಿಹಾಸಿಕ ಏಕದಿನ ಸರಣಿ ಆರಂಭಿಸಬೇಕಿದ್ದ ನ್ಯೂಜಿಲ್ಯಾಂಡ್, ಶುಕ್ರವಾರದ ಮೊದಲ ಪಂದ್ಯದ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಸರಣಿಯನ್ನೇ ರದ್ದುಪಡಿಸಿದೆ!
ಕಿವೀಸ್ನ ಈ ದಿಢೀರ್ ನಡೆ ಜಾಗತಿಕ ಕ್ರಿಕೆಟ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಭದ್ರತಾ ಭೀತಿ ಇರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ನ್ಯೂಜಿಲ್ಯಾಂಡ್ ಕ್ರಿಕೆಟ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇವಿಡ್ ವೈಟ್ ಹೇಳಿದ್ದಾರೆ.
ಭದ್ರತಾ ಭೀತಿ ಇದೆ ಎಂದಿದ್ದರೂ, ನಿರ್ದಿಷ್ಟ ವಾಗಿ ಏನೆಂಬುದನ್ನು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿಲ್ಲ. ಈ ನಡುವೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, ನೇರವಾಗಿ ನ್ಯೂಜಿಲ್ಯಾಂಡ್ ಪ್ರಧಾನಿಯೊಂದಿಗೆ ಮಾತನಾಡಿ ದ್ದಾರೆ. ಪಾಕಿಸ್ಥಾನ ವಿಶ್ವದಲ್ಲೇ ಅತ್ಯುತ್ತಮ ಗುಪ್ತಚರ ವ್ಯವಸ್ಥೆ ಹೊಂದಿದೆ. ಪ್ರವಾಸಿ ತಂಡಕ್ಕೆ ಯಾವುದೇ ಭದ್ರತಾ ಭೀತಿಯಿಲ್ಲ ಎಂದಿದ್ದಾರೆ. ಆದರೂ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ.
ಸುರಕ್ಷತೆಗೆ ಮೊದಲ ಆದ್ಯತೆ
“ಪಾಕಿಸ್ಥಾನ ಕ್ರಿಕೆಟ್ ಮಂಡಳಿಗೆ ನಮ್ಮ ನಿರ್ಧಾರದಿಂದ ಎಷ್ಟರ ಮಟ್ಟಿಗೆ ಆಘಾತ ವಾಗಲಿದೆ ಎನ್ನುವ ಅರಿವು ನಮಗಿದೆ. ಅವರ ಆತಿಥ್ಯದಲ್ಲಿ ನಮಗೆ ಯಾವ ಕೊರತೆಯೂ ಕಂಡಿಲ್ಲ. ಆದರೆ ಆಟಗಾರರ ಸುರಕ್ಷತೆಗೆ ಮೊದಲ ಆದ್ಯತೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇದೊಂದೇ ಜವಾಬ್ದಾರಿಯುತ ಆಯ್ಕೆ. ಇಲ್ಲಿಯ ವರೆಗೆ ಆಟಗಾರರಿಗೆ ಯಾವುದೇ ಸಮಸ್ಯೆಯಾಗಿಲ್ಲ, ಎಲ್ಲರೂ ಸುರಕ್ಷಿತವಾಗಿಯೇ ಇದ್ದಾರೆ’ ಎಂದು ಡೇವಿಡ್ ವೈಟ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪಾಕ್ ಕ್ರಿಕೆಟ್ ಮಂಡಳಿ, ನ್ಯೂಜಿಲ್ಯಾಂಡ್ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದೆ. ಎಲ್ಲ ಪ್ರವಾಸಿ ತಂಡಗಳಿಗೆ ನಾವು ಅತ್ಯುತ್ತಮ ಭದ್ರತಾ ವ್ಯವಸ್ಥೆ ಮಾಡುತ್ತೇವೆ ಎಂದು ನ್ಯೂಜಿಲ್ಯಾಂಡ್ ಮಂಡಳಿಗೂ ಹೇಳಿದ್ದೇವೆ. ಆದರೂ ಈ ಬೆಳವಣಿಗೆ ಸಂಭವಿಸಿದೆ ಎಂದು ಹೇಳಿದೆ.
ಪಾಕಿಸ್ಥಾನ-ನ್ಯೂಜಿಲ್ಯಾಂಡ್ 3ಏಕದಿನ, 5 ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಬೇಕಿತ್ತು.
ರಮೀಜ್ ಆಕ್ರೋಶ
ನ್ಯೂಜಿಲ್ಯಾಂಡಿನ ದಿಢೀರ್ ನಿರ್ಧಾರದಿಂದ ದೊಡ್ಡ ಹಿನ್ನಡೆಯಾದದ್ದು ಪಿಸಿಬಿ ಅಧ್ಯಕ್ಷ ರಮೀಜ್ ರಾಜ ಅವರಿಗೆ. ಮೊನ್ನೆಯಷ್ಟೇ ಅಧಿಕಾರ ಸ್ವೀಕರಿಸಿದ ಅವರಿಗೆ ಈ ಸರಣಿ ದೊಡ್ಡ ಪ್ರತಿಷ್ಠೆಯದ್ದಾಗಿತ್ತು. ಆದರೆ ಕಿವೀಸ್ನ ಈ ಅಚ್ಚರಿಯ ನಡೆಯಿಂದ ಅವರು ತೀವ್ರ ಆಕ್ರೋಶಗೊಂಡಿದ್ದಾರೆ. “ಈ ನ್ಯೂಜಿಲ್ಯಾಂಡಿಗರು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ? ಇಲ್ಲಿ ಭೀತಿಪಡುವಂಥದ್ದೇನಿದೆ?’ ಎಂದು ಪ್ರಶ್ನಿಸಿದ್ದಾರೆ.