ಉಪ್ಪಿನಂಗಡಿ: ರಸ್ತೆ, ಗೋಡೌನ್ಗಳಿಗೆ ನುಗ್ಗಿದ ಮಳೆ ನೀರು
ಹೆದ್ದಾರಿ ಅಗಲಗೊಳಿಸುವ ವೇಳೆ ಮುಚ್ಚಿದ ಚರಂಡಿ
Team Udayavani, Jun 13, 2022, 1:51 AM IST
ಉಪ್ಪಿನಂಗಡಿ: ಬಿ.ಸಿ.ರೋಡು -ಅಡ್ಡಹೊಳೆ ಚತುಷ್ಪಥ ಕಾಮಗಾರಿಯ ಅವಾಂತರದಿಂದಾಗಿ ಮೊದಲ ಭಾರೀ ಮಳೆಗೆ ಉಪ್ಪಿನಂಗಡಿ ಭಾಗದಲ್ಲಿ ರಸ್ತೆ ಜಲಾವೃತಗೊಂಡು ಅಂಗಡಿ, ಕೃಷಿ ತೋಟಗಳಿಗೆ ನೀರು ನುಗ್ಗಿದೆ.
ಹೆದ್ದಾರಿ ಅಗಲ ಕಾಮಗಾರಿ ಸಂದರ್ಭ ಇದ್ದ ಚರಂಡಿಗಳನ್ನೆಲ್ಲ ಮುಚ್ಚಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯದೇ ಹಲವು ಸಮಸ್ಯೆಗಳಿಗೆ ಕಾರಣವಾಯಿತು. 34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರು, ಬಜತ್ತೂರು ಗ್ರಾಮದ ಕಾಂಚನ ಕ್ರಾಸ್ ಸಮೀಪದ ಬಾರಿಕೆ, ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ಮಂಗಳೂರು- ಬೆಂಗಳೂರು ರಾ. ಹೆದ್ದಾರಿ ಜಲಾವೃತಗೊಂಡರೆ, ಹೆದ್ದಾರಿಯಿಂದ ನಟ್ಟಿಬೈಲು ಸಂಪರ್ಕಿಸುವ ಅಡ್ಡ ರಸ್ತೆ, ಕೃಷಿ ಭೂಮಿಗಳು ಜಲಾವೃತಗೊಂಡವು.
ಉಪ್ಪಿನಂಗಡಿ ರಾ. ಹೆದ್ದಾರಿ ಸಮೀಪದ ಸತೀಶ್ ನಾಯಕ್ ಅವರ ಅಂಗಡಿ ಗೋಡೌನ್, ಅಶ್ವಿನಿ ಎಲೆಕ್ಟ್ರಿಕಲ್ಸ್ನ ನೆಲಸಾಮಗ್ರಿಗಳು ಹಾನಿಗೀಡಾಗಿವೆ.
ಭಾರೀ ಮಳೆಯಿಂದ ಪೆರಿಯಡ್ಕದಲ್ಲಿ ಚಂದ್ರ ಗೌಡ ಅವರ ಮನೆ ಬಳಿ ಸೇರಿದಂತೆ ಹಲವು ಕಡೆ ಧರೆ ಕುಸಿತ ಸಂಭವಿಸಿದೆ. ಮಠ ಎಂಬಲ್ಲಿ ವಸತಿ ಸಮುಚ್ಚಯ ಜಲಾವೃತಗೊಂಡಿದೆ. 34ನೇ ನೆಕ್ಕಿಲಾಡಿಯ ಬೊಳ್ಳಾರ್ ಎಂಬಲ್ಲಿ ಹೆದ್ದಾರಿ ಬದಿಯ ಚರಂಡಿಯಲ್ಲಿ ನೀರು ಹರಿಯಲಾಗದೇ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಟಿಟಿ ಮೇಲೆ ಬಿದ್ದ ಮರ
ಹೆದ್ದಾರಿ ಸಂಚಾರಕ್ಕೆ ತಡೆ
ಉಪ್ಪಿನಂಗಡಿ: ರವಿವಾರ ಸುರಿದ ಭಾರೀ ಗಾಳಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದು ಕೆಲ ತಾಸು ಹೆದ್ದಾರಿ ಸಂಚಾರ ತಡೆ ಹಿಡಿಯಲ್ಪಟ್ಟ ಘಟನೆ ಸಂಭವಿಸಿದೆ.
ಇಚ್ಲಂಪಾಡಿ ಬಳಿ ಸಂಚರಿಸುತ್ತಿದ್ದ ಟೆಂಪೊ ಟ್ರಾವೆಲರ್ ವಾಹನದ ಮೇಲೆ ಮರ ಬಿದ್ದು ವಾಹನ ಸಂಚಾರ ತಡೆ ಹಿಡಿಯಲ್ಪಟ್ಟಿತ್ತು. ಅದೃಷ್ಟವಶಾತ್ ವಾಹನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗದೆ ಪಾರಾಗಿದ್ದಾರೆ. ಮರ ಬಿದ್ದ ಕಾರಣ ಹೆದ್ದಾರಿಯಲ್ಲಿ ಕಿ.ಮೀ. ಉದ್ದಕ್ಕೂ ವಾಹನಗಳು ಸಾಲು ನಿಲ್ಲುವಂತಾಯಿತು.
ಸುಮಾರು ಒಂದು ಗಂಟೆ ಕಾಲ ಪೊಲೀಸರು ಹಾಗೂ ಸ್ಥಳೀಯರ ಪ್ರಯತ್ನದ ಫಲವಾಗಿ ಟಿಟಿ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಪುನರಾರಂಭಗೊಂಡಿತ್ತು.