ಸ್ಮಾರ್ಟ್ಸಿಟಿಯ ಓವರ್ ಹೆಡ್ ವಿದ್ಯುತ್ ಲೈನ್ಗಳು ಭೂಗತ!
ಮೆಸ್ಕಾಂನಿಂದ ಕಾಮಗಾರಿ-ನಗರ ವ್ಯಾಪ್ತಿಯ ಮಹತ್ವದ ಯೋಜನೆ
Team Udayavani, May 26, 2022, 11:59 AM IST
ಮಹಾನಗರ: ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಯಾಗುತ್ತಿರುವ ಮಂಗಳೂರು ನಗರದಲ್ಲಿ ಸ್ಮಾರ್ಟ್ ರೋಡ್ ನಿರ್ಮಾಣಕ್ಕೆ ಪೂರಕವಾಗಿ ‘ಓವರ್ ಹೆಡ್’ ವಿದ್ಯುತ್ ಲೈನ್ಗಳನ್ನು ಭೂಗತ ವಿದ್ಯುತ್ ಕೇಬಲ್’ಗೆ ಬದಲಾಯಿಸುವ ಮಹತ್ವದ ಕಾಮಗಾರಿ ನಗರದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.
ನೆಹರೂ ಮೈದಾನ ಪಕ್ಕದಲ್ಲಿರುವ ಮೆ ಸ್ಕಾಂನ 33 ಕೆ.ವಿ. ಸಾಮರ್ಥ್ಯದ ಸಬ್ ಸ್ಟೇಷನ್ನಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರದೇಶ ವ್ಯಾಪ್ತಿಯ ‘ಓವರ್ ಹೆಡ್’ ವಿದ್ಯುತ್ ಲೈನ್ಗಳನ್ನು ಭೂಗತ ವಿದ್ಯುತ್ ಕೇಬಲ್ಗೆ ಬದಲಾಯಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರಂತೆ ಪಾಂಡೇಶ್ವರದಿಂದ ಆರ್ಟಿಒ, ಕೆ.ಎಸ್. ರಾವ್ ರಸ್ತೆ, ಪಿವಿಎಸ್, ಡೊಂಗರಕೇರಿ, ಕಾರ್ ಸ್ಟ್ರೀಟ್ ವ್ಯಾಪ್ತಿಯ ವಿದ್ಯುತ್ ಕೇಬಲ್ಗಳು ಭೂಗತವಾಗುತ್ತಿದೆ. ಮೆಸ್ಕಾಂನ ‘ಮೋಡೆಲ್ ಸಬ್ ಡಿವಿಶನ್ ಪ್ರೊಜೆಕ್ಟ್’ ಎಂಬ ಯೋಜನೆ ಇದಾಗಿದೆ.
ನಗರದಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ನಡೆಯುವ ಜತೆಯಲ್ಲೇ ಇದರ ಕಾಮಗಾರಿ ನಡೆಸಲಾಗುತ್ತಿದೆ. ರಸ್ತೆ ಅಗಲೀಕರಣಕ್ಕೂ ಮುನ್ನವೇ ರಸ್ತೆ ಬದಿಯಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ನಡೆಸಲಾಗುತ್ತಿದೆ. ಶೇ.90ರಷ್ಟು ಕಾಮಗಾರಿ ಈಗಾಗಲೇ ನಡೆದಿದೆ. ರಸ್ತೆ ಬದಿಯಲ್ಲಿ ಹಾಲಿ ಇದ್ದ ವಿದ್ಯುತ್ ಕಂಬಗಳನ್ನು ತೆರವು ಮಾಡಲಾಗಿದೆ. ಬೀದಿದೀಪ ಸಂಪರ್ಕ ಇರುವ ಕಂಬಗಳ ತೆರವು ಇನ್ನಷ್ಟೇ ಆಗಬೇಕಿದೆ.
ನಗರದ ನೆಹರೂ ಮೈದಾನ, ಕಂಕನಾಡಿ, ಅತ್ತಾವರ, ಮಣ್ಣಗುಡ್ಡೆ ಕುದ್ರೋಳಿ ಸಹಿತ ಸಬ್ಸ್ಟೇಷನ್ ಇರುವ ಭಾಗಕ್ಕೆ ಭೂಗತ ವಿದ್ಯುತ್ ಕೇಬಲ್ ಮೂಲಕವೇ ಈಗಾಗಲೇ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೆ, ನಗರದಲ್ಲಿ ಇದೇ ಮೊದಲ ಬಾರಿಗೆ ನೆಹರೂ ಮೈದಾನ ಸಬ್ಸ್ಟೇಷನ್ನಿಂದ ಸರಬರಾಜಾಗುವ ವಿದ್ಯುತ್ ಸಂಪರ್ಕಗಳಿಗೆ ಇದೀಗ ಭೂಗತ ವಿದ್ಯುತ್ ಕೇಬಲ್ ಅಳವಡಿಸಲಾಗುತ್ತಿದೆ.
ಈ ಮಧ್ಯೆ, ಸ್ಮಾರ್ಟ್ಸಿಟಿ ವತಿಯಿಂದ ಮಂಗಳಾದೇವಿ ರಸ್ತೆ, ಮಾರ್ನಮಿಕಟ್ಟೆ, ಮೋರ್ಗನ್ಸ್ಗೇಟ್, ರಾಮಕೃಷ್ಣ ಮಠ ರಸ್ತೆ, ನ್ಯೂ ಪಾಂಡೇಶ್ವರ ರೋಡ್ ಪರಿಸರದಲ್ಲಿ ಭೂಗತ ಕೇಬಲ್ ಹಾಕುವ ಕೆಲಸ ಬಹುತೇಕ ಕೊನೆಯ ಹಂತದಲ್ಲಿದೆ. ಮಂಗಳಾದೇವಿ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು 4 ಕಿ.ಮೀ. ಭೂಗತ ಕೇಬಲ್ ಅಳವಡಿಸಲಾಗುತ್ತಿದೆ. ಮೆಸ್ಕಾಂ ಮೇಲುಸ್ತುವಾರಿಯಲ್ಲಿ ಸ್ಮಾರ್ಟಸಿಟಿಯಿಂದ ಈ ಕಾಮಗಾರಿ ನಡೆಸಲಾಗುತ್ತಿದೆ.
ಭೂಗತ ಕೇಬಲ್ನಿಂದ ನಗರಕ್ಕೆ ಸೌಂದರ್ಯ
ಭೂಗತ ಕೇಬಲ್ ಹಾಕುವುದರಿಂದ ರಸ್ತೆಯ ಬದಿ ಮೇಲ್ಭಾಗ ದಲ್ಲಿ ವಿದ್ಯುತ್ ತಂತಿಗಳು ಜೋತು ಬೀಳುವುದು, ಮಳೆ ಗಾಳಿಗೆ ಮರಗಳು ಬಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದು ತಪ್ಪುತ್ತದೆ. ವಿದ್ಯುತ್ ಸಂಬಂಧಿತ ಅವಘಡಗಳೂ ಕಡಿಮೆಯಾಗುತ್ತವೆ. ರಸ್ತೆ ಬದಿ ಅಲ್ಲಲ್ಲಿ ವಿದ್ಯುತ್ ಕಂಬ ಗಳು ಹಾಗೂ ಮೇಲ್ಭಾಗದಲ್ಲಿ ತಂತಿಗಳು ಇಲ್ಲದಾಗುವುದರಿಂದ ರಸ್ತೆಗಳ ಸೌಂದರ್ಯ ಕೂಡ ಹೆಚ್ಚುತ್ತದೆ. ನಗರದ ಸ್ಮಾರ್ಟ್ ನೆಸ್ ವರ್ಧನೆ ಆಗುತ್ತದೆ. ವಿದ್ಯುತ್ ವಿತರಣೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿಯೂ ಇದು ಪೂರಕ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು.
ಟೆಂಡರ್ ಹಂತದಲ್ಲಿ ಮೈದಾನ ‘ಜಿಐ ಸ್ಟೇಷನ್’
ನಗರದ ನೆಹರೂ ಮೈದಾನದ ಬಳಿ ಇರುವ ಮೆಸ್ಕಾಂನ 33 ಕೆ.ವಿ.ಸಾಮರ್ಥ್ಯದ ಸಬ್ ಸ್ಟೇಷನ್ ಅನ್ನು 110 ಕೆ.ವಿ.ಯ ಅತ್ಯಾಧುನಿಕ ತಂತ್ರಜ್ಞಾನದ ಜಿಐಎಸ್(ಗ್ಯಾಸ್ ಇನ್ಸುಲೇಟೆಡ್ ಸ್ಟೇಷನ್) ಆಗಿ ಮೇಲ್ದರ್ಜೆಗೇರಿಸುವ ಯೋಜನೆ ಟೆಂಡರ್ ಹಂತಕ್ಕೆ ಬಂದಿದೆ. ಕೆಪಿಟಿಸಿಎಲ್ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ) ವತಿಯಿಂದ ಈ ಯೋಜನೆ ಆರಂಭಕ್ಕೆ ನಿರ್ಧರಿಸಲಾಗಿದೆ.
ಕೊನೆಯ ಹಂತದಲ್ಲಿ ಕಾಮಗಾರಿ
ನೆಹರೂ ಮೈದಾನ ಸಬ್ಸ್ಟೇಷನ್ನಿಂದ ವಿವಿಧ ಕಡೆಗೆ ಸಂಪರ್ಕವಿರುವ ಓವರ್ ಹೆಡ್ ವಿದ್ಯುತ್ ಲೈನ್ ಗಳನ್ನು ಭೂಗತ ವಿದ್ಯುತ್ ಕೇಬಲ್ಗೆ ಪರಿವರ್ತಿಸುವ ಕಾಮಗಾರಿ ಇದೀಗ ಕೊನೆಯ ಹಂತದಲ್ಲಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುವ ಸಂದರ್ಭದಲ್ಲಿಯೇ ಇದರ ಕೆಲಸ ಕೂಡ ನಡೆಸಲಾಗುತ್ತಿದೆ. -ಕೃಷ್ಣರಾಜ್, ಕಾರ್ಯನಿರ್ವಾಹಕ ಎಂಜಿನಿಯರ್, ಮಂಗಳೂರು ವಿಭಾಗ ಮೆಸ್ಕಾಂ
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ