ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡಲು ತೀರ್ಮಾನ
Team Udayavani, Apr 20, 2022, 7:34 PM IST
ಶಿವಮೊಗ್ಗ: ಸೋಗಾನೆ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಸರು ಇಡಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ ನಂತರ ಮಾತನಾಡಿದ ಸಿಎಂ, ರಾಜ್ಯದ ಆರ್ಥಿಕ ಅಭಿವೃದ್ಧಿ ಆಗಬೇಕಾದರೆ ಮೂಲಭೂತ ಸೌಲಭ್ಯಗಳು ಮುಖ್ಯ.ಇದರಿಂದ ಆರ್ಥಿಕ ಬೆಳವಣಿಗೆ ಸಹ ಆಗುತ್ತದೆ. 3500 ಕಿ.ಮೀ. ನಷ್ಟು ರಾಜ್ಯ ಹೆದ್ದಾರಿಗೆ ಅನುಮೋದನೆ ಕೊಟ್ಟಿದ್ದೇವೆ. ಕೇಂದ್ರ ಸರಕಾರ 6 ಸಾವಿರ ಎನ್ ಎಚ್ ಅಭಿವೃದ್ಧಿಗೆ ಅನುಮೋದನೆ ಕೊಟ್ಟಿದೆ. ಜಿಲ್ಲಾ ಕೇಂದ್ರಗಳಲ್ಲಿ ರಿಂಗ್ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ಏರ್ ಪೋರ್ಟ್ ಅವಶ್ಯಕವಾಗಿರುವ ವ್ಯವಸ್ಥೆ.ಕೈಗಾರಿಕೆ, ಶಿಕ್ಷಣ, ಆರೋಗ್ಯ ಎಲ್ಲಾ ಬೆಳೆಯಬೇಕು ಅಂದರೆ ಏರ್ ಪೋರ್ಟ್ ಅಗತ್ಯ.ಶಿವಮೊಗ್ಗ, ಬಿಜಾಪುರದಲ್ಲಿ ಏರ್ ಪೋರ್ಟ್ ಕೆಲಸ ನಡೆಯುತ್ತಿದೆ. ರಾಯಚೂರಿನಲ್ಲಿ ಈ ವರ್ಷದಿಂದ ಕಾಮಗಾರಿ ಆರಂಭವಾಗುತ್ತದೆ. ಕಾರವಾರದಲ್ಲಿ ನೇವಿ ಏರ್ ಪೋರ್ಟ್ ಕಾಮಗಾರಿ ನಡೆಯುತ್ತಿದೆ ಎಂದರು.
2006 ರಲ್ಲಿಯೇ ಶಿವಮೊಗ್ಗ ಏರ್ ಪೋರ್ಟ್ ಕಾಮಗಾರಿ ಆರಂಭವಾಗಿತ್ತು. ಆದರೆ ಕಾಮಗಾರಿ ವಿಳಂಬವಾಯ್ತು.ಬೆಂಗಳೂರಿನ ನಂತರ ಅತಿಹೆಚ್ಚು ಉದ್ದದ ರನ್ ವೇ ಹೊಂದಿರುವ ಏರ್ ಪೋರ್ಟ್ ಶಿವಮೊಗ್ಗ ಏರ್ ಪೋರ್ಟ್. ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣದ ಸೌಲಭ್ಯ ಹೊಂದಲಿದೆ. ಯಡಿಯೂರಪ್ಪ ಅವರು ಏರ್ ಪೋರ್ಟ್ ಕಾಮಗಾರಿ ವೀಕ್ಷಣೆ ಮಾಡುವಂತೆ ಸೂಚಿಸಿದ್ದರು. ಅದರಂತೆ ಇಂದು ಕಾಮಗಾರಿ ವೀಕ್ಷಣೆ ಮಾಡಿದ್ದೇನೆ. ಇದು ಕರ್ನಾಟಕದ ಹೆಮ್ಮೆಯ ಏರ್ ಪೋರ್ಟ್ ಆಗಲಿದೆ ಎಂದರು.
ರೈತರ ಜಮೀನಿಗೆ ಪರಿಹಾರ ಕೊಡಬೇಕಿದೆ. ನೈಟ್ ಲ್ಯಾಂಡಿಂಗ್ ಸೌಲಭ್ಯ ಒದಗಿಸಬೇಕಿದೆ. ಕಾಮಗಾರಿಗೆ ಹೆಚ್ಚುವರಿ 50 ಕೋಟಿ ಹಣ ಬೇಕಿದೆ.
ಹೆಚ್ಚುವರಿ ಹಣ ಬಿಡುಗಡೆಗೆ ರಾಜ್ಯ ಸರಕಾರ ಅನುಮೋದನೆ ನೀಡಲಿದೆ. ಈ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ವಿಮಾನ ನಿಲ್ದಾಣ ಅಂತಾ ಹೆಸರಿಡಲು ಕ್ಯಾಬಿನೆಟ್ ನಿರ್ಧಾರ ಮಾಡಿದೆ. ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ ಎಂದರು.