ಏಕದಿನ ತಂಡಕ್ಕೆ ಸೇರಿದ ಮಯಾಂಕ್ ಅಗರ್ವಾಲ್: ಮೊದಲ ಪಂದ್ಯಕ್ಕೆ ರಾಹುಲ್ ಗೈರು
Team Udayavani, Feb 4, 2022, 9:13 AM IST
ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಕಂಟಕ ಎದುರಾಗಿದೆ. ಭಾರತ ತಂಡದ ಹಲವರಿಗೆ ಕೋವಿಡ್ ಸೋಂಕು ದೃಢವಾಗಿದ್ದು, ಕ್ವಾರಂಟೈನ್ ನಲ್ಲಿದ್ದಾರೆ.
ಗುರುವಾರ ಅವರ ಆರ್ಟಿ-ಪಿಸಿಆರ್ ಪರೀಕ್ಷೆಗಳು ನೆಗೆಟಿವ್ ಬಂದ ನಂತರ ಶಿಖರ್ ಧವನ್, ಋತುರಾಜ್ ಗಾಯಕ್ವಾಡ್ ಮತ್ತು ಶ್ರೇಯಸ್ ಅಯ್ಯರ್ ರನ್ನು ಹೊರತುಪಡಿಸಿ ಉಳಿದ ಭಾರತ ತಂಡದ ಆಟಗಾರರು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತರಬೇತಿ ಪ್ರಾರಂಭಿಸಿದರು.
ಇಬ್ಬರು ಆರಂಭಿಕರು ಸೋಂಕಿಗೆ ತುತ್ತಾದ ಕಾರಣ ಕರ್ನಾಟಕದ ಮಯಾಂಕ್ ಅಗರ್ವಾಲ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ಸದ್ಯ ಮಯಾಂಕ್ ಮೂರು ದಿನಗಳ ಕಡ್ಡಾಯ ಕ್ವಾರಂಟೈನ್ ನಲ್ಲಿದ್ದು, ಅವರು ಪಂದ್ಯದ ದಿನದಂದೇ ತಂಡಕ್ಕೆ ಲಭ್ಯರಾಗುತ್ತಾರೆ.
ಇದನ್ನೂ ಓದಿ:ರಣಜಿ ಟ್ರೋಫಿ ಕ್ರಿಕೆಟ್: ವೇಳಾಪಟ್ಟಿ ಅಂತಿಮ
ಅಲ್ಲದೆ ಸ್ಪೆಷಲಿಸ್ಟ್ ಓಪನರ್ ಆಗಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಅವರನ್ನು ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಮೊದಲ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಆಡುವುದು ಬಹುತೇಕ ಖಚಿತವಾಗಿದೆ. ಶಿಖರ್ ಧವನ್ ಮತ್ತು ಋತುರಾಜ್ ಗೆ ಕೋವಿಡ್ ಪಾಸಿಟಿವ್ ಆಗಿದೆ. ಕೆ.ಎಲ್.ರಾಹುಲ್ ವೈಯಕ್ತಿಕ ಕಾರಣಗಳಿಂದ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ನಾಯಕ ರೋಹಿತ್ ಶರ್ಮ ಜೊತೆ ಮಯಾಂಕ್ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದೆ.