ಲಾರಿ ಡಿಕ್ಕಿ: ಜಿಂಕೆ ಸ್ಥಳದಲ್ಲೇ ಸಾವು
Team Udayavani, Oct 14, 2021, 2:04 PM IST
ಹುಣಸೂರು: ಹುಣಸೂರು-ಮೈಸೂರು ಹೆದ್ದಾರಿಯ ಅರಬ್ಬಿತಿಟ್ಟು ವನ್ಯಧಾಮದ ರಂಗಯ್ಯನಕೊಪ್ಪಲು ಗೇಟ್ ಬಳಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೇ ಮೃತಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಬಳಿಯ ಅತಿಕಾರಿಬೆಟ್ಟು ಗ್ರಾಮದ ಲಾರಿ ಚಾಲಕ ಗಣೇಶ್ ಎಸ್.ಸುವರ್ಣ ಬಂಧಿತ ಆರೋಪಿ. ಲಾರಿಯನ್ನು ವಶಪಡಿಸಿಕೊಂಡು ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ವಿವರ: ಬುಧವಾರ ಬೆಳಗ್ಗೆ ಅರಬ್ಬಿತಿಟ್ಟು ವನ್ಯಧಾಮದಿಂದ ಹೊರಬಂದಿದ್ದ 3 ವರ್ಷದ ಹೆಣ್ಣು ಜಿಂಕೆಯು ರಸ್ತೆ ದಾಟುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದೆ. ಚಾಲಕ ಗಣೇಶ್ ಎಸ್. ಸುವರ್ಣ ಲಾರಿಯೊಂದಿಗೆ ಪರಾರಿಯಾಗಿದ್ದ, ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಗುರುವಾರ ಬಿಳಿಕೆರೆಯಲ್ಲಿ ಚಾಲಕನ ಸಹಿತ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಚಾಲಕನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸ ಲಾಗಿದೆ ಎಂದು ಡಿಸಿಎಫ್ ತಿಳಿಸಿದ್ದಾರೆ.