ಸಾಗರಮಾಲಾ ಯೋಜನೆ: ದ.ಕ. ಜಿಲ್ಲೆಗೆ 880 ಕೋ.ರೂ. ಯೋಜನೆ: ನಳಿನ್ ಕುಮಾರ್ ಕಟೀಲು
Team Udayavani, Jan 14, 2022, 6:35 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂದರು, ಜಲಯಾನ, ಪ್ರವಾಸೋದ್ಯಮ ಹಾಗೂ ಮೀನುಗಾರಿಕಾ ಕ್ಷೇತ್ರಗಳನ್ನು ಒಳಗೊಂಡಂತೆ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿ ರಿಸಿಕೊಂಡು ಸಾಗರ ಮಾಲಾ ಯೋಜನೆಯಡಿ ಸುಮಾರು 880 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶೀಘ್ರ ಅನುಮೋದನೆ ನೀಡುವುದಾಗಿ ಕೇಂದ್ರ ಬಂದರು, ಜಲ ಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಭರವಸೆ ನೀಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಕೇಂದ್ರ ಸಚಿವರು ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿ ಸಾಗಾರಮಾಲಾ ಯೋಜನೆ ಯಲ್ಲಿ ಜಿಲ್ಲೆಗೆ ಸಂಬಂಧಪಟ್ಟಂತೆ ಮಂಡಿಸಿರುವ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಸಚಿವರು ಸ್ಪಂದಿಸಿದ್ದಾರೆ ಎಂದು ನಳಿನ್ ಹೇಳಿದ್ದಾರೆ.
ಬೇಡಿಕೆಗಳೇನು? :
350 ಕೋ.ರೂ. ವೆಚ್ಚದಲ್ಲಿ ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿ, ಕಾರ್ಗೋ ಹಾಗೂ ಕ್ರೂಸ್ ಟರ್ಮಿನಲ್ ನಿರ್ಮಾಣ ಯೋಜನೆ, 98 ಕೋ.ರೂ.ವೆಚ್ಚದಲ್ಲಿ ಹಳೆ ಮಂಗಳೂರು ಬಂದರು ಸಂಪರ್ಕ ರಸ್ತೆ, 30.50 ಕೋ.ರೂ.ವೆಚ್ಚದಲ್ಲಿ ಗುರುಪುರ ನದಿಯ ನಡುಗಡ್ಡೆಗಳ ಅಭಿವೃದ್ಧಿ, 100 ಕೋ.ರೂ.ವೆಚ್ಚದಲ್ಲಿ ಬಹು ಉಪಯೋಗಿ ಹಾರ್ಬರ್ ನಿರ್ಮಾಣ, 10 ಕೋ.ರೂ.ವೆಚ್ಚದಲ್ಲಿ ಬೆಂಗ್ರೆಯಲ್ಲಿ ಬೀಚ್ ಹಾಗೂ ಮೂಲಸೌಕರ್ಯ ಅಭಿವೃದ್ಧಿ, 10.68 ಕೋ.ರೂ. ವೆಚ್ಚದಲ್ಲಿ ತೇಲುವ ಜೆಟ್ಟಿ ಅಳವಡಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಯೋಜನೆ, 280.58 ಕೋ.ರೂ. ವೆಚ್ಚದಲ್ಲಿ ನೇತ್ರಾವತಿ ಹಾಗೂ ಗುರುಪುರ ನದಿಗಳಲ್ಲಿ ವಾಟರ್ ವೇ ಅಭಿವೃದ್ಧಿ ಯೋಜನೆ ಮುಂತಾದ ಬೇಡಿಕೆಗಳನ್ನು ಮಂಡಿಸಲಾಗಿತ್ತು ಎಂದು ನಳಿನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.