ಅರಣ್ಯ ಇಲಾಖೆ ವಸತಿಗೃಹ ಉದಾಟನೆ ಯಾವಾಗ?
ಅನೈತಿಕ ಚಟುವಟಿಕೆಗಳ ತಾಣವಾದ ಕಟ್ಟಡ ಕಟ್ಟಡದ ಕಿಟಕಿ, ಬಾಗಿಲುಗಳನ್ನು ಕದ್ದೊಯ್ದ ಕಳ್ಳರು
Team Udayavani, Oct 27, 2021, 4:55 PM IST
ಅರಕಲಗೂಡು: ಅನೈತಿಕ ಚಟುವಟಿಕೆಗಳ ತಾಣವಾದ ನೂತನವಾಗಿ ನಿರ್ಮಾಣಗೊಂಡಿರುವ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಮತ್ತು ಸಿಬ್ಬಂದಿ ವಸತಿ ಗೃಹ ನಿರ್ಮಾಣಗೊಂಡು ವರ್ಷಗಳು ಕಳೆದರೂ ಉದ^ಟನಾ ಭಾಗ್ಯ ಕಾಣದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ.
ಪಟ್ಟಣದ ಹೊರವಲಯದ ಹೊನ್ನವಳ್ಳಿ ಮತ್ತು ದೇವರಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ 1.10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ರಾತ್ರಿ ಸಮಯದಲ್ಲಿ ಕುಡುಕರ ಹಾವಳಿ ಅಧಿಕವಾಗಿದ್ದು, ಪ್ರತೀ ದಿನ ಯುವಕರು ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಳ್ಳುತ್ತಿರುವ ವಿಷಯಗಳು ಸರ್ವೆ ಸಮಾನ್ಯವಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.
ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ತಿರುಗಾಡಲು ಸಾರ್ವಜನಿಕರು ಭಯ ಪಡುವ ಪರಿಸ್ಥಿತಿ ತಲೆದೂರಿದೆ. ಸಂಬಂಧಪಟ್ಟ ಅರಣ್ಯ ಇಲಾಖೆಯಾಗಲಿ ಪೊಲೀಸ್ ಇಲಾಖೆಯಾಗಲೀ ಮೌನವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಜನವರಿ 24,2019 ರಲ್ಲೇ ಈ ಕಟ್ಟಡಕ್ಕೆ ಶಂಕುಸ್ಥಾಪನೆಯಾಗಿದ್ದು, ವರ್ಷದ ಅವಧಿ ಮುಕ್ತಾಯದಲ್ಲೆ ಒಂದು ಕೊಠಡಿ ಕಚೇರಿಗೆ ಮೀಸಲಿಟ್ಟು, ಇನ್ನೂ ಉಳಿದ 6 ಕೊಠಡಿಗಳು ವಸತಿಗೆ ನಿರ್ಮಾಣಗೊಂಡಿದೆ. ಆದರೆ, ನಿಗದಿತ ಸಮಯದಲ್ಲಿ ಉದ್ಘಾಟನೆಗೊಳ್ಳದ ಕಾರಣ ಸಾರ್ವಜನಿಕರಿಗೆ ಸೇವೆ ದೊರೆಯದಾಗಿದೆ.
ಇದನ್ನೂ ಓದಿ:- ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ
ಮೂಲ ಸೌಕರ್ಯ ಕಲ್ಪಿಸಲು ಮನವಿ: ಕಟ್ಟಡಗಳು ನಿರ್ಮಾಣಗೊಂಡು ವರ್ಷವಾದರೂ ವಾಸಕ್ಕೆ ಅನುಕೂಲವಾಗುವಂತೆ ಮೂಲ ಸೌಕರ್ಯಗಳನ್ನು ಕಲ್ಪಿಸದಿರುವುದೇ ಉದ್ಘಾಟನೆಗೊಳ್ಳದಿರುವುದಕ್ಕೆ ಕಾರಣವಾಗಿದೆ. ಕುಡಿಯುವ ನೀರು ವಿದ್ಯುತ್, ಹಾಗೂ ವಸತಿ ನಿಲಯಗಳ ರಕ್ಷಣೆಗೆ ಕಾಂಪೌಂಡ್ ಏನು ಇಲ್ಲದ ಕಾರಣ ಈ ಕಟ್ಟಡಗಳು ಅರಣ್ಯದೊಳಗಿರುವುದರಿಂದ ಸಿಬ್ಬಂದಿ ಸಂಪೂರ್ಣವಾಗಿ ಸೌಕರ್ಯ ಕಲ್ಪಿಸುವವರೆಗೆ ಕಟ್ಟಡಕ್ಕೆ ಬರಲು ನಿರಾಕರಿಸುವುದು ಒಂದು ಕಾರಣವಾಗಿದೆ.
ಒಟ್ಟಾರೆ ಸಾರ್ವಜನಿಕರ ತೆರಿಗೆ ಹಣದಿಂದ ಕೋಟ್ಯಂತರ ಹಣವನ್ನ ಖರ್ಚು ಮಾಡಿ ನಿರ್ಮಾಣಗೊಂಡಿರುವ ಈ ಕೊಠಡಿಗಳಿಗೆ ಸೌಕರ್ಯಗಳನ್ನು ಕಲ್ಪಿಸದೇ ಇರುವುದರಿಂದ ಆ ಸ್ಥಳದಲ್ಲಿ ನಿರ್ಮಾಣಗೊಂಡಿರುವ ಕಟ್ಟಡದ ಸಿಂಟೆಕ್ಸ್, ಪೈಪ್, ಕಿಟಕಿ ಹಾಗೂ ಬಾಗಿಲುಗಳನ್ನು ಈಗಾಗಲೇ ಹೊತ್ತೂಯ್ದಿದ್ದಾರೆ. ಇದೇ ರೀತಿ ಉದ್ಘಾಟನೆಗೊಳ್ಳದೆ ತಾತ್ಸಾರಕ್ಕೆ ಒಳಗಾದರೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದರ ಮೊದಲೇ ಕಟ್ಟಡ ಕುಸಿದರೂ ಆಶ್ಚರ್ಯಪಡುವಂತಿಲ್ಲ
“ಹೊನ್ನವಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಅರಣ್ಯ ಇಲಾಖಾ ಕಟ್ಟಡಗಳನ್ನು ಶೀಘ್ರವಾಗಿ ಉದ್ಘಾಟಿಸುವ ಮೂಲಕ ಇಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.” – ಯೋಗಾರಮೇಶ್, ಪೊಟ್ಯಾಟೋ ಕ್ಲಬ್ ಅಧ್ಯಕ
“ಕಚೇರಿ ಕಟ್ಟಡ ಹಾಗೂ ಸಿಬ್ಬಂದಿ ವಸತಿ ನಿಲಯಗಳು ನಿರ್ಮಾಣಗೊಂಡಿದ್ದು, ಈಗಾಗಲೇ ಗುತ್ತಿಗೆದಾರನಿಂದ ಇಲಾಖೆಯ ವಶಕ್ಕೆ ಪಡೆಯಲಾಗಿದೆ. ಈ ಸ್ಥಳದಲ್ಲಿ ವಿದ್ಯುತ್ ಮತ್ತು ಕುಡಿವ ನೀರಿನ ವ್ಯವಸ್ಥೆ ಹಾಗೂ ರಕ್ಷಣೆಗೆ ಕಾಂಪೌಂಡ್ ಇಲ್ಲದ ಕಾರಣ ಇವುಗಳನ್ನ ವ್ಯವಸ್ಥೆ ಮಾಡಿಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮೂಲ ಸೌಕರ್ಯ ಒದಗಿಸಲಿದ ಕೂಡಲೇ ಉದ್ಘಾಟನೆ ಮಾಡಲಾಗುವುದು.” – ಅರುಣ್ಕುಮಾರ್, ವಲಯ ಅರಣ್ಯಾಧಿಕಾರಿ