ಸ್ವಹಿತಾಸಕ್ತಿ ಸಂಘರ್ಷ: ನಿರ್ದೇಶಕ ಹುದ್ದೆ ತ್ಯಜಿಸಿದ ಸೌರವ್ ಗಂಗೂಲಿ
Team Udayavani, Oct 29, 2021, 7:00 AM IST
ಕೋಲ್ಕತಾ: ಸ್ವಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಸೌರವ್ ಗಂಗೂಲಿ ಇಂಡಿಯನ್ ಸೂಪರ್ ಲೀಗ್ನಲ್ಲಿ (ಐಎಸ್ಎಲ್) ಎಟಿಕೆ ಮೋಹನ್ ಬಗಾನ್ ಫ್ರಾಂಚೈಸಿಯ ನಿರ್ದೇಶಕ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದರು.
ಮುಂದಿನ ಆವತ್ತಿಯ ಐಪಿಎಲ್ನಲ್ಲಿ ಕೋಲ್ಕತಾದ ಉದ್ಯಮಿ ಸಂಜೀವ್ ಗೋಯೆಂಕಾ ಮಾಲಕತ್ವದ “ಆರ್ಪಿಜಿಎಸ್ ಗ್ರೂಪ್’ ಲಕ್ನೋ ಮೂಲದ ಫ್ರಾಂಚೈಸಿಯನ್ನು 7,090 ಕೋಟಿ ರೂ. ಮೊತ್ತಕ್ಕೆ ಖರೀದಿಸಿತ್ತು. ಅವರು ಎಟಿಕೆ ಮೋಹನ್ ಬಗಾನ್ ಮಾಲಕತ್ವವನ್ನೂ ಹೊಂದಿದ್ದಾರೆ. ಇದರಿಂದಾಗಿ ಗಂಗೂಲಿ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘಿಸಿದಂತಾಗುತ್ತಿತ್ತು. ಬಿಸಿಸಿಐ ಅಧ್ಯಕ್ಷರಾಗಿರುವ ಗಂಗೂಲಿ, ಎಟಿಕೆ ಮೋಹನ್ ಬಗಾನ್ ಫ್ರಾಂಚೈಸಿಯ ನಿರ್ದೇಶಕ ಹುದ್ದೆಯನ್ನು ಹೊಂದಿದ್ದರು. ಈಗ ಈ ಜವಾಬ್ದಾರಿಯಿಂದ ಹೊರಬಂದಿದ್ದಾರೆ.
ಗೋಯೆಂಕಾ ಹೇಳಿಕೆ:
“ಮೋಹನ್ ಬಗಾನ್ ಹುದ್ದೆಯಿಂದ ಸೌರವ್ ಗಂಗೂಲಿ ಕೆಳಗಿಳಿಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ಈ ಕುರಿತು ಘೋಷಣೆ ಮಾಡಬೇಕಿದೆ. ಕ್ಷಮಿಸಿ, ನಾನು ಮೊದಲೇ ಹೇಳಿದ್ದೇನೆ’ ಎಂದು ಸಂಜೀವ್ ಗೋಯೆಂಕಾ ಹೇಳಿಕ ನೀಡಿದ ಬೆನ್ನಲ್ಲೇ ಗಂಗೂಲಿ ಅವರ ರಾಜಿನಾಮೆ ಸುದ್ದಿ ಹೊರಬಿತ್ತು.
ಗಂಗೂಲಿ ಎಟಿಕೆ ಮೋಹನ್ ಬಾಗನ್ ಫ್ರಾಂಚೈಸಿಯಲ್ಲಿ ಷೇರು ಕೂಡ ಹೊಂದಿದ್ದಾರೆ.
2019ರಲ್ಲೂ “ಸಂಘರ್ಷ’:
2019ರಲ್ಲೂ ಸೌರವ್ ಗಂಗೂಲಿ ಸ್ವಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ಆರೋಪವನ್ನು ಎದುರಿಸಿದ್ದರು. ಬಂಗಾಲ ಕ್ರಿಕೆಟ್ ಸಂಸ್ಥೆಯಲ್ಲಿ ಅಧ್ಯಕ್ಷ ಹುದ್ದೆಯ ಜತೆಗೆ ಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದರು.