ಹತ್ತಿಗೂಡೂರಲ್ಲಿ ನೀರಿಗಾಗಿ ಹಾಹಾಕಾರ
Team Udayavani, May 18, 2022, 5:18 PM IST
ಶಹಾಪುರ: ತಾಲೂಕಿನ ಹತ್ತಿಗೂಡೂರ ಗ್ರಾಮದ ವಾರ್ಡ್ ಸಂಖ್ಯೆ 2ರಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದ್ದು ಮಹಿಳೆಯರು, ಮಕ್ಕಳಾದಿಯಾಗಿ ಹಿರಿಯರು ನೀರಿಗಾಗಿ ನಿತ್ಯ ಅಲೆದಾಡುವಂತಾಗಿದೆ.
ಪರಿಶಿಷ್ಟ ಜಾತಿ ಸಮುದಾಯದ ಕಾಲೋನಿಯಾದ ಈ ವಾರ್ಡ್ನಲ್ಲಿ ಬಿಂದಿಗೆ ನೀರಿಗೂ ರಾತ್ರಿಯಿಂದಲೇ ಸಾಲುಗಟ್ಟಬೇಕಾಗಿದೆ. ಇಲ್ಲಿನ ವಾರ್ಡ್ನಲ್ಲಿ ಚರಂಡಿ ಮಧ್ಯದಲ್ಲಿರುವ ಏಕೈಕ ನಲ್ಲಿ ನೀರಿಗಾಗಿ ಜನ ಕಾಯುವಂತಾಗಿದೆ. ಅಲ್ಲದೇ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಪಿಡಿಒ ಅಕ್ಕನಾಗಮ್ಮ ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ. ಬೇಸಿಗೆ ಕಾಲದಲ್ಲಿ ಪ್ರತಿ ವರ್ಷ ಇದೇ ಪರಿಸ್ಥಿತಿಯಾಗಿದ್ದು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದಲಿತ ಮುಖಂಡ ಶರಣರಡ್ಡಿ ಹತ್ತಿಗೂಡೂರ ದೂರಿದರು.
ತಾಪಂ ಇಒ ಗಮನಕ್ಕೆ ತಂದರೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ಬೇಸಿಗೆಯಾದ್ದರಿಂದ ಗ್ರಾಮದ ಕೊಳವೆ ಬಾವಿಗಳು ಬಂದ್ ಆಗಿವೆ. ನಲ್ಲಿ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಹೀಗಾಗಿ ನಿತ್ಯ ನೀರಿಗಾಗಿ ಮಹಿಳೆಯರ ಗೋಳಾಟ ತಪ್ಪಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ನೀರಿನ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.