ರಾಮು ನೆನಪಿನಲ್ಲಿ ‘ಅರ್ಜುನ್ ಗೌಡ’ ಇವೆಂಟ್
Team Udayavani, Dec 30, 2021, 11:43 AM IST
ನಿರ್ಮಾಪಕ ರಾಮು “ಅರ್ಜುನ್ ಗೌಡ’ ಚಿತ್ರದ ಮೇಲೆ ದೊಡ್ಡ ಕನಸು ಕಂಡಿದ್ದರು. ಅದರಂತೆ ಆ ಚಿತ್ರವನ್ನು ನಿರ್ಮಿಸಿದ್ದರು ಕೂಡಾ. ಚಿತ್ರದ ಬಿಡುಗಡೆಯನ್ನು ಕೂಡಾ ಅದ್ಧೂರಿಯಾಗಿ ಮಾಡುವ ಯೋಚನೆ ಅವರಿಗಿತ್ತು. ಆದರೆ, ಅವರ ಕನಸು ಈಡೇರುವ ಮುನ್ನವೇ ರಾಮು ಕೋವಿಡ್ಗೆ ಬಲಿಯಾದರು. ಆದರೆ, ಅವರ ಪತ್ನಿ ಮಾಲಾಶ್ರೀ ಪತಿಯ ಆಸೆಯನ್ನು ಪೂರೈಸಲು ಮುಂದಾಗಿದ್ದಾರೆ.
ಇಷ್ಟು ವರ್ಷ ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದ ಮಾಲಾಶ್ರೀ ಈಗ, “ಅರ್ಜುನ್ ಗೌಡ’ ಚಿತ್ರದ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಸಿನಿಮಾದ ಬಿಡುಗಡೆ ಭರಾಟೆ ಅವರಿಗೆ ಹೊಸದು. ಆದರೆ, ಅನಿವಾರ್ಯವಾಗಿ ಮಾಡಲೇಬೇಕಾಗಿದೆ. ಚಿತ್ರ ಡಿ.31ಕ್ಕೆ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಪ್ರೀ ರಿಲೀಸ್ ಇವೆಂಟ್ ಕಾರ್ಯವನ್ನು ಆಯೋಜಿಸಿಲಾಗಿತ್ತು. ರಾಮು ಕನಸಿನ ಸಿನಿಮಾದ ಬಿಡುಗಡೆಗೆ ಅವರ ಬ್ಯಾನರ್ನಲ್ಲಿ ಕೆಲಸ ಮಾಡಿದ ಅನೇಕ ಕಲಾವಿದರು ಸಾಥ್ ನೀಡಿದರು.
ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಕಿವೀಸ್ ದಿಗ್ಗಜ ರಾಸ್ ಟೇಲರ್
ದೇವರಾಜ್, ರವಿಚಂದ್ರನ್, ಶಿವರಾಜ್ಕುಮಾರ್, ಉಪೇಂದ್ರ, ಗಣೇಶ್, ಕೃಷ್ಣ, ಪ್ರಜ್ವಲ್ ದೇವರಾಜ್… ಹೀಗೆ ಅನೇಕ ನಟರು “ಅರ್ಜುನ್ ಗೌಡ’ನಿಗೆ ಸಾಥ್ ನೀಡಿದರು. ಎಲ್ಲರೂ ರಾಮು ಅವರ ಸಿನಿಮಾ ಪ್ರೀತಿ, ಅವರ ಬ್ಯಾನರ್ನಲ್ಲಿ ಕೆಲಸ ಮಾಡಿದ ಅನುಭವ ಹಂಚಿಕೊಂಡು ಭಾವುಕರಾದರು. ಮಾಲಾಶ್ರೀ ಕೂಡಾ ಪತಿಯ ಸಿನಿಮಾ ಕನಸಿನ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದರು. ಇಡೀ “ಅರ್ಜುನ್ ಗೌಡ’ ಕಾರ್ಯಕ್ರಮ ರಾಮು ನೆನಪಿನಲ್ಲಿ ಸಾಗಿ ಬಂದು, ಎಲ್ಲರನ್ನು ಭಾವುಕರನ್ನಾಗಿಸಿತು. ಈ ಚಿತ್ರವನ್ನು ಲಕ್ಕಿ ಶಂಕರ್ ನಿರ್ದೇಶಿಸಿದ್ದಾರೆ.