ಅಂದು ರಾಜಕೀಯ- ಇಂದು ಪ್ರಾಣಸಂಕಟ-ಮುಂದು ಸರಕಾರಕ್ಕೆ ಖೋತಾ!
ಬಸ್ಸ್ಟಾಂಡ್ ವಠಾರ, ಆಕಾಶವಾಣಿ ಜಂಕ್ಷನ್, ಮಹೇಶ್ ಡಿವೈಡರ್ ಅಪಘಾತ ವಲಯ
Team Udayavani, Apr 18, 2022, 12:27 PM IST
ಬ್ರಹ್ಮಾವರ: ಬ್ರಹ್ಮಾವರದಲ್ಲಿ ರಾ.ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ಕಾಮಗಾರಿ ಆರಂಭವಾಗುವಾಗ ತಂದ ಒತ್ತಡದ ದುಷ್ಪರಿಣಾಮವನ್ನು ಇಂದು ಪ್ರತಿನಿತ್ಯ ಸಾವಿರಾರು ಮಂದಿ ಅನುಭವಿಸುತ್ತಿದ್ದಾರೆ.
ಮುಖ್ಯವಾಗಿ ಬಸ್ಸ್ಟಾಂಡ್ ವಠಾರ, ಆಕಾಶವಾಣಿ ಮತ್ತು ಮಹೇಶ್ ಆಸ್ಪತ್ರೆ ಡಿವೈಡರ್ ಅಪಾಯಕಾರಿ ಸ್ಥಳಗಳಾಗಿ ಜನರನ್ನು ಕಾಡುತ್ತಿದೆ. ಬಸ್ಸ್ಟಾಂಡ್ನಿಂದ ಸ್ವಲ್ಪ ಹಿಂದೆ ಪ್ರಾರಂಭಗೊಂಡಿದ್ದ ಅಂಡರ್ಪಾಸ್ ಕಾಮಗಾರಿಯನ್ನು ಒತ್ತಡದ ಕಾರಣ ಸಮುದಾಯ ಆರೋಗ್ಯ ಕೇಂದ್ರದ ಎದುರಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಯೂ ಮಂಜೂರಾದ ಅಂಡರ್ ಪಾಸ್ ಬದಲಿಗೆ ಚಿಕ್ಕದಾದ ಕ್ಯಾಟಲ್ ಪಾಸ್ ನಿರ್ಮಿಸಲಾಯಿತು. ಪರಿಣಾಮ ಬಸ್ಸ್ಟಾಂಡ್, ಕ್ಯಾಟಲ್ಪಾಸ್, ಆಕಾಶವಾಣಿ ಅಪಘಾತ ವಲಯಗಳಾಗಿ ಮಾರ್ಪಾಡಾಗಿದೆ.
ಗೊಂದಲ, ಆತಂಕ
ಬಸ್ಸ್ಟಾಂಡ್ ಬಳಿ ಪೇಟೆ ಹಾಗೂ ಕುಂಜಾಲು ಕಡೆಯಿಂದ ಬರುವ, ಹೋಗುವ ವಾಹನಗಳು, ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಕೇಂದ್ರೀಕರಿಸುವುದರಿಂದ ತೀವ್ರ ಗೊಂದಲವಾಗುತ್ತಿದೆ.
ಆಕಾಶವಾಣಿ ಬಳಿ ರಾ.ಹೆ., ಬಾರಕೂರು ರಸ್ತೆ, ಸಂತೆ ಮಾರುಕಟ್ಟೆ ರಸ್ತೆ, ಸರ್ವಿಸ್ ರಸ್ತೆಗಳು ಕೂಡುವುದರಿಂದ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಜತೆಗೆ ದಿಬ್ಬದ ರೀತಿ ಒಮ್ಮೆಲೇ ರಸ್ತೆ ಎತ್ತರಿಸಿದ್ದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಜತೆಗೆ ಮುಂಬಯಿ, ಹುಬ್ಬಳ್ಳಿ, ಬೆಳಗಾಂ ಮೊದಲಾದ ಕಡೆ ತೆರಳುವ ಬಸ್ಗಳು ಹೆದ್ದಾರಿಯಲ್ಲೇ ನಿಲ್ಲುವುದರಿಂದ ಇತರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಆಶ್ರಯ ಹೊಟೇಲ್ ಕಡೆಯಿಂದ ಪೇಟೆಗೆ ಬರುವ ವಾಹನಗಳು ಬ್ಯಾರಿಕೇಡ್ ನಡುವೆ ಸಂಚರಿಸುತ್ತಿರುವುದು ಭಾರೀ ಅಪಾಯಕ್ಕೆ ಎಡೆ ಮಾಡುತ್ತಿದೆ. ಇನ್ನು ಕ್ಯಾಟಲ್ ಪಾಸ್ ಬಳಿ ವಾಹನ ಸವಾರರ ಪರದಾಟ ಹೇಳತೀರದು.
ಕುಂಜಾಲು ಸರ್ಕಲ್, ಕೆ.ಜಿ. ರೋಡ್ ಜಂಕ್ಷನ್ ಹಾಗೂ ಧರ್ಮಾವರಂ ಡಿವೈಡರ್ ಕೂಡಾ ಅಪಾಯಕಾರಿ ಸ್ಥಳಗಳಾಗಿ ಬದಲಾಗುತ್ತಿದೆ.
ಟ್ರಾಫಿಕ್ ನಿರ್ವಹಣೆಗೆ ಹಲವು ಕ್ರಮ
ಬ್ರಹ್ಮಾವರದಲ್ಲಿ ಟ್ರಾಫಿಕ್ ಸಮಸ್ಯೆ ನಿರ್ವಹಣೆಗೆ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಸ್ಸ್ಟಾಂಡ್, ಆಕಾಶವಾಣಿ ಬಳಿ ಹೆಚ್ಚುವರಿ ಪೊಲೀಸ್ ಸಿಬಂದಿ ನಿಯೋಜಿಸಲಾಗಿದೆ. ಸಂಜೆ ಅನಂತರವೂ ಉಡುಪಿಯಿಂದ ಕುಂದಾಪುರ ಕಡೆ ತೆರಳುವ ಎಲ್ಲ ಬಸ್ಗಳು ಸ್ಟಾಂಡ್ ಒಳಗೆ ಬರುವಂತೆ ಮಾಡಲಾಗಿದೆ. ಗುರುನಾಥ್ ಹಾದಿಮನಿ, ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ
– ಪ್ರವೀಣ್ ಮುದ್ದೂರು