ಇವತ್ತು ಹಿಜಾಬ್, ನಾಳೆ ಬುರ್ಕಾ: ಎಲ್ಲಾ ಬೇಡಿಕೆ ಈಡೇರಿಸಲಾಗುತ್ತಾ; ಭರತ್ ಶೆಟ್ಟಿ ಆಕ್ರೋಶ
Team Udayavani, Feb 7, 2022, 10:24 AM IST
ಸುರತ್ಕಲ್: ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಇದೆಯೆಂದು ಇವತ್ತು ಹಿಜಾಬ್ ಕೇಳಿದರೆ, ನಾಳೆ ಬುರ್ಕಾ ವ್ಯವಸ್ಥೆಗೂ ಬೇಡಿಕೆ ಮಂಡಿಸುತ್ತೀರಿ. ಎಲ್ಲವೂ ವೈಯುಕ್ತಿಕ ಬೇಡಿಕೆ ಮಂಡಿಸುತ್ತಾ ಹೋದರೆ ಶಿಕ್ಷಣ ಪದ್ದತಿ ಯಲ್ಲಿ ಸಮಾನತೆ ಉಳಿಯುತ್ತದೆಯೆ. ಸರಕಾರಿ ಶಿಕ್ಷಣದಲ್ಲಿ ಸರ್ವಧರ್ಮ ವ್ಯವಸ್ಥೆ ಇರುವಾಗ ಅದರಂತೆ ನಡೆದುಕೊಳ್ಳಲು ತಮ್ಮ ಮಕ್ಕಳಿಗೆ, ಸಮುದಾಯಕ್ಕೆ ಮೊದಲು ಬುದ್ದಿವಾದ ಹೇಳಿ. ಬಳಿಕ ಸಚಿವರನ್ನು, ಶಾಸಕರನ್ನು ನೋಡಿಕೊಳ್ಳಿ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಪ್ರತಿ ಎಚ್ಚರಿಕೆ ನೀಡಿದ್ದಾರೆ.
ಮಾಜಿ ವಿಧಾನ ಪರಿಷತ್ ಸದಸ್ಯ, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ ಎಸ್ ಮಸೂದ್ ಅವರ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಶಾಸಕರು ಸರಕಾರದ ಆದೇಶವನ್ನು ಸಮರ್ಥಿಸಿದರಲ್ಲದೆ, ಈ ಹಿಂದೆ ಉಚ್ಚ ನ್ಯಾಯಲಯ ನೀಡಿದ ಆದೇಶಗಳನ್ನೂ ಪರಿಶೀಲಿಸಿ ಹೇಳಿಕೆ ನೀಡಿ. ಸಮುದಾಯವನ್ಬು ದಾರಿ ತಪ್ಪಿಸುವ ಬದಲು ಸರಿದಾರಿಗೆ ತರಲು ಮುಂದಾಗಬೇಕಿದೆ ಎಂದು ಸಲಹೆ ನೀಡಿದ್ದಾರೆ.