ಕೆದೂರು: ರಾಜ್ಯಮಟ್ಟದ ಇನ್ಸ್ಪಾಯರ್ ಅವಾರ್ಡ್ ಸ್ಪರ್ಧೆಗೆ ಆದೇಶ್ ಕಾಮತ್ ಆಯ್ಕೆ
ಗ್ರಾಮೀಣ ಭಾಗದ ವಿದ್ಯಾರ್ಥಿಯಿಂದ ಆವಿಷ್ಕೃತಗೊಂಡ ತ್ರಿ ಇನ್ ಒನ್ ಮಾದರಿಯ ವಾಕಿಂಗ್ ಸ್ಟಿಕ್ !
Team Udayavani, Jan 15, 2022, 7:11 PM IST
ತೆಕ್ಕಟ್ಟೆ : 2020-21ನೇ ಸಾಲಿನ ಇನ್ಸ್ಪಾಯರ್ ಅವಾರ್ಡ್ ಸ್ಪರ್ಧೆಯಲ್ಲಿ ಕೆದೂರು ಸರಕಾರಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಆದೇಶ್ ಕಾಮತ್ ಅವರು ಉಡುಪಿ ಜಿಲ್ಲೆಯಿಂದ ರಾಜ್ಯಮಟ್ಟದ ಇನ್ಸ್ಪಾಯರ್ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ವಯಸ್ಸಾದವರು ಹಾಗೂ ಅಂಗವೈಕಲ್ಯತೆಯಲ್ಲಿ ಬಳಲುತ್ತಿರುವವರಿಗೆ ಆಸರೆಯಾಗಬಲ್ಲ ವಾಕಿಂಗ್ ಸ್ಟಿಕ್ ವಿತ್ ಸೀಟ್ ಎಂಡ್ ಅಂಬ್ರಲಾ ಎನ್ನುವ ವಾಕಿಂಗ್ ಸ್ಟಿಕ್ ಸುಧಾರಿತ ಮಾದರಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಮಾದರಿಯಲ್ಲಿ ಕಡಿಮೆ ತೂಕದ ಅಲ್ಯೂಮಿನಿಯಂ ಮೂರು ರಾಡ್, ಸೀಟ್( ಅಲ್ಯೂಮಿನಿಯಂ ಪ್ಲೇಟ್) ಹಾಗೂ ಕೊಡೆಯನ್ನು ಜೋಡಿಸಲಾಗಿದೆ. ಇದು ಸಂಪೂರ್ಣ ಹಗುರವಾಗಿರುವ ಪರಿಣಾಮ ವಯಸ್ಕರಿಗೆ ನಡೆಯುವಾಗ ಆಯಾಸವಾದಾಗ ಸುಧಾರಿಸಿಕೊಳ್ಳಲು ವಿಶೇಷವಾಗಿ ಸೀಟ್ ವ್ಯವಸ್ಥೆಯೊಂದಿಗೆ ಬಿಸಿಲಿನಿಂದ ರಕ್ಷಣೆ ಪಡೆಯಲು ಕೊಡೆಯನ್ನು ಅಳವಡಿಸಲಾಗಿದೆ.
ಈತ ಕೆದೂರು ಉಮೇಶ್ ಕಾಮತ್ ಹಾಗು ಉಷಾ ಕಾಮತ್ ದಂಪತಿಗಳ ಪುತ್ರ. ವಿಜ್ಞಾನ ಶಿಕ್ಷಕಿ ವಸುಧಾ ಅವರ ಜತೆ ಶಿಕ್ಷಕಿ ದೀಪಾವತಿ ಅವರು ಮಾರ್ಗದರ್ಶನ ನೀಡಿದರು.
-ವರದಿ : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ